ಆರ್ಚರಿ ವಿಶ್ವಕಪ್‌: ಬೆಳ್ಳಿ ಗೆದ್ದ ಭಾರತದ ಪ್ರಥಮೇಶ್‌ ಜಾವ್ಕರ್‌

By Kannadaprabha NewsFirst Published Sep 11, 2023, 11:06 AM IST
Highlights

ಶನಿವಾರ ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 20 ವರ್ಷದ ಜಾವ್ಕರ್‌, ಡೆನ್ಮಾರ್ಕ್‌ನ ಮಥಾಯಸ್‌ ಫುಲ್ಲರ್‌ಟನ್‌ ವಿರುದ್ಧ ವೀರೋಚಿತ ಸೋಲನುಭವಿಸಿದರು. ಫೈನಲ್‌ನಲ್ಲಿ 148-148(10-10) ಅಂಕದೊಂದಿಗೆ ಸಮಬಲ ಸಾಧಿಸಿದರೂ ಮಥಾಯಸ್‌ರ ಬಾಣ ಗುರಿಯ ಕೇಂದ್ರ ಭಾಗಕ್ಕೆ ಹತ್ತಿರವಾಗಿದ್ದ ಕಾರಣ ವಿಜೇತರಾಗಿ ಹೊರಹೊಮ್ಮಿದರು.

ಹೆರ್ಮೊಸಿಲೊ(ಮೆಕ್ಸಿಕೊ): ಭಾರತದ ಪ್ರಥಮೇಶ್‌ ಜಾವ್ಕರ್‌ ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ ಫೈನಲ್‌ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ಶನಿವಾರ ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 20 ವರ್ಷದ ಜಾವ್ಕರ್‌, ಡೆನ್ಮಾರ್ಕ್‌ನ ಮಥಾಯಸ್‌ ಫುಲ್ಲರ್‌ಟನ್‌ ವಿರುದ್ಧ ವೀರೋಚಿತ ಸೋಲನುಭವಿಸಿದರು. ಫೈನಲ್‌ನಲ್ಲಿ 148-148(10-10) ಅಂಕದೊಂದಿಗೆ ಸಮಬಲ ಸಾಧಿಸಿದರೂ ಮಥಾಯಸ್‌ರ ಬಾಣ ಗುರಿಯ ಕೇಂದ್ರ ಭಾಗಕ್ಕೆ ಹತ್ತಿರವಾಗಿದ್ದ ಕಾರಣ ವಿಜೇತರಾಗಿ ಹೊರಹೊಮ್ಮಿದರು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಜಾವ್ಕರ್‌ ಅವರು ವಿಶ್ವ ನಂ.1, ಹಿಂದಿನ ಆವೃತ್ತಿಯ ಚಾಂಪಿಯನ್‌ ಮೈಕ್‌ ಸ್ಕ್ಲೋಶರ್‌ರನ್ನು ಸೋಲಿಸಿ ಫೈನಲ್‌ಗೇರಿದ್ದರು.

ಕಿಂಗ್ಸ್‌ ಕಪ್‌: ಲೆಬನಾನ್‌ ವಿರುದ್ಧ ಸೋತ ಭಾರತ

ಚಿಯಾಂಗ್‌ ಮಾಯ್‌(ಥಾಯ್ಲೆಂಡ್‌): 49ನೇ ಆವೃತ್ತಿಯ ಕಿಂಗ್ಸ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ 4ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. 4 ದೇಶಗಳು ಪಾಲ್ಗೊಂಡ ಟೂರ್ನಿಯಲ್ಲಿ ಭಾನುವಾರ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಲೆಬನಾನ್‌ ವಿರುದ್ಧ 0-1 ಗೋಲುಗಳಿಂದ ಪರಾಭವಗೊಂಡಿತು. ಈಗಾಗಲೇ ಈ ವರ್ಷ ಲೆಬನಾನ್‌ ವಿರುದ್ಧ ಬೆಂಗಳೂರು ಹಾಗೂ ಭುವನೇಶ್ವರದಲ್ಲಿ 2 ಪಂದ್ಯ ಗೆದ್ದಿದ್ದ ಭಾರತ ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಸೋಲನುಭವಿಸಿತು. ಭಾರತ ಈ ಮೊದಲು 1977 ಮತ್ತು 2019ರ ಕಿಂಗ್ಸ್‌ ಕಪ್‌ನಲ್ಲಿ 3ನೇ ಸ್ಥಾನ ಪಡೆದಿತ್ತು.

