
ಮೆಲ್ಬರ್ನ್(ಡಿ.24): ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾಗಿನಿಂದ ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾಗೆ ಭುಜದ ನೋವಿದ್ದು, ಆಸ್ಪ್ರೇಲಿಯಾಗೆ ಬಂದಿಳಿದ 4 ದಿನಗಳ ಬಳಿಕ ಚುಚ್ಚು ಮದ್ದು ನೀಡಲಾಗಿತ್ತು ಎನ್ನುವ ರಹಸ್ಯವನ್ನು ಭಾರತ ತಂಡದ ಕೋಚ್ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.
ಸಂಪೂರ್ಣ ಫಿಟ್ನೆಸ್ ಇಲ್ಲದಿದ್ದರೂ ಆಸ್ಪ್ರೇಲಿಯಾಗೆ ತೆರಳಿದ ಜಡೇಜಾಗೆ ಪರ್ತ್’ನಲ್ಲಿ ನಡೆದ ಆಸ್ಪ್ರೇಲಿಯಾ ವಿರುದ್ಧ 2ನೇ ಟೆಸ್ಟ್ನಲ್ಲಿ ಅಂತಿಮ 13 ಆಟಗಾರರ ಪಟ್ಟಿಯಲ್ಲಿ ಸ್ಥಾನ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ. ಇಷ್ಟಲ್ಲದೇ ಆಸ್ಪ್ರೇಲಿಯಾದ ಎರಡೂ ಇನ್ನಿಂಗ್ಸ್ಗಳಲ್ಲಿ ಬಹುತೇಕ ಸಮಯ ಜಡೇಜಾ ಫೀಲ್ಡಿಂಗ್ ಮಾಡಿದ್ದರು. ಇದರೊಂದಿಗೆ ಭಾರತ ತಂಡ ತನ್ನ ಗಾಯಾಳು ಆಟಗಾರರ ನಿರ್ವಹಣೆಯಲ್ಲಿ ಎಡವಟ್ಟು ಮಾಡುತ್ತಿದೆ ಎನ್ನುವ ಅಂಶ ಮತ್ತೊಮ್ಮೆ ಬೆಳಕಿಗೆ ಬಂದಿದೆ.
‘ಜಡೇಜಾ ದೇಸಿ ಪಂದ್ಯಗಳನ್ನು ಆಡುತ್ತಿದ್ದಾಗಲೇ ಭುಜದ ನೋವು ಕಾಣಿಸಿಕೊಂಡಿತ್ತು. ಆದರೆ ಆ ಬಳಿಕವೂ ಅವರು ರಣಜಿ ಪಂದ್ಯಗಳನ್ನು ಆಡಿದ್ದರು. ಆಸ್ಪ್ರೇಲಿಯಾಗೆ ಆಗಮಿಸಿದ ಬಳಿಕವೂ ನೋವು ಕಡಿಮೆಯಾಗದ ಕಾರಣ, ಚುಚ್ಚುಮದ್ದು ನೀಡಲಾಯಿತು. ನೋವಿನಿಂದ ಗುಣಮುಖರಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ’ ಎಂದು ಶಾಸ್ತ್ರಿ ಭಾನುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಆಘಾತಕಾರಿ ಅಂಶವೆಂದರೆ, ಪರ್ತ್ ಟೆಸ್ಟ್ಗೂ ಮುನ್ನ ಹಾಗೂ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ, ಜಡೇಜಾ ಫಿಟ್ನೆಸ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸ್ಪಿನ್ ಬೌಲರ್ ಅನ್ನು ಏಕೆ ಕಣಕ್ಕಿಳಿಸಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗಲೂ, ಜಡೇಜಾ ಭುಜದ ನೋವಿನಿಂದ ಬಳಲುತ್ತಿದ್ದಾರೆ ಎನ್ನುವ ಸುಳಿವನ್ನು ಕೊಹ್ಲಿ ನೀಡಿರಲಿಲ್ಲ.
