ಫಿಫಾ ಯು-17 ವಿಶ್ವಕಪ್‌: ಕೊಲಂಬಿಯಾ ಮಣಿಸಿದ ಸ್ಪೇನ್‌ ಚಾಂಪಿಯನ್‌

By Naveen KodaseFirst Published Oct 31, 2022, 10:37 AM IST
Highlights

ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ಪಟ್ಟ ಅಲಂಕರಿಸಿದ ಸ್ಪೇನ್
ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ಫೈನಲ್‌ನಲ್ಲಿ ಕೊಲಂಬಿಯಾ ವಿರುದ್ದ ಸ್ಪೇನ್ ಜಯಭೇರಿ
ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ಟೂರ್ನಿ ಭಾರತದಲ್ಲಿ ಯಶಸ್ವಿ ಆಯೋಜನೆ
 

ನವಿ ಮುಂಬೈ: ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವ ಚಾಂಪಿಯನ್‌ ಆಗಿ ಸ್ಪೇನ್‌ ಹೊರಹೊಮ್ಮಿದೆ. ವಿಶ್ವಕಪ್‌ನ ಫೈನಲ್‌ನಲ್ಲಿ ಭಾನುವಾರ ಕೊಲಂಬಿಯಾ ವಿರುದ್ಧ 1-0 ಗೋಲಿನ ಅಂತರದಲ್ಲಿ ಸ್ಪೇನ್‌ ಗೆಲುವು ಸಾಧಿಸಿತು. ಇಲ್ಲಿನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಲಂಬಿಯಾದ ಆ್ಯನಾ ಮರಿಯಾ ಝಪಾಟ 82ನೇ ನಿಮಿಷದಲ್ಲಿ ಸ್ವಂತ ಗೋಲು ಬಾರಿಸಿ ಸ್ಪೇನ್‌ ಗೆಲುವಿಗೆ ಕಾರಣರಾದರು. ಸ್ಪೇನ್‌ಗಿದು ಸತತ 2ನೇ ಪ್ರಶಸ್ತಿ. 2018ರಲ್ಲೂ ಸ್ಪೇನ್‌ ಚಾಂಪಿಯನ್‌ ಆಗಿತ್ತು. ಇದೇ ವೇಳೆ ಜರ್ಮನಿಯನ್ನು ಶೂಟೌಟ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಸೋಲಿಸಿ ನೈಜೀರಿಯಾ 3ನೇ ಸ್ಥಾನ ಪಡೆಯಿತು.

ಪ್ರೊ ಲೀಗ್‌ ಹಾಕಿ: ಸ್ಪೇನ್‌ ವಿರುದ್ಧ ಭಾರತಕ್ಕೆ ಸೋಲು

ಭುವನೇಶ್ವರ: 2022-23ರ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತ ಮೊದಲ ಸೋಲು ಅನುಭವಿಸಿದೆ. ಭಾನುವಾರ ಸ್ಪೇನ್‌ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 2-3 ಗೋಲುಗಳಿಂದ ಪರಾಭವಗೊಂಡಿತು. 17, 27ನೇ ನಿಮಿಷದಲ್ಲಿ ಪೆನಾಲ್ಟಿಕಾರ್ನರ್‌ ಮೂಲಕ ಗೋಲು ಬಾರಿಸಿದ ಸ್ಪೇನ್‌ 2-0 ಮುನ್ನಡೆ ಪಡೆಯಿತು. 27ನೇ ನಿಮಿಷದಲ್ಲೇ ಪೆನಾಲ್ಟಿಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಭಾರತ ಖಾತೆ ತೆರೆಯಿತು. 55ನೇ ನಿಮಿಷದಲ್ಲಿ ಅಭಿಷೇಕ್‌ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು. ಆದರೆ 57ನೇ ನಿಮಿಷದಲ್ಲಿ ಸ್ಪೇನ್‌ ಮತ್ತೊಂದು ಗೋಲು ಗಳಿಸಿ ಜಯವನ್ನು ತನ್ನದಾಗಿಸಿಕೊಂಡಿತು.

ವಿಂಡೀಸ್‌ ಟೆಸ್ಟ್‌ ತಂಡಕ್ಕೆ ಚಂದ್ರಪಾಲ್‌ ಪುತ್ರ!

