ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ ವಿಧಿವಶ

By Suvarna NewsFirst Published May 26, 2021, 2:17 PM IST
Highlights

* ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್‌ ದೊರೆಸ್ವಾಮಿ(103)ನಿಧನ
* ಹೃದಯಾಘಾತದಿಂದ H.S.ದೊರೆಸ್ವಾಮಿ ನಿಧನ.
* ಜಯದೇವದಲ್ಲಿ ಕೊನೆಯುಸಿರೆಳೆದ ದೊರೆಸ್ವಾಮಿ
* ಇತ್ತೀಚೆಗೆ ಕೊರೋನಾದಿಂದ ಗುಣಮುಖರಾಗಿದ್ದರು.

ಬೆಂಗಳೂರು, (ಮೇ 26): ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ ಇಂದು (ಬುಧವಾರ) ವಿಧಿವಶರಾಗಿದ್ದಾರೆ.103 ವರ್ಷದ ಎಚ್‌. ಎಸ್. ದೊರೆಸ್ವಾಮಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಹೃಧಯಾಘಾತದಿಂದ ಮೃತಪಟ್ಟಿದ್ದಾರೆ.

"

ಕೊರೋನಾ ಮಣಿಸಿದ 104ರ ಹಿರಿಯ ಜೀವ, ದೊರೆಸ್ವಾಮಿ ಡಿಸ್ಚಾರ್ಜ್

ಕೋವಿಡ್ ಸೋಂಕಿನಿಂದ ಗುಣಮುಖಗೊಂಡ ದೊರೆಸ್ವಾಮಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ದರಿಂದ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು.ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಕೊರೋನಾ ನಿಯಮಾವಳಿಯೊಂದಿಗೆ ದೊರೆಸ್ವಾಮಿಯವರ ನಡೆಯಲಿದೆ  ಅಂತ್ಯಸಂಸ್ಕಾರ ನಡೆಯಲಿದೆ. ಬುಧವಾರ ಸಂಜೆಯೇ ಕೊವಿಡ್ ಪ್ರೊಟೋಕಾಲ್ ಮೂಲಕ ಚಾಮರಾಜಪೇಟೆ ಚಿತಾಗಾರದಲ್ಲಿ ಸರ್ಕಾರಿ ಸಕಲ ಗೌರವಗಳ ಮೂಲಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

ದೊರೆಸ್ವಾಮಿಯೊಂದಿಗೆ ಕತ್ತಲ ಕೊನೆಯಿಂದ ಬೆಳಕಿನ ಮನೆಯೆಡೆಗೆ

ಬಿಎಸ್‌ವೈ ಸಂತಾಪ
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಟ್ವಿಟ್ ಮಾಡಿದ್ದಾರೆ.

ಡಿಸಿಎಂ ಕಂಬನಿ
ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್.ದೊರೆಸ್ವಾಮಿ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. 

ಕೆಲ ದಿನಗಳ ಹಿಂದೆಯಷ್ಟೇ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದ ದೊರೆಸ್ವಾಮಿ ಅವರು ಇವತ್ತು ಇಲ್ಲವಾದರೂ ಎಂಬ ಸುದ್ದಿ ಕೇಳಿ ಬಹಳ ನೋವಾಗಿದೆ. ತಮ್ಮ ಮನೋಸ್ಥೈರ್ಯ, ಆತ್ಮಬಲದಿಂದಲೇ ಕೊರೊನಾವನ್ನು ಗೆದ್ದು ಇಡೀ ನಾಡಿನ ಉದ್ದಗಲಕ್ಕೂ ವಿದ್ಯುತ್‌ ಸಂಚಾರ ಉಂಟು ಮಾಡಿದ್ದರು. ಅಂಥ ಚೈತನ್ಯದ ಚಿಲುಮೆಯಾಗಿದ್ದರು ದೊರೆಸ್ವಾಮಿ ಅವರು. 

ನೂರು ದಾಟಿದರೂ ಬತ್ತದ ಉತ್ಸಾಹ, ಹೋರಾಟ, ನೇರ-ದಿಟ್ಟತನಗಳು ಅವರ ಶಕ್ತಿಯಾಗಿದ್ದವು ಮಾತ್ರವಲ್ಲದೆ, ಆ ಮೂಲಕ ನಮಗೆಲ್ಲರಿಗೂ ಪ್ರೇರಣೆಯಾಗಿದ್ದರು. ಅವರೊಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದರು, ದೇಶಪ್ರೇಮಿಯಾಗಿದ್ದರು, ಪತ್ರಕರ್ತರಾಗಿದ್ದರು, ಹೋರಾಟಗಾರರಾಗಿದ್ದರು. ಇದ್ದದ್ದನ್ನು ನೇರವಾಗಿ ಪ್ರಶ್ನಿಸುವ ಎದೆಗಾರಿಕೆ ಹೊಂದಿದ್ದರು. 

ಇಂಥವರ ಅಗಲಿಕೆ ಇಡೀ ನಾಡಿಗೆ ದೊಡ್ಡ ನಷ್ಟ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಲ್ಲ ಎನ್ನುವ ಮಾತಿನಂತೆ ಅವರು ಭೌತಿಕವಾಗಿ ನಮ್ಮನ್ನು ʼಬಿಟ್ಟುʼ ಹೋದರೂ ಅವರು ನಮಗಾಗಿ ʼಇಟ್ಟುʼ ಹೋಗಿರುವ ಆದರ್ಶಗಳು, ಮೌಲ್ಯಗಳನ್ನು ಕಾಪಿಟ್ಟುಕೊಳ್ಳಬೇಕಾಗಿದೆ. ಅದು ಎಲ್ಲರ ಜವಾಬ್ದಾರಿಯೂ ಆಗಿದೆ. 

ಇಡೀ ನಾಡಿನ ಜನರಿಗೆ, ಅವರ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಹಾಗೂ ಅಗಲಿದ ಆ ಚೇತನಕ್ಕೆ ಚಿರಶಾಂತಿ ಸಿಗಲಿ ಎಂದು ಡಾ.ಅಶ್ವತ್ಥನಾರಾಯಣ ಅವರು ಪ್ರಾರ್ಥಿಸಿದ್ದಾರೆ.

click me!