ಮೆಲ್ಬರ್ನ್ನಲ್ಲಿ ಕಣಕ್ಕೆ!: ನೋವಿನ ಹೊರತಾಗಿಯೂ ಜಡೇಜಾ ಫೀಲ್ಡಿಂಗ್ ಮಾಡಿದ್ದೇಕೆ ಎನ್ನುವುದಕ್ಕೆ ವಿವರಣೆ ನೀಡದ ಕೋಚ್ ಶಾಸ್ತ್ರಿ, ‘ಜಡೇಜಾ ಪರ್ತ್ ಪಂದ್ಯದ ವೇಳೆ ಶೇಖಡ 60-70ರಷ್ಟು ಫಿಟ್ ಆಗಿದ್ದರು. ಅವರು ಮುಂದಿನ ಒಂದೆರಡು ದಿನಗಳಲ್ಲಿ ಶೇ.80ರಷ್ಟು ಫಿಟ್ನೆಸ್ ಕಂಡುಕೊಂಡರೆ 3ನೇ ಪಂದ್ಯದಲ್ಲಿ ಆಡಲಿದ್ದಾರೆ’ ಎಂದಿದ್ದಾರೆ. ಇದರೊಂದಿಗೆ ಆಟಗಾರರು ಸಂಪೂರ್ಣವಾಗಿ ಫಿಟ್ ಇಲ್ಲದಿದ್ದರೂ ಅವರನ್ನು ಆಡಿಸಲಾಗುತ್ತದೆ ಎನ್ನುವ ಸತ್ಯವನ್ನು ಶಾಸ್ತ್ರಿ ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.
3ನೇ ಟೆಸ್ಟ್ಗಿಲ್ಲ ಅಶ್ವಿನ್?
ಗಾಯದ ಸಮಸ್ಯೆಯಿಂದಾಗಿ 2ನೇ ಟೆಸ್ಟ್ ತಪ್ಪಿಸಿಕೊಂಡಿದ್ದ ಆಫ್ ಸ್ಪಿನ್ನರ್ ಆರ್.ಅಶ್ವಿನ್, 3ನೇ ಟೆಸ್ಟ್ಗೂ ಅಲಭ್ಯರಾಗುವ ಸಾಧ್ಯತೆ ಇದೆ. ಮಂಗಳವಾರ ಅಶ್ವಿನ್ರ ಫಿಟ್ನೆಸ್ ಟೆಸ್ಟ್ ನಡೆಸುವುದಾಗಿ ಕೋಚ್ ಶಾಸ್ತ್ರಿ ಹೇಳಿದ್ದಾರೆ. ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆಯೂ ಇನ್ನೂ ಖಚಿತತೆ ಇಲ್ಲ ಎಂದಿರುವ ಶಾಸ್ತ್ರಿ, ಹಾರ್ದಿಕ್ ಪಾಂಡ್ಯರನ್ನು ಮೆಲ್ಬರ್ನ್ ಪಂದ್ಯದಲ್ಲಿ ಆಡಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.
3ನೇ ಟೆಸ್ಟ್ಗೆ ಮಯಾಂಕ್:
ಗಾಯಾಳು ಪೃಥ್ವಿ ಶಾ ಬದಲಿಗೆ ಭಾರತ ತಂಡ ಕೂಡಿಕೊಂಡಿರುವ ಕರ್ನಾಟಕದ ಮಯಾಂಕ್ ಅಗರ್ವಾಲ್ರನ್ನು 3ನೇ ಟೆಸ್ಟ್ನಲ್ಲಿ ಆಡಿಸುವ ಕುರಿತು ಸೋಮವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ‘ಮಯಾಂಕ್ ಅತ್ಯುತ್ತಮ ಯುವ ಆಟಗಾರ. ಭಾರತ ‘ಎ’ ಪರ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರ ದೇಸಿ ಕ್ರಿಕೆಟ್ ದಾಖಲೆಯನ್ನು ನೋಡಿದರೆ ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವುದು ತಿಳಿಯುತ್ತದೆ. ಅವರನ್ನು ಆಡಿಸುವ ಬಗ್ಗೆ ಖಂಡಿತವಾಗಿಯೂ ಗಂಭೀರ ಚರ್ಚೆ ನಡೆದಿದೆ’ ಎಂದು ಶಾಸ್ತ್ರಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.