
ನವದೆಹಲಿ(ಜು.23): ಭಜರಂಗ್ ಪೂನಿಯಾ ಹಾಗೂ ವಿನೇಶ್ ಫೋಗಾಟ್ಗೆ ಏಷ್ಯನ್ ಗೇಮ್ಸ್ಗೆ ನೇರ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಇದರಿಂದ ಆಯ್ಕೆ ತಾರತಮ್ಯ ಪ್ರಶ್ನಿಸಿದ್ದ ಯುವ ಕುಸ್ತಿಪಟುಗಳಾದ ಅಂತಿಮ್ ಪಂಘಲ್ ಹಾಗೂ ಸುಜೀತ್ ಕಲ್ಕಲ್ಗೆ ಹಿನ್ನಡೆಯುಂಟಾಗಿದೆ.
ಪ್ರತಿಭಟನೆಯಿಂದಾಗಿ ಹಲವು ಸಮಯದಿಂದ ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಳ್ಳದಿದ್ದರೂ ಏಷ್ಯಾಡ್ನ ಪುರುಷರ 65 ಕೆ.ಜಿ. ವಿಭಾಗದ ಕುಸ್ತಿಗೆ ಭಜರಂಗ್, ಮಹಿಳೆಯರ 53 ಕೆ.ಜಿ. ವಿಭಾಗಕ್ಕೆ ವಿನೇಶ್ಗೆ ಆಯ್ಕೆ ಟ್ರಯಲ್ಸ್ ಇಲ್ಲದೇ ನೇರ ಆಯ್ಕೆ ಕೊಡುಗೆ ನೀಡಲಾಗಿತ್ತು. ಆದರೆ ಈ ಎರಡೂ ವಿಭಾಗಗಳಲ್ಲಿ ಆಯ್ಕೆ ನಿರೀಕ್ಷೆಯಲ್ಲಿದ್ದ ಸುಜೀತ್ ಹಾಗೂ ಅಂತಿಮ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿ ಶನಿವಾರಕ್ಕೆ ಆದೇಶ ಕಾಯ್ದಿರಿಸಿದ್ದ ನ್ಯಾ.ಸುಬ್ರಮಣ್ಯಮ್ ಪ್ರಸಾದ್, ಅರ್ಜಿಯನ್ನು ತಳ್ಳಿ ಹಾಕಿದರು.
ಸುಪ್ರೀಂ ಮೊರೆ
ನೇರ ಆಯ್ಕೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವ ಕುಸ್ತಿಪಟುಗಳು ಸದ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಅಂತಿಮ್ ಪಂಘಲ್ ಮಾಹಿತಿ ನೀಡಿದ್ದು, ಸುಪ್ರೀಂನಲ್ಲಿ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಟ್ರಯಲ್ಸ್ನಲ್ಲಿ ಅಂತಿಮ್ಗೆ ಜಯ
ಕುಸ್ತಿಪಟುಗಳಿಗೆ ಶನಿವಾರ ಆಯ್ಕೆ ಟ್ರಯಲ್ಸ್ ನಡೆದಿದ್ದು, 53 ಕೆ.ಜಿ. ವಿಭಾಗದಲ್ಲಿ ಅಂತಿಮ್ ಗೆದ್ದಿದ್ದಾರೆ. ಆದರೆ ಈ ವಿಭಾಗದಲ್ಲಿ ವಿನೇಶ್ಗೆ ನೇರ ಆಯ್ಕೆ ನೀಡಿದ್ದರಿಂದ ಅಂತಿಮ್ ಮೀಸಲು ಆಟಗಾರ್ತಿಯಾಗಿ ಏಷ್ಯಾಡ್ಗೆ ತೆರಳಬೇಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂತಿಮ್, ‘ನಾನು ಹಲವು ಪಂದ್ಯ ಗೆದ್ದು ಆಯ್ಕೆಯಾಗಿದ್ದೇನೆ. ಹೀಗಾಗಿ ಮೀಸಲು ಆಟಗಾರ್ತಿಯಾಗಿ ಹೋಗಬೇಕಿರುವುದು ನಾನಲ್ಲ. ಟ್ರಯಲ್ಸ್ನಲ್ಲಿ ಪಾಲ್ಗೊಳ್ಳದವರು ಮೀಸಲು ಸ್ಥಾನದಲ್ಲಿರಲಿ. ವಿನೇಶ್ಗೆ ಮಾತ್ರ ಏಕೆ ವಿನಾಯಿತಿ. ಇದು ನ್ಯಾಯವೇ’ ಎಂದು ಕಿಡಿಕಾರಿದ್ದಾರೆ.
