ಬ್ರಿಜ್‌ಭೂಷಣ್‌ರನ್ನು ಅಧಿಕಾರದಿಂದ ದೂರವಿಡಿ: ಪ್ರಧಾನಿಗೆ ವಿನೇಶ್‌ ಒತ್ತಾಯ

Published : Mar 20, 2024, 10:02 AM IST
ಬ್ರಿಜ್‌ಭೂಷಣ್‌ರನ್ನು ಅಧಿಕಾರದಿಂದ ದೂರವಿಡಿ: ಪ್ರಧಾನಿಗೆ ವಿನೇಶ್‌ ಒತ್ತಾಯ

ಸಾರಾಂಶ

‘ನಾರಿ ಶಕ್ತಿ ಬಗ್ಗೆ ಮಾತನಾಡುವ ನೀವು ನಮಗೇಕೆ ನ್ಯಾಯ ಕೊಡಿಸುತ್ತಿಲ್ಲ. ಮಹಿಳಾ ಸಬಲೀಕರಣ ವಿಚಾರವನ್ನು ಕೇವಲ ರಕ್ಷಾ ಕವಚದಂತೆ ಬಳಸದೆ, ನಮ್ಮ ಧ್ವನಿಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವವರಿಂದ ನಮ್ಮನ್ನು ಕಾಪಾಡುತ್ತೀರಿ ಎಂದು ವಿಶ್ವಾಸವಿಟ್ಟುಕೊಂಡಿದ್ದೇವೆ’ ಎಂದು ವಿನೇಶ್‌ ಟ್ವೀಟ್‌ ಮಾಡಿದ್ದಾರೆ.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್ಐ) ಮೇಲೆ ಹೇರಿದ್ದ ಅಮಾನತ್ತನ್ನು ತೆರವುಗೊಳಿಸಿದ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ನಿರ್ಧಾರವನ್ನು ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌, ಸಾಕ್ಷಿ ಮಲಿಕ್‌ ಟೀಕಿಸಿದ್ದಾರೆ. ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸಿದ್ದ ಈ ಇಬ್ಬರು, ಸಾಮಾಜಿಕ ತಾಣಗಳಲ್ಲಿ ಮತ್ತೆ ಬ್ರಿಜ್‌ ವಿರುದ್ಧ ಹರಿಹಾಯ್ದಿದ್ದು, ಅವರನ್ನು ಅಧಿಕಾರದಿಂದ ದೂರವಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

‘ನಾರಿ ಶಕ್ತಿ ಬಗ್ಗೆ ಮಾತನಾಡುವ ನೀವು ನಮಗೇಕೆ ನ್ಯಾಯ ಕೊಡಿಸುತ್ತಿಲ್ಲ. ಮಹಿಳಾ ಸಬಲೀಕರಣ ವಿಚಾರವನ್ನು ಕೇವಲ ರಕ್ಷಾ ಕವಚದಂತೆ ಬಳಸದೆ, ನಮ್ಮ ಧ್ವನಿಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವವರಿಂದ ನಮ್ಮನ್ನು ಕಾಪಾಡುತ್ತೀರಿ ಎಂದು ವಿಶ್ವಾಸವಿಟ್ಟುಕೊಂಡಿದ್ದೇವೆ’ ಎಂದು ವಿನೇಶ್‌ ಟ್ವೀಟ್‌ ಮಾಡಿದ್ದಾರೆ.

ಬ್ರಿಜ್‌ಭೂಷಣ್‌ ಹಾಗೂ ಅವರ ಕುಟುಂಬಸ್ಥರು ಕುಸ್ತಿ ಫೆಡರೇಶನ್‌ನ ಆಡಳಿತದಿಂದ ದೂರ ಉಳಿದಿದ್ದರೂ, ಬ್ರಿಜ್‌ಭೂಷಣ್‌ರ ಆಪ್ತ ಸಂಜಯ್‌ ಸಿಂಗ್‌ ಡಬ್ಲ್ಯುಎಫ್‌ಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹುದ್ದೆಯಲ್ಲಿ ಸಂಜಯ್‌ ಸಿಂಗ್‌ ಇರುವುದು ಒಂದೇ, ಬ್ರಿಜ್‌ಭೂಷಣ್‌ ಇರುವುದೂ ಒಂದೇ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಸಾಕ್ಷಿ ಮಲಿಕ್‌ ಒತ್ತಾಯಿಸಿದ್ದಾರೆ.

