ದಾಖಲೆಯ ಭಾರಿ ಮೊತ್ತಕ್ಕೆ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ಖರೀದಿಸಿದ ಪ್ರಸನ್ನ ಕುಮಾರ್

By Anusha KbFirst Published Jun 14, 2022, 11:17 AM IST
Highlights

ಹೋರಿ ಹಬ್ಬದಲ್ಲಿ ರಾಜ್ಯಾದ್ಯಂತ ಹೆಸರು ಮಾಡಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿಯನ್ನು ತಾಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ ಪ್ರಸನ್ನಕುಮಾರ್ ಎಂ. ಸಮನವಳ್ಳಿ  ಅವರು ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದ್ದಾರೆ. 

ಶಿವಮೊಗ್ಗ: ಹೋರಿ, ಹಸು, ಮೇಕೆಗಳ ಮೇಲೆ ಅನೇಕರು ಸಾಕಷ್ಟು ದುಡ್ಡು ಹಾಕಿ ಖರೀದಿಸಿದ್ದನ್ನು ನಾವು ಈಗಾಗಲೇ ನೋಡಿದ್ದೇವೆ. ಅದರಲ್ಲೂ ಹೋರಿ ಬೆದರಿಸುವ ಹಬ್ಬಗಳಲ್ಲಿ ಭಾಗವಹಿಸುವ ಹೋರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹಾಗೆಯೇ ಈಗ ಹೋರಿ ಹಬ್ಬದಲ್ಲಿ ರಾಜ್ಯಾದ್ಯಂತ ಹೆಸರು ಮಾಡಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿಯನ್ನು (Chamundi Express Hori)  ತಾಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ ಪ್ರಸನ್ನಕುಮಾರ್ ಎಂ. ಸಮನವಳ್ಳಿ (Prasanna Kumar M. Samanavalli) ಅವರು ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದ್ದಾರೆ. 

ಹೋರಿ ಹಬ್ಬದ ಅಖಾಡ ಯಾವುದೇ ಇರಲಿ, ಚಾಮುಂಡಿ ಎಕ್ಸ್‌ಪ್ರೆಸ್ ಬಂದಿತೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಉತ್ಸಾಹ. ಅಂತಹ ಅಭಿಮಾನಿಗಳ ಪಡೆ ಹೊಂದಿರುವ ಚಿಕ್ಕಲಿಂಗದಹಳ್ಳಿಯ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿಯನ್ನು ಪ್ರಸನ್ನ ಕುಮಾರ್‌ ಅವರು 18 ಲಕ್ಷ ರೂ.ಗೆ ಖರೀದಿ ಮಾಡಿದ್ದಾರೆ.  ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಹೋರಿಯು ಬಹುತೇಕ ಎಲ್ಲಾ ಹೋರಿ ಹಬ್ಬಗಳಲ್ಲೂ ಬಂಪರ್ ಬಹುಮಾನ ಪಡೆದಿದೆ. ನಿಯತ್ತಿನ ಹಬ್ಬಕ್ಕೆ ಚಾಮುಂಡಿ ಎಕ್ಸ್‌ಪ್ರೆಸ್ ಸಾಕ್ಷಿಯಾಗಿದೆ. ಈ ಹೋರಿಯ ವಿಶೇಷ ಅಂದ್ರೆ ಅಖಾಡದಲ್ಲಿ ಪೀಪಿ, ಬಲೂಲ್, ಜೂಲಗಳನ್ನು ಹೊತ್ತು ಯಾರೊಬ್ಬರ ಕೈಗೂ ಸಿಗದೇ ಓಡುತ್ತೆ. ಮನೆಯಲ್ಲಿ ಮಾತ್ರ ಸೌಮ್ಯ ಸ್ವಭಾದಿಂದ ಇರುತ್ತದೆ.  

