ನಾಯಿ ಬಾಲಕ್ಕೆ ಪಟಾಕಿ ಕಟ್ಟಿವಿಕೃತಿ: ಮೂವರು ವಿದ್ಯಾರ್ಥಿಗಳ ವಶ

By Kannadaprabha NewsFirst Published Oct 31, 2019, 2:53 PM IST
Highlights

ಪ್ರಾಣಿಗಳ ಹಿಂಸೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವುದು ಅಪರೂಪದಲ್ಲಿ ಅಪರೂಪ. ಆದರೆ ಇದೇ ಮೊದಲ ಬಾರಿಗೆ ಭದ್ರಾವತಿ ಪೊಲೀಸರು ನಾಯಿಯೊಂದಕ್ಕೆ ನೀಡಿದ ಹಿಂಸೆಗೆ ಸಂಬಂಧಿಸಿದಂತೆ ಮೂರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ(ಅ.31): ಪ್ರಾಣಿಗಳ ಹಿಂಸೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವುದು ಅಪರೂಪದಲ್ಲಿ ಅಪರೂಪ. ಆದರೆ ಇದೇ ಮೊದಲ ಬಾರಿಗೆ ಭದ್ರಾವತಿ ಪೊಲೀಸರು ನಾಯಿಯೊಂದಕ್ಕೆ ನೀಡಿದ ಹಿಂಸೆಗೆ ಸಂಬಂಧಿಸಿದಂತೆ ಮೂರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ನಾಯಿ ಬಾಲಕ್ಕೆ ಹನುಮಂತನ ಬಾಲದ ಪಟಾಕಿ ಅಂಟಿಸಿ ಬೆಂಕಿ ಹಚ್ಜಿ ವಿಕೃತಿ ಮೆರೆದಿದ್ದ ಬಿಆರ್‌ಪಿಯ ಮೂವರು ವಿದ್ಯಾರ್ಥಿಗಳನ್ನು ಶಿವಮೊಗ್ಗ ಅನಿಮಲ್‌ ರೆಸ್ಕೂ್ಯಕ್ಲಬ್‌ ದೂರಿನ ಮೇರೆಗೆ ಭದ್ರಾವತಿ ಪೊಲೀಸರು ಬಂಧಿಸಿ, ಮುಚ್ಚಳಿಕೆ ಬರೆಸಿಕೊಂಡು ಬಳಿಕ ಬಿಡುಗಡೆ ಮಾಡಿದ್ದಾರೆ. ಆರೋಪಿಗಳನ್ನು ನಿತಿನ್‌, ಮಿಥುನ್‌ ಮತ್ತು ಭರತ್‌ ಎಂದು ಗುರುತಿಸಲಾಗಿದೆ.

ನಡೆದಿದ್ದೇನು?:

ಬಿಆರ್‌ಪಿ ಯ ಸಿಂಗನಮನೆ ಬಳಿ ನಾಯಿಯೊಂದಕ್ಕೆ ಮೂರು ಜನರು ಹನುಮಂತನ ಬಾಲದ ಪಟಾಕಿಯನ್ನು ಸಿಕ್ಕಿಸಿ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ವಿಷಯ ಶಿವಮೊಗ್ಗ ಅನಿಮಲ್‌ ರೆಸ್ಕೂ್ಯ ಕ್ಲಬ್‌ ಅಂಗಳಕ್ಕೆ ತಲುಪಿತು. ಇದರ ಸದಸ್ಯರಾದ ಪ್ರಸಾದ್‌, ದಿಲೀಪ್‌ ನಾಡಿಗ್‌ ಮತ್ತು ನಾಗರಾಜ್‌ ಸದರಿ ವೀಡಿಯೋ ಪರಿಶೀಲಿಸಿ ಸ್ಥಳಕ್ಕೆ ಭೇಟಿ ನೀಡಿದರು. ಘಟನೆಯ ಸತ್ಯಾಸತ್ಯತೆಯನ್ನು ಅರಿತು ಭದ್ರಾವತಿ ಪೊಲೀಸರಿಗೆ ದೂರು ನೀಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ದೀಪಾವಳಿ: ಬೆಂಗಳೂರಲ್ಲಿ ಒಂದೇ ದಿನ 99 ಮಂದಿಗೆ ಕಣ್ಣಿಗೆ ಹಾನಿ

ಈ ದೂರನ್ನು ಸ್ವೀಕರಿಸಿದ ಪೊಲೀಸರು ವೀಡಿಯೋದಲ್ಲಿನ ಮೋಟಾರ್‌ ಬೈಕ್‌ನ ಬೆನ್ನು ಹತ್ತಿ ವಿಳಾಸ ಪತ್ತೆ ಹಚ್ಚಿದರು. ಆಗ ಮೂವರು ಯಾರೆಂದು ಗೊತ್ತಾಯಿತು. ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದರು. ಆ ಬಳಿಕ ಇವರುಗಳು ವಿದ್ಯಾರ್ಥಿಗಳಾಗಿದ್ದು, ಅವರ ಭವಿಷ್ಯದ ಮೇಲೆ ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕೆ ಮೂರು ಮಂದಿಯಿಂದ ತಪ್ಪೊಪ್ಪಿಗೆ ಬರೆಸಿಕೊಂಡು, ದಂಡ ಕಟ್ಟಿಸಿಕೊಂಡು ಬಿಡಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಪ್ರಸಾದ್‌ ಅವರು ಪ್ರಾಣಿಗಳ ಮೇಲಿನ ಕ್ರೌರ್ಯ ನಿತ್ಯ ನಡೆಯುತ್ತಿರುತ್ತದೆ. ಕಳೆದ ವರ್ಷ ಹಾರ್ನಹಳ್ಳಿಯಲ್ಲಿ ತಪ್ಪು ತಿಳುವಳಿಕೆಯಿಂದ ಜೀವಂತ ನಾಯಿಯಿನ್ನು ಹೂಳಲಾಗಿತ್ತು. ಇಂತಹ ಘಟನೆ ನಡೆಯಬಾರದು ಎಂಬುದು ನಮ್ಮ ಅನಿಸಿಕೆ. ಮುಂದೆ ಇಂತಹ ಘಟನೆ ನಡೆಯಬಾರದು ಎಂಬುದಷ್ಟೇ ನಮ್ಮ ಉದ್ದೇಶ. ನಡೆದಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದರು. ಪಟಾಟಿ ಹಚ್ಚಿಸಿಕೊಂಡು ನಾಯಿಗೆ ಏನೂ ಆಗಿಲ್ಲ ಎಂದು ತಿಳಿದು ಬಂದಿದೆ.

ವಿಜಯಪುರ: ಲಕ್ಷ್ಮೀ ಪೂಜೆ ವೇಳೆ ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿ ತಗ್ಲಾಕೊಂಡ..!

click me!