ಟ್ರೋಫಿ ಗೆದ್ದ ಮಾತ್ರಕ್ಕೆ, ನಾನು ಕೊಹ್ಲಿಗೆ ಸಮನಲ್ಲ: ಸ್ಮೃತಿ ಮಂಧನಾ

ಸ್ವತಂತ್ರ ಸಮಿತಿ ವಿಸರ್ಜನೆ: ಮತ್ತೆ ಡಬ್ಲ್ಯುಎಫ್‌ಐ ಅಧಿಕಾರ

ನವದೆಹಲಿ: ಭಾರತೀಯ ಕುಸ್ತಿ ಸಂಸ್ಥೆ(ಡಬ್ಲ್ಯುಎಫ್‌ಐ)ಯನ್ನು ಈ ವರೆಗೂ ನಿಯಂತ್ರಿಸುತ್ತಿದ್ದ ಸ್ವತಂತ್ರ ಸಮಿತಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಸೋಮವಾರ ವಿಸರ್ಜಿಸಿದ್ದು, ಈ ಹಿಂದೆ ಇದ್ದ ಸಂಜಯ್‌ ಸಿಂಗ್‌ ನೇತೃತ್ವದ ಸಮಿತಿಗೆ ಅಧಿಕಾರ ನೀಡಿದೆ.

ಡಿ.21ರಂದು ಕುಸ್ತಿ ಫೆಡರೇಶನ್‌ಗೆ ಚುನಾವಣೆ ನಡೆದ ಕೆಲ ದಿನಗಳಲ್ಲೇ ಡಬ್ಲ್ಯುಎಫ್ಐಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿತ್ತು. ಸರ್ಕಾರದ ಕ್ರೀಡಾ ನೀತಿ ಮತ್ತು ತನ್ನದೇ ಸಂವಿಧಾನಿಕ ನಿಯಮ ಉಲ್ಲಂಘಿಸಿದ್ದಕ್ಕೆ ಡಬ್ಲ್ಯುಎಫ್‌ಐ ಅಮಾನತುಗೊಂಡಿತ್ತು. ಬಳಿಕ ದೇಶದಲ್ಲಿ ಕುಸ್ತಿ ಚಟುವಟಿಕೆ ಮುಂದುವರಿಸುವ ನಿಟ್ಟಿನಲ್ಲಿ ಒಲಿಂಪಿಕ್‌ ಸಂಸ್ಥೆಯು ಭೂಪೇಂದ್ರ ಸಿಂಗ್‌ ಬಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿಯನ್ನು ರಚಿಸಿತ್ತು. ಸಮಿತಿಯು ಇತ್ತೀಚೆಗಷ್ಟೇ ಆಯ್ಕೆ ಟ್ರಯಲ್ಸ್‌ ಕೂಡಾ ಆಯೋಜಿಸಿತ್ತು.

ಚಾಂಪಿಯನ್ ಆರ್‌ಸಿಬಿ ಮಹಿಳಾ ತಂಡಕ್ಕೆ ವಿಶ್ ಮಾಡಿ ಟ್ರೋಲ್ ಆದ ವಿಜಯ್ ಮಲ್ಯ!

ಆದರೆ ಜಾಗತಿಕ ಸಂಸ್ಥೆಯು ಇತ್ತೀಚೆಗಷ್ಟೇ ಡಬ್ಲ್ಯುಎಫ್‌ಐ ಮೇಲಿನ ನಿಷೇಧ ಹಿಂಪಡೆದಿರುವ ಹಿನ್ನೆಲೆಯಲ್ಲಿ ಐಒಎ ಸ್ವತಂತ್ರ ಸಮಿತಿಯನ್ನು ಬರ್ಕಾಸ್ತುಗೊಳಿಸಿ ಚುನಾವಣೆ ಮೂಲಕ ಅಧಿಕಾರಕ್ಕೇರಿದ್ದ ಸಂಜಯ್‌ ನೇತೃತ್ವದ ಸಮಿತಿಗೆ ಅಧಿಕಾರ ನೀಡಿದೆ. ಇನ್ನು ಆಯ್ಕೆ ಟ್ರಯಲ್ಸ್, ಟೂರ್ನಿಗಳೆಲ್ಲವನ್ನೂ ಡಬ್ಲ್ಯುಎಫ್‌ಐ ನೋಡಿಕೊಳ್ಳಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!