ಕುಸ್ತಿ ಸಮಸ್ಯೆ ಪರಿಹರಿಸಿ: ಜಾಗತಿಕ ಸಂಸ್ಥೆಯ ಮೊರೆ ಹೋದ ಭಾರತದ ರೆಸ್ಲರ್ಸ್‌

By Kannadaprabha NewsFirst Published Jan 3, 2024, 11:24 AM IST
Highlights

ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದಿರುವ ಕುಸ್ತಿಪಟುವೊಬ್ಬರ ಈ ಬಗ್ಗೆ ಪತ್ರ ಬರೆದಿದ್ದು, ‘ಮೂವರು(ಭಜರಂಗ್‌, ಸಾಕ್ಷಿ, ವಿನೇಶ್‌) ಕುಸ್ತಿಪಟುಗಳ ಸುಳ್ಳು ಆರೋಪದಿಂದಾಗಿ ಭಾರತದ ಕುಸ್ತಿಯೇ ನಾಶವಾಗಿದೆ. ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ರಿಂದ ನಾವು ಯಾವುದೇ ಕಿರುಕುಳ ಅನುಭವಿಸಿಲ್ಲ ಎಂದಿದ್ದಾರೆ.

ನವದೆಹಲಿ(ಜ.03): ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ)ನಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಬಗೆಹರಿಸಿ ಎಂದು ಭಾರತದ ಹಲವು ಕುಸ್ತಿಪಟುಗಳು ಜಾಗತಿಕ ಕುಸ್ತಿ ಆಡಳಿತ(ಯುಡಬ್ಲ್ಯುಡಬ್ಲ್ಯು) ಮೊರೆ ಹೋಗಿದ್ದಾರೆ. 

ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದಿರುವ ಕುಸ್ತಿಪಟುವೊಬ್ಬರ ಈ ಬಗ್ಗೆ ಪತ್ರ ಬರೆದಿದ್ದು, ‘ಮೂವರು(ಭಜರಂಗ್‌, ಸಾಕ್ಷಿ, ವಿನೇಶ್‌) ಕುಸ್ತಿಪಟುಗಳ ಸುಳ್ಳು ಆರೋಪದಿಂದಾಗಿ ಭಾರತದ ಕುಸ್ತಿಯೇ ನಾಶವಾಗಿದೆ. ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ರಿಂದ ನಾವು ಯಾವುದೇ ಕಿರುಕುಳ ಅನುಭವಿಸಿಲ್ಲ. ಕೆಲ ಕುಸ್ತಿಪಟುಗಳನ್ನು ಭೇಟಿಯಾದಾಗಲೂ ಅವರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ. ಕೂಡಲೇ ಮಧ್ಯಪ್ರವೇಶಿಸಿ ಭಾರತದ ಕುಸ್ತಿಯನ್ನು ಉಳಿಸಿ’ ಎಂದು ಮನವಿ ಮಾಡಿದ್ದಾರೆ. ಇತರ ಕೆಲ ರೆಸ್ಲರ್‌ಗಳು ಕೂಡಾ ಯುಡಬ್ಲ್ಯುಡಬ್ಲ್ಯುಗೆ ಮನವಿ ಪತ್ರ ಸಲ್ಲಿಸಿದ್ದಾಗಿ ತಿಳಿದುಬಂದಿದೆ.

ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿ ಕರ್ನಾಟಕದ ಕ್ರೀಡಾ ಸಾಧಕರು

ಜಾಗ್ರೆಬ್‌ ಕುಸ್ತಿ ಕೂಟಕ್ಕೆ ಭಜರಂಗ್, ಅಂತಿಮ್ ಇಲ್ಲ

ನವದೆಹಲಿ: ಜನವರಿ 10ರಿಂದ 14ರ ವರೆಗೆ ಕ್ರೊವೇಷಿಯಾದಲ್ಲಿ ನಡೆಯಲಿರುವ ಜಾಗ್ರೆಬ್ ಓಪನ್ ಟೂರ್ನಿಗೆ 13 ಸದಸ್ಯರ ಭಾರತ ತಂಡವನ್ನು ಕುಸ್ತಿ ಸಂಸ್ಥೆಯ ಸ್ವತಂತ್ರ ಸಮಿತಿ ಮಂಗಳವಾರ ಪ್ರಕಟಿಸಿದೆ. ಭಜರಂಗ್ ಪೂನಿಯ, ಅಂತಿಮ್‌ ಸೇರಿದಂತೆ ಪ್ರಮುಖರು ಟೂರ್ನಿಯಿಂದ ಹೊರಗುಳಿದಿದ್ದಾರೆ. ಫ್ರೀಸ್ಟೈಲ್‌ನಲ್ಲಿ ಅಮನ್, ಯಶ್‌, ದೀಪಕ್, ವಿಕ್ಕಿ ಸುಮಿತ್, ಗ್ರೀಕೊ ರೋಮನ್‌ನಲ್ಲಿ ನೀರಜ್, ವಿಕಾಸ್, ಜ್ಞಾನೇಂದರ್, ಸುನಿಲ್, ನರೇಂದರ್ ಚೀಮಾ, ನವೀನ್, ಮಹಿಳೆಯರ ವಿಭಾಗದಲ್ಲಿ ಸೋನಂ, ರಾಧಿಕ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