ಫೈರ್‌ ಬುಲ್ ಫೆಸ್ಟಿವಲ್‌: ಯುವಕನ ಎತ್ತಿ ಬಿಸಾಕಿದ ಹೋರಿ, ವಿಡಿಯೋ ವೈರಲ್

ಜನಪದ ಕ್ರೀಡೆಯಾಗಿರುವ ಹೋರಿ ಹಬ್ಬ ಉಳಿಯಬೇಕು. ತಾವು ಸಹ ಹೋರಿ ಹಬ್ಬದ ಅಭಿಮಾನಿಯಾಗಿದ್ದು, ಈಗಾಗಲೇ ತಮ್ಮ ಬಳಿ ಏಕದಂತ, ರೇಣುಕಾಂಬ ಎಕ್ಸ್‌ಪ್ರೆಸ್‌ (Renukambha express), ಸಮನವಳ್ಳಿ ಅಧ್ಯಕ್ಷ (samanavalli adhyaksha), ಸಮನವಳ್ಳಿ ಸಾಹುಕಾರ (samanavalli sahukara) ಎಂಬ ಹೋರಿಗಳಿವೆ. ತಮ್ಮ ಪುತ್ರ ಪರೀಕ್ಷಿತ್ (Parikshith) ಕೆಲ ದಿನಗಳಿಂದ ಆಟವಾಡುವಾಗ ಚಾಮುಂಡಿ ಎಕ್ಸ್‌ಪ್ರೆಸ್ ಎಂದು ಆಟವಾಡುತ್ತಿದ್ದನು. ಅಷ್ಟರಲ್ಲೇ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿ ಮಾರಾಟಕ್ಕಿರುವ ವಿಷಯ ತಿಳಿದು ಖರೀದಿಸಿದ್ದೇನೆ. ತಮ್ಮ ಪುತ್ರನ ಮೂಲಕ ಭಗವಂತ ನುಡಿಸಿದ್ದಾನೆ ಎಂದು ಭಾವಿಸುತ್ತೇನೆ.

Turuvekere: 26 ಲಕ್ಷ ನೀಡಿ ಹಳ್ಳಿಕಾರ್‌ ಹೋರಿ ಖರೀದಿಸಿದ ಶಾಸಕ ಜಯರಾಮ್‌!

ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿಯು ಇನ್ನು ಮುಂದೆ ಸಮನವಳ್ಳಿ ಚಾಮುಂಡಿ ಎಕ್ಸ್‌ಪ್ರೆಸ್‌ ಹೆಸರಿನಲ್ಲಿ ಅಖಾಡಕ್ಕೆ ಇಳಿಯಲಿದೆ. ಹೋರಿ ನೋಡಲು ತಾಲೂಕು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ನಿತ್ಯ ನೂರಾರು ಮಂದಿ ಆಗಮಿಸುತ್ತಿದ್ದಾರೆ. ಹೋರಿಯಿಂದ ಮತ್ತಷ್ಟು ಪ್ರಚಾರವಾಗುತ್ತಿದ್ದೇನೆ. ನನ್ನ ಮನೆಗೆ ಆಗಮಿಸಿದ ಅದೃಷ್ಟ ಲಕ್ಷ್ಮಿ ಎಂದೇ ಭಾವಿಸುತ್ತೇನೆ ಎನ್ನುತ್ತಾರೆ ಹೋರಿ ಮಾಲೀಕ ಪ್ರಸನ್ನ ಕುಮಾರ್ ಸಮನವಳ್ಳಿ ಅವರು.  ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿಯು ತಾಲೂಕಿಗೆ ಆಗಮಿಸಿರುವುದು ಹೋರಿ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ಕಳೆದ ಫೆಬ್ರವರಿಯಲ್ಲಿ ಶಾಸಕ ಮಸಾಲ ಜಯರಾಮ್‌ (Masala Jayaram) ಅವರು 26 ಲಕ್ಷ ರೂ.ಗೆ ಏಕಲವ್ಯ ಎಂಬ ಹೆಸರಿನ ಹಳ್ಳಿಕಾರ್‌ ಹೋರಿಯನ್ನು ಖರೀದಿ ಮಾಡಿದ್ದರು. ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಎರಡು ಎತ್ತುಗಳನ್ನು ಜಯರಾಮ್ ಖರೀದಿಸಿದ್ದರು. ಟಿ.ನರಸೀಪುರ ತಾಲೂಕು ಬನ್ನೂರಿನ ಕೃಷ್ಣೇಗೌಡ (Krishnegowda) ಎಂಬುವವರು ಸಾಕಿದ್ದ ಮೂರು ವರ್ಷದ ಹೋರಿ ಏಳು ಅಡಿ ಎತ್ತರವಿದ್ದು, ಸಾಕಷ್ಟು ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಸಹ ಪಡೆದಿದೆ. ಈ ಹೋರಿಗೆ ಫೆ.20ರಂದು ಮಂಡ್ಯದ (Mandya) ಬನ್ನೂರು ಗ್ರಾಮದಲ್ಲಿ ಅದ್ಧೂರಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ 6.5 ಲಕ್ಷ ರೂ. ಬೆಲೆಯ ಅಮೃತ್ ಮಹಲ್ ತಳಿ ಜೋಡಿ ಎತ್ತುಗಳನ್ನು ಶಾಸಕ ಜಯರಾಮ್ ಖರೀದಿಸಿದ್ದಾರೆ. ಅಂಕಲಕೊಪ್ಪ ಗ್ರಾಮ ಶಾಸಕರ ತೋಟದಲ್ಲಿ ಜಾನುವಾರುಗಳು ಇವೆ.

click me!