ಆ್ಯಂಟಿಗಾ: ವೆಸ್ಟ್‌ಇಂಡೀಸ್‌ ಟೆಸ್ಟ್‌ ತಂಡಕ್ಕೆ ದಿಗ್ಗಜ ಬ್ಯಾಟರ್‌ ಶಿವನಾರಾಯಣ ಚಂದ್ರಪಾಲ್‌ರ ಪುತ್ರ ತ್ಯಾಗನಾರಾಯಣ ಆಯ್ಕೆಯಾಗಿದ್ದಾರೆ. ಟಿ20 ವಿಶ್ವಕಪ್‌ ಮುಕ್ತಾಯಗೊಂಡ ಬಳಿಕ ನ.30ರಿಂದ ಡಿ.8ರ ವರೆಗೂ ವಿಂಡೀಸ್‌ ತಂಡ ಆಸ್ಪ್ರೇಲಿಯಾದಲ್ಲಿ 2 ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್‌ ಪರ್ತ್‌ನಲ್ಲಿ ನಡೆಯಲಿದ್ದು, 2ನೇ ಟೆಸ್ಟ್‌ ಅಡಿಲೇಡ್‌ನಲ್ಲಿ ನಡೆಯಲಿದೆ. 26 ವರ್ಷದ ಎಡಗೈ ಬ್ಯಾಟರ್‌ ತ್ಯಾಗನಾರಾಯಣ 50 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 5 ಶತಕ, 10 ಅರ್ಧಶತಕದೊಂದಿಗೆ 2669 ರನ್‌ ಕಲೆಹಾಕಿದ್ದಾರೆ.

Pro Kabaddi League ಮತ್ತೊಂದು ಥ್ರಿಲ್ಲರ್ ಪಂದ್ಯ ಗೆದ್ದ ಬೆಂಗಳೂರು ಬುಲ್ಸ್‌

ನಿವೃತ್ತಿ ಬಳಿಕ ಕೊಕೇನ್‌ ದಾಸನಾಗಿದ್ದೆ: ಅಕ್ರಂ!

ನವದೆಹಲಿ: ಪಾಕಿಸ್ತಾನದ ದಿಗ್ಗಜ ವೇಗಿ ವಾಸೀಂ ಅಕ್ರಂ ತಾವು ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಮಾದಕ ವಸ್ತು ಕೊಕೇನ್‌ನ ದಾಸರಾಗಿದ್ದಾಗಿ ಹೇಳಿಕೊಂಡಿದ್ದು, 2009ರಲ್ಲಿ ತಮ್ಮ ಮೊದಲ ಪತ್ನಿಯ ನಿಧನದ ಬಳಿಕ ಕೊಕೇನ್‌ ಸೇವನೆಯನ್ನು ನಿಲ್ಲಿಸಿದೆ ಎಂದಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಆತ್ಮಕಥೆಯಲ್ಲಿ ಈ ಆಘಾತಕಾರಿ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ‘ನನ್ನ ಪತ್ನಿಗೆ ಸುಳ್ಳು ಹೇಳಿ ನಾನು ಪಾರ್ಟಿಗಳಿಗೆ ಹೋಗುತ್ತಿದ್ದೆ. ಅಲ್ಲಿ ಕೊಕೇನ್‌ ಸೇವಿಸುತ್ತಿದ್ದೆ. ಒಂದು ದಿನ ನನ್ನ ಜೇಬಿನಲ್ಲಿ ಕೊಕೇನ್‌ ಪ್ಯಾಕೆಟ್‌ ಇದ್ದಿದ್ದನ್ನು ಪತ್ನಿ ಹೂಮಾ ನೋಡಿದರು. ವೈದ್ಯರ ಬಳಿ ಚಿಕಿತ್ಸೆಗೆ ಕೊರೆದೊಯ್ದರು. ಆದರೆ ವೈದ್ಯರು ನನ್ನಿಂದ ಹಣ ಪಡೆದು ಸರಿಯಾದ ಚಿಕಿತ್ಸೆ ನೀಡಲಿಲ್ಲ. ಆದರೆ ಪತ್ನಿ ನಿಧನರಾದ ಬಳಿಕ ನಾನು ಕೊಕೇನ್‌ ಸೇವನೆ ನಿಲ್ಲಿಸಿದೆ’ ಎಂದು ಅಕ್ರಂ ಬರೆದುಕೊಂಡಿದ್ದಾರೆ.

click me!