
ನವದೆಹಲಿ(ಡಿ.27): ಮುಂದಿನ ವರ್ಷ ಫೆಬ್ರವರಿಯಲ್ಲಿ ನಿಗದಿಯಾಗಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವ ಗುಂಪು 1ರ ಪ್ಲೇ-ಆಫ್ ಪಂದ್ಯ ಆಡಲು ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಕೇಂದ್ರ ಕ್ರೀಡಾ ಸಚಿವಾಲಯದ ಸಲಹೆ ಕೇಳಿದೆ.
ಪಂದ್ಯವನ್ನು ಪಾಕ್ನಿಂದ ಸ್ಥಳಾಂತರಗೊಳಿಸುವಂತೆ ಎಐಟಿಎ ಜಾಗತಿಕ ಟೆನಿಸ್ ಮಂಡಳಿಗೆ ಮನವಿ ಮಾಡಿದ್ದರೂ, ಅದು ಫಲ ನೀಡಿಲ್ಲ. ಹೀಗಾಗಿ ಭಾರತ ತಂಡ ಪಾಕ್ಗೆ ಹೋಗುವುದು ಅನಿವಾರ್ಯ. ಹೀಗಾಗಿ ಪಾಕ್ಗೆ ಟೆನಿಸ್ ತಂಡವನ್ನು ಕಳುಹಿಸಬಹುದೇ ಎಂಬುದರ ಬಗ್ಗೆ ಎಐಟಿಎ ಕೇಂದ್ರದ ಮೊರೆ ಹೋಗಿದೆ. ‘ಪಾಕ್ಗೆ ತಂಡ ಕಳುಹಿಸುವ ಬಗ್ಗೆ ಕೇಂದ್ರದ ಸಲಹೆ ಕೇಳಿದ್ದೇವೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ’ ಎಂದು ಎಐಟಿಎ ತಿಳಿಸಿದೆ.
ಎರಡನೇ ಟೆಸ್ಟ್: ಆಸೀಸ್ 318ಕ್ಕೆ ಆಲೌಟ್, ಪಾಕ್ ಎಚ್ಚರಿಕೆಯ ಆರಂಭ
ಭಾರತ ಹಾಗೂ ಪಾಕ್ ನಡುವಿನ ಪಂದ್ಯ ಫೆ.3 ಮತ್ತು 4ಕ್ಕೆ ನಿಗದಿಯಾಗಿವೆ. ಇತ್ತಂಡಗಳು ಕೊನೆ ಬಾರಿ 2019ರಲ್ಲಿ ಮುಖಾಮುಖಿಯಾಗಿವೆ. ಅಂದಿನ ಪಂದ್ಯ ಪಾಕ್ನಲ್ಲಿ ನಿಗದಿಯಾಗಿತ್ತಾದರೂ, ಬಳಿಕ ಅದನ್ನು ಕಜಕಸ್ತಾನಕ್ಕೆ ಸ್ಥಳಾಂತರಿಸಲಾಗಿತ್ತು.
ಸ್ಪೇನ್ನಲ್ಲಿ ಭಾರತ ಚೆಸ್ ಪಟುಗಳ ಲ್ಯಾಪ್ಟಾಪ್, ಪಾಸ್ಪೋರ್ಟ್ ಕಳ್ಳತನ!
ಮ್ಯಾಡ್ರಿಡ್: ಸ್ಪೇನ್ನಲ್ಲಿ ಚೆಸ್ ಆಡಲು ಹೋಗಿದ್ದ ಭಾರತೀಯ ಆಟಗಾರರ ಅಪಾರ್ಟ್ಮೆಂಟ್ ಕೋಣೆಗಳಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಲ್ಯಾಪ್ಟಾಪ್, ಪಾಸ್ಪೋರ್ಟ್ ಎಗರಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರತದಿಂದ 70 ಮಂದಿ ಕೂಟದಲ್ಲಿ ಪಾಲ್ಗೊಂಡಿದ್ದು, ಈ ಪೈಕಿ ಗ್ರ್ಯಾಂಡ್ಮಾಸ್ಟರ್ ಸಂಕಲ್ಪ್ ಗುಪ್ತಾ, ಇಂಟರ್ನ್ಯಾಷನಲ್ ಮಾಸ್ಟರ್ ದುಷ್ಯಂತ್ ಶರ್ಮಾ ಸೇರಿ 6 ಮಂದಿಯ ಕೋಣೆಗಳಲ್ಲಿ ಕಳ್ಳತನವಾಗಿದೆ.