ಹಾಕಿ ಟೂರ್ನಿ: ಭಾರತ ತಂಡಕ್ಕೆ ರಾಜ್ಯದ ರಾಹೀಲ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಸಿದ್ಧತೆಗಾಗಿ ಭಾರತ ಪುರುಷರ ಹಾಕಿ ತಂಡ ಜ.14ರಿಂದ ಫ್ರಾನ್ಸ್‌, ನೆದರ್‌ಲೆಂಡ್ಸ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ 4 ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ದ.ಆಫ್ರಿಕಾದಲ್ಲಿ ನಡೆಯಲಿರುವ ಟೂರ್ನಿಗೆ ಭಾರತ 39 ಸಂಭಾವ್ಯ ಆಟಗಾರರ ತಂಡ ಪ್ರಕಟಿಸಲಾಗಿದ್ದು, ಕರ್ನಾಟಕದ ಮೊಹಮದ್‌ ರಾಹೀಲ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟೂರ್ನಿಗೂ ಮುನ್ನ ಭಾರತೀಯ ಆಟಗಾರರು ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ 11 ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.28ಕ್ಕೆ ಟೂರ್ನಿ ಕೊನೆಗೊಳ್ಳಲಿದೆ.

ಶಾರುಖ್ ಸೇರಿ ದಿಗ್ಗಜರ ಹಿಂದಿಕ್ಕಿದ ಕೊಹ್ಲಿಗೆ ಅತೀ ಜನಪ್ರಿಯ ಏಷ್ಯನ್ ಪರ್ಸನಾಲಿಟಿ ಕಿರೀಟ!

Pro Kabaddi League: ಡೆಲ್ಲಿಗೆ ತಲೆಬಾಗಿದ ಜೈಂಟ್ಸ್‌

ನೋಯ್ದಾ: ರೈಡರ್‌ಗಳ ಚುರುಕಿನ ದಾಳಿ, ರಕ್ಷಣಾಪಡೆಯ ಆತ್ಯಾಕರ್ಷಕ ಆಟ ದಬಾಂಗ್‌ ಡೆಲ್ಲಿಗೆ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ 5ನೇ ಗೆಲುವು ತಂದುಕೊಟ್ಟಿದೆ.

ಮಂಗಳವಾರ ಗುಜರಾತ್‌ ಜೈಂಟ್ಸ್‌ ವಿರುದ್ಧ ಡೆಲ್ಲಿಗೆ 35-28 ಅಂಕಗಳ ಗೆಲುವು ಲಭಿಸಿತು. ಆರಂಭದಲ್ಲಿ ಜೈಂಟ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಅಲ್ಲದೆ ಮೊದಲಾರ್ಧಕ್ಕೆ 16-14ರಿಂದ ಮುನ್ನಡೆ ಪಡೆದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಜೈಂಟ್ಸ್‌ಗೆ ತೀವ್ರ ಪೈಪೋಟಿ ನೀಡಿದ ಡೆಲ್ಲಿ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು. ಆಶು ಮಲಿಕ್‌ 11, ಮಂಜೀತ್‌ 9 ರೈಡ್‌ ಅಂಕ ಗಳಿಸಿ ಡೆಲ್ಲಿಗೆ ಗೆಲುವು ತಂದುಕೊಟ್ಟರು. ಗುಜರಾತ್‌ 10 ಪಂದ್ಯಗಳಲ್ಲಿ 4ನೇ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಬಾಕಿಯಾಗಿದೆ. ಅತ್ತ ಡೆಲ್ಲಿ 3ನೇ ಸ್ಥಾನಕ್ಕೇರಿತು.

ಇಂದಿನ ಪಂದ್ಯಗಳು

ಹರ್ಯಾಣ ಸ್ಟೀಲರ್ಸ್-ಜೈಪುರ, ರಾತ್ರಿ 8ಕ್ಕೆ

ಯುಪಿ ಯೋಧಾಸ್‌-ಪುಣೇರಿ ಪಲ್ಟನ್‌, ರಾತ್ರಿ 9ಕ್ಕೆ
 

click me!