ಬಸ್ ಮುಷ್ಕರ : ಸಾರಿಗೆ ನಿಗಮಗಳಿಗೆ 17 ಕೋಟಿ ರು. ನಷ್ಟ

By Kannadaprabha NewsFirst Published Apr 8, 2021, 7:21 AM IST
Highlights

ರಾಜ್ಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಸ್ ಮುಷ್ಕರ ನಡೆದಿದ್ದು ಇದರಿಂದ ಸಾರಿಗೆ ಇಲಾಖೆಗೆ 17 ಕೋಟಿ ನಷ್ಟವಾಗಿದೆ. ಮೊದಲ ದಿನವೇ ಭಾರೀ ನಷ್ಟ ಉಂಟಾಗಿದೆ. 

 ಬೆಂಗಳೂರು (ಏ.08):  ಸಾರಿಗೆ ನೌಕರರ ಮುಷ್ಕರದ ಮೊದಲ ದಿನವಾದ ಬುಧವಾರ ಬಸ್‌ಗಳು ರಸ್ತೆಗೆ ಇಳಿಯದ ಪರಿಣಾಮನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಸುಮಾರು 17 ಕೋಟಿ ರು. ಆದಾಯ ಖೋತಾ ಆಗಿದೆ. ಕೊರೋನಾದಿಂದ ಪ್ರಯಾಣಿಕರ ಸಂಖ್ಯೆ ಕುಸಿತವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಾರಿಗೆ ನಿಗಮಗಳಿಗೆ ಈ ಮುಷ್ಕರವೂ ದೊಡ್ಡ ಹೊಡೆತ ನೀಡಿದೆ.

4 ನಿಗಮಗಳ ಒಟ್ಟು 22 ಸಾವಿರ ಬಸ್‌ಗಳ ಪೈಕಿ ಕೇವಲ 430 ಬಸ್‌ಗಳು ಮಾತ್ರ ಪೊಲೀಸ್‌ ಭದ್ರತೆಯಲ್ಲಿ ಕೆಲ ಕಾಲ ಕಾರ್ಯಾಚರಣೆ ನಡೆಸಿವೆ. ಹೀಗಾಗಿ ಕೆಎಸ್‌ಆರ್‌ಟಿಸಿಗೆ ದಿನದ ಆದಾಯ ಸುಮಾರು 7.50 ಕೋಟಿ ರು., ಬಿಎಂಟಿಸಿಗೆ ಸುಮಾರು 3 ಕೋಟಿ ರು., ಈಶಾನ್ಯ ಸಾರಿಗೆ ನಿಗಮ ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ ತಲಾ ಸುಮಾರು 3.50 ಕೋಟಿ ರು. ಆದಾಯ ನಷ್ಟವಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಾರಿಗೆ ಮುಷ್ಕರ; ಮಾತುಕತೆಗೆ ಬಿಎಸ್‌ ಯಡಿಯೂರಪ್ಪ ಆಹ್ವಾನ ...

ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಗುರುವಾರವೂ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ, ಹೀಗಾಗಿ ಸಾರಿಗೆ ನಿಗಮಗಳಿಗೆ ಆರ್ಥಿಕ ಸ್ಥಿತಿ ಮತ್ತಷ್ಟುಬಿಗಡಾಯಿಸಲಿದೆ.

click me!