ಖೇಲ್ರತ್ನ, ಅರ್ಜುನ ಪ್ರಶಸ್ತಿ ವಾಪಾಸ್ ಮಾಡುವ ನಿರ್ಧಾರ ಘೋಷಿಸಿದ ವಿನೇಶ್ ಪೋಗಟ್!
ನಗದು, ಎಲೆಕ್ಟ್ರಾನಿಕ್ ಉಪಕರಣಗಳನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಡಿ.19ರಂದು ಮೊದಲ ಬಾರಿ ಇಬ್ಬರ ಕೋಣೆಯಲ್ಲಿ ಕಳ್ಳತನವಾಗಿದ್ದು, 3 ದಿನಗಳ ಬಳಿಕ ಇತರರು ತಂಗಿದ್ದ ಕೋಣೆಯನ್ನೂ ದೋಚಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆಯೋಜಕರಿಗೆ ಆಟಗಾರರು ಮಾಹಿತಿ ನೀಡಿದರೂ ಅವರಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಕೂಡಾ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾಗಿ ದೂರಿದ್ದಾರೆ.
ಪಲ್ಟನ್ ಅಬ್ಬರಕ್ಕೆ ಪಾಟ್ನಾ ಪಲ್ಟಿ!
ಚೆನ್ನೈ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟನ್ ಅಭೂತಪೂರ್ವ ಪ್ರದರ್ಶನ ಮುಂದುವರಿಸಿದ್ದು, 6ನೇ ಗೆಲುವಿನೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಮಂಗಳವಾರ ಪುಣೆಗೆ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ 46-28 ಅಂಕಗಳ ಗೆಲುವು ಲಭಿಸಿತು. ಇದರೊಂದಿಗೆ ತಂಡದ ಅಂಕ ಗಳಿಕೆ 31ಕ್ಕೆ ಏರಿಕೆಯಾಗಿದೆ. ಅತ್ತ ಪಾಟ್ನಾ 7 ಪಂದ್ಯಗಳಲ್ಲಿ 4ನೇ ಸೋಲನುಭವಿಸಿದ್ದು, 9ನೇ ಸ್ಥಾನದಲ್ಲೇ ಉಳಿದಿದೆ.
ಆರಂಭದಿಂದಲೂ ರೈಡಿಂಗ್ ಹಾಗೂ ಡಿಫೆನ್ಸ್ನಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಪುಣೆ, ಪಂದ್ಯದುದ್ದಕ್ಕೂ ಎದುರಾಳಿ ಮೇಲೆ ಅಧಿಪತ್ಯ ಸಾಧಿಸಿತು. ಮೊದಲ 20 ನಿಮಿಷಗಳ ಆಟ ಮುಕ್ತಾಯಕ್ಕೆ 22-15ರ ಮುನ್ನಡೆಯಲ್ಲಿದ್ದ ತಂಡ ಬಳಿಕವೂ ಅಂಕ ಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ. ಪಂಕಜ್ 10, ಮೋಹಿತ್ 7 ರೈಡ್ ಅಂಕ ಸಂಪಾದಿಸಿದರೆ, ಮೊಹಮದ್ ರೆಜಾ ಚಿಯಾನ್(06), ನಾಯಕ ಅಸ್ಲಂ(06) ಆಲ್ರೌಂಡ್ ಪ್ರದರ್ಶನ ತಂಡಕ್ಕೆ ದೊಡ್ಡ ಅಂತರದ ಜಯ ತಂದುಕೊಟ್ಟಿತು. ಪಾಟ್ನಾದ ಸುಧಾಕರ್ 5, ಸಚಿನ್ 4 ರೈಡ್ ಅಂಕ ಗಳಿಸಿದರು.
ಇಂದಿನ ಪಂದ್ಯಗಳು
ಜೈಪುರ-ದಬಾಂಗ್ ಡೆಲ್ಲಿ, ರಾತ್ರಿ 8ಕ್ಕೆ
ತಮಿಳ್ ತಲೈವಾಸ್-ಗುಜರಾತ್, ರಾತ್ರಿ 9ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.