US Open 2023 ಅಮೆರಿಕದ ಕೊಕೊ ಗಾಫ್‌ಗೆ ಒಲಿದ ಚೊಚ್ಚಲ ಯುಎಸ್ ಓಪನ್ ಕಿರೀಟ

ಇಂಡಿಯನ್‌ ಗ್ರ್ಯಾನ್‌ಪ್ರಿ: ರಾಜ್ಯದ ಜೆಸ್ಸಿಗೆ ಚಿನ್ನ

ಚಂಡೀಗಢ: ಭಾನುವಾರ ಇಲ್ಲಿ ನಡೆದ ಇಂಡಿಯನ್‌ ಗ್ರ್ಯಾನ್‌ ಪ್ರಿ-5 ಅಥ್ಲೆಟಿಕ್ಸ್‌ ಕೂಟದಲ್ಲಿ ಕರ್ನಾಟಕದ ಹೈಜಂಪ್‌ ಪಟು ಜೆಸ್ಸಿ ಸಂದೇಶ್‌ ಚಿನ್ನದ ಪದಕ ಜಯಿಸಿದ್ದಾರೆ. ಸಂದೇಶ್‌ 2.11 ಮೀ. ಎತ್ತರಕ್ಕೆ ನೆಗೆದರೆ, ಒಡಿಶಾದವರಾದ ಸ್ವಾಧಿಯನ್‌ ಕುಮಾರ್‌(2.06 ಮೀ.) ಬೆಳ್ಳಿ, ನಿಕಿಲ್‌ ದಾಸ(1.95 ಮೀ.) ಕಂಚು ಪಡೆದರು. ಇದೇ ವೇಳೆ ಪುರುಷರ 400 ಮೀ. ಓಟದಲ್ಲಿ ರಾಜ್ಯದ ನಿಹಾಲ್‌ ಜೊಯೆಲ್‌ 46.76 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕಂಚು ತಮ್ಮದಾಗಿಸಿಕೊಂಡರು. ಡೆಲ್ಲಿಯ ಅಮೊಲ್‌ ಜಾಕೊಬ್‌(45.92 ಸೆ.)ಗೆ ಚಿನ್ನ, ಕೇರಳದ ನಿರ್ಮಲ್‌(46.55 ಸೆ.)ಗೆ ಬೆಳ್ಳಿ ಲಭಿಸಿತು. ಮಹಿಳೆಯರ 100 ಮೀ. ಓಟದಲ್ಲಿ ಕರ್ನಾಟದಕ ದಾನೇಶ್ವರಿ 11.94 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕಂಚು ಪಡೆದರು.

US Open 2023: ನೋವಾಕ್ ಜೋಕೋವಿಚ್ vs ಮೆಡ್ವೆಡೆವ್ ಫೈನಲ್ ಫೈಟ್

ಕರ್ನಾಟಕ ಟಿಟಿ ಸಂಸ್ಥೆಗೆ ರಕ್ಷಾ ರಾಮಯ್ಯ ಅಧ್ಯಕ್ಷ

ಧಾರವಾಡ: ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ರಕ್ಷಾ ರಾಮಯ್ಯ ಅವರು ಕರ್ನಾಟಕ ರಾಜ್ಯ ಟೇಬಲ್‌ ಟೆನಿಸ್‌ ಸಂಸ್ಥೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಗೆ ಭಾನುವಾರ ಧಾರವಾಡದಲ್ಲಿ ಚುನಾವಣೆ ನಡೆಯಿತು. ಅವರ ಅಧಿಕಾರಾವಧಿ 6 ವರ್ಷಗಳ ಕಾಲ ಇರಲಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಈವರೆಗೆ ಸಂಸ್ಥೆಗೆ ಅಧ್ಯಕ್ಷರಾಗಿದ್ದರು.

click me!