Emerging Asia Cup 2023: ಭಾರತ- ಪಾಕಿಸ್ತಾನ ಫೈನಲ್ ಕದನ ಇಂದು
ಕೊರಿಯಾ ಓಪನ್: ಫೈನಲ್ಗೆ ಸಾತ್ವಿಕ್-ಚಿರಾಗ್
ಸೋಲ್(ಕೊರಿಯಾ): ಭಾರತದ ತಾರಾ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಇಂಡೋನೇಷ್ಯಾ ಸೂಪರ್ 1000 ಹಾಗೂ ಸ್ವಿಸ್ ಓಪನ್ ಸೂಪರ್ 500 ಟೂರ್ನಿ ಗೆದ್ದಿರುವ ಭಾರತದ ಜೋಡಿ ಈ ವರ್ಷದ 3ನೇ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ ಪ್ರವೇಶಿಸಿತು.
ಶನಿವಾರ ನಡೆದ ಪುರುಷರ ಡಬಲ್ಸ್ ಸೆಮೀಸ್ನಲ್ಲಿ ವಿಶ್ವ ನಂ.2 ಚೀನಾದ ಲಿಯಾಂಗ್ ವೀ ಕೆಂಗ್-ವಾಂಗ್ ಚಾಂಗ್ ವಿರುದ್ಧ ವಿಶ್ವ ನಂ.3 ಸಾತ್ವಿಕ್-ಚಿರಾಗ್ 21-15, 24-22 ಅಂತರದಲ್ಲಿ ಗೆಲುವು ಸಾಧಿಸಿದರು. ಈ ಮೊದಲು ಚೀನಾ ಜೋಡಿ ವಿರುದ್ಧ 2 ಬಾರಿ ಸೋತಿದ್ದ ಭಾರತದ ಜೋಡಿಗೆ ಇದು ಮೊದಲ ಗೆಲುವು. ಫೈನಲ್ನಲ್ಲಿ ಸಾತ್ವಿಕ್-ಚಿರಾಗ್ಗೆ ವಿಶ್ವ ನಂ.1, ಇಂಡೋನೇಷ್ಯಾದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ಸವಾಲು ಎದುರಾಗಲಿದೆ.
Ind vs WI 2nd Test: ಟೀಂ ಇಂಡಿಯಾದ ತಾಳ್ಮೆ ಪರೀಕ್ಷಿಸಿದ ವಿಂಡೀಸ್..!
ಕಿರಿಯರ ಸ್ಯಾಫ್ ಫುಟ್ಬಾಲ್: ‘ಬಿ’ ಗುಂಪಿನಲ್ಲಿ ಭಾರತ
ನವದೆಹಲಿ: ಸೆ.21ರಿಂದ 30ರ ವರೆಗೆ ನೇಪಾಳದ ಕಠ್ಮಂಡುನಲ್ಲಿ ನಡಯಲಿರುವ ಅಂಡರ್-19 ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್ಶಿಪ್ನ ಡ್ರಾ ಬಿಡುಗಡೆಗೊಂಡಿದ್ದ, ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. 6 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಭಾರತದ ಜೊತೆ ಗುಂಪಿನಲ್ಲಿ ಬಾಂಗ್ಲಾದೇಶ, ಭೂತಾನ್ ತಂಡಗಳಿವೆ. ನೇಪಾಳ, ಮಾಲ್ಡೀವ್ಸ್, ಪಾಕಿಸ್ತಾನ ‘ಎ’ ಗುಂಪಿನಲ್ಲಿವೆ. ಇದೇ ವೇಳೆ ಸೆ.1ರಿಂದ 10ರ ವರೆಗೆ ಭೂತಾನ್ನಲ್ಲಿ ನಡೆಯಲಿರುವ ಅಂಡರ್-19 ವಿಭಾಗದ ಟೂರ್ನಿಯಲ್ಲಿ ಭಾರತ ‘ಎ’ ಗುಂಪಿನಲ್ಲಿದೆ. ನೇಪಾಳ, ಬಾಂಗ್ಲಾದೇಶ ಕೂಡಾ ಇದೇ ಗುಂಪಿನಲ್ಲಿದ್ದು, ಇನ್ನುಳಿದ 3 ತಂಡಗಳಾದ ಭೂತಾನ್, ಮಾಲ್ಡೀವ್ಸ್, ಪಾಕಿಸ್ತಾನ ‘ಬಿ’ ಗುಂಪಿನಲ್ಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.