Coronavirus: ರಾಜ್ಯದಲ್ಲಿ ಕೊರೋನಾ ಅಬ್ಬರ: 3.5 ತಿಂಗಳ ಬಳಿಕ ಅತೀ ಹೆಚ್ಚು ಕೇಸ್‌!

By Kannadaprabha NewsFirst Published Jan 2, 2022, 6:23 AM IST
Highlights

*  ಹೊಸ ವರ್ಷದ ಮೊದಲ ದಿನವೇ ಕೋವಿಡ್‌ ಅಬ್ಬರ: 
*  ಒಂದೇ ವಾರದಲ್ಲಿ 4 ಪಟ್ಟು ಹೆಚ್ಚಳವಾದ ಸೋಂಕು
*  ಮಕ್ಕಳ ಲಸಿಕೆ ಅಭಿಯಾನ ಯಶಸ್ಸಿಗೆ ಸಿಎಂ ಸೂಚನೆ

ಬೆಂಗಳೂರು(ಜ.02):  ಹೊಸ ವರ್ಷದ ಮೊದಲ ದಿನವೇ ರಾಜ್ಯದಲ್ಲಿ(Karnataka) ಕೊರೋನಾ ಸೋಂಕು ಆರ್ಭಟ ಶುರುವಾಗಿದ್ದು, ಬರೋಬ್ಬರಿ ಮೂರೂವರೆ ತಿಂಗಳ ನಂತರ ಒಂದು ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಒಂದೇ ವಾರದಲ್ಲಿ ಹೊಸ ಸೋಂಕು ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಳವಾಗಿರುವುದು ಹಾಗೂ ಸಕ್ರಿಯ ಸೋಂಕಿತರ ಸಂಖ್ಯೆ 10 ಸಾವಿರ ಸಮೀಪಿಸಿರುವುದು ಆತಂಕ ಮೂಡಿಸಿದೆ.

ಶನಿವಾರ 1033 ಮಂದಿಗೆ ಸೋಂಕು ತಗುಲಿದ್ದು, ಐದು ಸೋಂಕಿತರು ಸಾವಿಗೀಡಾಗಿದ್ದಾರೆ. 354 ಮಂದಿ ಗುಣಮುಖರಾಗಿದ್ದು, ಇಂದಿಗೂ 9,386 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಶುಕ್ರವಾರ ಹೋಲಿಸಿದರೆ ಸೋಂಕು ಪರೀಕ್ಷೆಗಳು 1200 (1.19 ಲಕ್ಷಕ್ಕೆ) ಹೆಚ್ಚಳವಾಗಿದ್ದು, ಸೋಂಕಿತರ ಸಂಖ್ಯೆ 199 ಏರಿಕೆಯಾಗಿದೆ. ಇನ್ನು ಸೋಂಕಿತರ ಸಾವು ಒಂದು ಹೆಚ್ಚಾಗಿದೆ. ರಾಜ್ಯದ ಒಟ್ಟಾರೆ ಕೊರೋನಾ(Coronavirus) ಪ್ರಕರಣಗಳ ಸಂಖ್ಯೆ 30.08 ಲಕ್ಷಕ್ಕೆ, ಗುಣಮುಖರ ಸಂಖ್ಯೆ 29.6 ಲಕ್ಷಕ್ಕೆ, ಸಾವಿಗೀಡಾದವರ ಸಂಖ್ಯೆ 38,340ಕ್ಕೆ ಹೆಚ್ಚಳವಾಗಿದೆ.

Omicron Threat: ಬೆಂಗ್ಳೂರಲ್ಲಿ ಒಂದೇ ದಿನ 810 ಕೇಸ್‌: ಆರು ತಿಂಗಳಲ್ಲೇ ಗರಿಷ್ಠ..!

106 ದಿನಗಳ ಗರಿಷ್ಠ:

ಈ ಹಿಂದೆ ಸೆ.17ರಂದು 1,003 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಇಳಿಕೆಯಾಗುತ್ತಾ ಸಾಗಿ 176ಕ್ಕೆ ತಗ್ಗಿತ್ತು. ಒಮಿಕ್ರೋನ್‌(Omicron)s ಹೆಚ್ಚಳವಾದಂತೆ ಮತ್ತೆ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಾ ಸಾಗಿದೆ. ಸದ್ಯ 106 ದಿನಗಳ ಬಳಿಕ ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಡಿಸೆಂಬರ್‌ ಮೂರನೇ ವಾರ (ಡಿ.22-25) ಪ್ರಕರಣಗಳು 250 ಆಸುಪಾಸಿನಲ್ಲಿದ್ದವು. ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಸಾಗಿದ್ದು, ಡಿ.28ರಿಂದ 31ವರೆಗೂ ಕ್ರಮವಾಗಿ ನಾಲ್ಕು ದಿನ 356, 566, 707, 832 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ಮೂಲಕ ಒಂದೇ ವಾರದಲ್ಲಿ ನಿತ್ಯ ಸೋಂಕಿಗೊಳಗಾಗುವವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ.

ಎಲ್ಲಿ ಎಷ್ಟು ಕೇಸ್‌?:

ಶನಿವಾರ ಬೆಂಗಳೂರಿನಲ್ಲಿ(Bengaluru) 810, ದಕ್ಷಿಣ ಕನ್ನಡ 48, ಉಡುಪಿ 28, ಮೈಸೂರು 29, ಮಂಡ್ಯ 23, ಬೆಳಗಾವಿ 10 ಮಂದಿಗೆ ಸೋಂಕು ತಗಲಿದೆ. ಉಳಿದ 13 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು, 11 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಮೂವರು, ತುಮಕೂರು ಹಾಗೂ ಮಂಡ್ಯದಲ್ಲಿ ತಲಾ ಒಬ್ಬ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ(Death) ಎಂದು ಆರೋಗ್ಯ ಇಲಾಖೆ ಬುಲೆಟಿನ್‌ ತಿಳಿಸಿದೆ.

Maharastra Corona Alert: 'ಮಹಾ'3ನೇ ಅಲೆ: 80 ಲಕ್ಷ ಕೇಸು, 80,000 ಸಾವು ಸಾಧ್ಯತೆ

ಮಕ್ಕಳ ಲಸಿಕೆ ಅಭಿಯಾನ ಯಶಸ್ಸಿಗೆ ಸಿಎಂ ಸೂಚನೆ

ಸೋಮವಾರದಿಂದ ರಾಜ್ಯಾದ್ಯಂತ ಆರಂಭವಾಗುವ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ(Vaccine) ನೀಡುವ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಔಪಚಾರಿಕವಾಗಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆಯಂತೆ ಸೋಮವಾರ ರಾಜ್ಯಾದ್ಯಂತ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕೋವಿಡ್‌ ಹೋರಾಟಗಾರರು ಮತ್ತಿತರರು ಇದರಲ್ಲಿ ಭಾಗವಹಿಸಬೇಕು. ತಾವು ಸೇರಿದಂತೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳು ಭಾಗಿಯಾಗಲಿದ್ದೇವೆ. ರಾಜ್ಯದಲ್ಲಿ ಇದನ್ನು ಯಶಸ್ವಿಯಾಗಿ ನಡೆಸಲು ಪಣ ತೊಟ್ಟಿದ್ದೇವೆ ಎಂದು ಹೇಳಿದರು.
 

click me!