ಕುವಿವಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಶೀಘ್ರ ಶುರು

By Kannadaprabha NewsFirst Published Oct 20, 2019, 1:22 PM IST
Highlights

ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್‌ ಸೇರಿದಂತೆ ಇತರೆ ಉನ್ನತ ಉದ್ಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವಿಯಲ್ಲಿ ನಿರಂತರವಾಗಿ ತರಬೇತಿ ನೀಡಲು ಆಲೋಚಿಸಲಾಗಿದೆ

ಶಿವಮೊಗ್ಗ (ಅ.20):  ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್‌ ಸೇರಿದಂತೆ ಇತರೆ ಉನ್ನತ ಉದ್ಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವಿಯಲ್ಲಿ ನಿರಂತರವಾಗಿ ತರಬೇತಿ ನೀಡಲು ಆಲೋಚಿಸಲಾಗಿದ್ದು, ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ವಿವಿಯಲ್ಲಿ ಶೀಘ್ರದಲ್ಲಿಯೇ ಆರಂಭಿಸಲಿದ್ದೇವೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪೊ›. ಬಿ.ಪಿ. ವೀರಭದ್ರಪ್ಪ ತಿಳಿಸಿದರು.

ರಾಜ್ಯ ಸರ್ಕಾರದ ಎಸ್‌ಸಿಪಿ, ಟಿಎಸ್‌ಪಿ ಅನುದಾನದಡಿ ವಿವಿಯ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅಭಿವೃದ್ಧಿ ಘಟಕದಿಂದ ಶನಿವಾರ ಪೊ›. ಎಸ್‌.ಪಿ. ಹಿರೇಮಠ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತರಬೇತಿ ಕೇಂದ್ರದ ವತಿಯಿಂದ ಎಸ್‌ಎಸ್‌ಸಿ, ಬ್ಯಾಂಕಿಂಗ್‌, ನೆಟ್‌ ಮತ್ತು ಸ್ಲೆಟ್‌ ಪರೀಕ್ಷೆಗಳು ಸೇರಿದಂತೆ ಇತರೆ ಉದ್ಯೋಗಗಳಿಗೆ ವಿಶೇಷವಾದ ಕಿರು ಅವಧಿ ಕೋರ್ಸ್‌ಗಳನ್ನು ನಡೆಸಿ ವೃತ್ತಿಪರ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕುಲಸಚಿವ ಪ್ರೊ. ಎಸ್‌.ಎಸ್‌. ಪಾಟೀಲ್‌ ಮಾತನಾಡಿ, ಜ್ಞಾನಗಳಿಕೆಗೆ ಪದವಿ ಕೋರ್ಸ್‌ಗಳು ಬುನಾದಿ ಹಾಕಿದರೆ, ಸ್ಪರ್ಧಾತ್ಮಕ ಪರೀಕ್ಷೆಗಳು ಕೌಶಲ್ಯಗಳನ್ನು ಕಲಿಸುವ ಸಾಧನಗಳಾಗಿವೆ. ವಿವಿಗೆ ಆಗಮಿಸುವ ಸವಲತ್ತು ವಂಚಿತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸಂವಹನ, ಕಂಪ್ಯೂಟರ್‌, ಭಾಷಾ ಬಳಕೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಕಲಿಸುವ ಮೂಲಕ ಉದ್ಯೋಗ ಜಗತ್ತಿಗೆ ಸಮರ್ಥವಾಗಿ ಅವರನ್ನು ತಯಾರು ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೋ. ವೆಂಕಟೇಶ್ವರುಲು, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪೊ›. ಗುರುಲಿಂಗಯ್ಯ, ಡಾ. ಉದ್ದಗಟ್ಟಿವೆಂಕಟೇಶ್‌, ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಬಿಸಿಎ ಸ್ಟಡಿ ಸೆಂಟರ್‌ನ ಡಾ. ಗುರುರಾಜ್‌ ಎಂ. ಬುಲಬುಲೆ, ಪ್ರಶಾಂತ್‌ ಮೊರಟಗಿ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.

click me!