
ವೃದ್ಧಾಪ್ಯ ಎಂಬುದು ಜೀವನದ ಅತ್ಯಂತ ಅನುಭವಿ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಹಿರಿಯ ನಾಗರಿಕರು ಎದುರಿಸುತ್ತಿರುವ ಅತ್ಯಂತ ಗಂಭೀರ ಹಾಗೂ ಕಡೆಗಣಿಸಲ್ಪಟ್ಟ ಸಮಸ್ಯೆಯೆಂದರೆ ಅದು ಒಂಟಿತನ. ವೃದ್ಧರು ನಾಲ್ಕು ಜನರ ನಡುವೆ ಅಥವಾ ಸ್ವಂತ ಕುಟುಂಬದೊಂದಿಗೆ ವಾಸಿಸುತ್ತಿದ್ದರೂ ಈ ಒಂಟಿತನ ಅವರನ್ನು ಆವರಿಸಿಕೊಳ್ಳುತ್ತಿರುವುದು ವೈದ್ಯಕೀಯ ಜಗತ್ತನ್ನು ತೀವ್ರ ಚಿಂತೆಗೆ ಈಡುಮಾಡಿದೆ.
ಸೀತಾರಾಮ್ ಭಾರ್ತಿಯಾ ಆಸ್ಪತ್ರೆಯ ವೃದ್ಧಾಶ್ರಮ ವಿಭಾಗದ ಹಿರಿಯ ಸಲಹೆಗಾರ ಡಾ. ಹರ್ಜೀತ್ ಸಿಂಗ್ ಭಟ್ಟಿ ಅವರ ಪ್ರಕಾರ, ಒಂಟಿತನ ಎಂಬುದು ಕೇವಲ ಒಬ್ಬಂಟಿಯಾಗಿ ಕೊಠಡಿಯಲ್ಲಿ ವಾಸಿಸುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ, ತಾನು ವಾಸಿಸುತ್ತಿರುವ ವಾತಾವರಣದಲ್ಲಿ ನಿರ್ಲಕ್ಷಿಸಲ್ಪಟ್ಟಾಗ, ಅಪೇಕ್ಷಿತ ಭಾವನಾತ್ಮಕ ಸಂಪರ್ಕ ಸಿಗದಿದ್ದಾಗ ಉಂಟಾಗುವ ಆಂತರಿಕ ಕೊರತೆಯಾಗಿದೆ. ಬದಲಾಗುತ್ತಿರುವ ವಿಭಕ್ತ ಕುಟುಂಬ ವ್ಯವಸ್ಥೆ, ನಗರೀಕರಣ ಹಾಗೂ ಮಕ್ಕಳು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವುದು ವೃದ್ಧರಲ್ಲಿ ಕೇವಲ ದೈಹಿಕ ದೂರವನ್ನಷ್ಟೇ ಅಲ್ಲ, ಮನಸ್ಸಿನ ನಡುವೆಯೂ ಕಂದಕ ಸೃಷ್ಟಿಸಿದೆ. ಸಂಗಾತಿಯ ಅಗಲಿಕೆ, ದೀರ್ಘಕಾಲದ ಅನಾರೋಗ್ಯ ಮತ್ತು ನಿವೃತ್ತಿಯು ಈ ಸಮಸ್ಯೆಯ ಆಳವನ್ನು ಹೆಚ್ಚಿಸಿದೆ.
ದೆಹಲಿಯ ಏಮ್ಸ್ ನವದೆಹಲಿ ರಾಷ್ಟ್ರೀಯ ವೃದ್ಧಾಪ್ಯ ಕೇಂದ್ರದ ಪ್ರಾಧ್ಯಾಪಕ ಡಾ. ಅವಿನಾಶ್ ಚಕ್ರವರ್ತಿ ಅವರು ವೈಜ್ಞಾನಿಕ ಕೋನದಿಂದ ಈ ಸಮಸ್ಯೆಯನ್ನು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ, ಒಂಟಿತನವನ್ನು ವೃದ್ಧಾಪ್ಯದ ಸಹಜ ಪರಿಣಾಮವೆಂದು ನಿರ್ಲಕ್ಷಿಸದೆ, ಅದನ್ನೊಂದು ಆರೋಗ್ಯ ಸಂಬಂಧಿತ ಕಾಯಿಲೆಯಂತೆ ಕಾಣಬೇಕು. ಕೇಳುವ ಶಕ್ತಿ ಕಡಿಮೆಯಾಗುವುದು, ಸರಿಯಾಗಿ ನಡೆಯಲಾಗದಿರುವುದು ಮತ್ತು 'ನಾವು ಯಾರಿಗೂ ಬೇಡ' ಎಂಬ ಕೀಳರಿಮೆ ಹಿರಿಯರನ್ನು ಸಾಮಾಜಿಕವಾಗಿ ಇನ್ನಷ್ಟು ಪ್ರತ್ಯೇಕಿಸುತ್ತದೆ. ಇದು ಅವರ ನಿದ್ರೆ, ಆಹಾರ ಕ್ರಮ ಹಾಗೂ ಮನಸ್ಥಿತಿಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಐಎಂಎಸ್-ಬಿಎಚ್ಯು (IMS-BHU) ನ ವೃದ್ಧಾಪ್ಯ ವಿಭಾಗದ ಸ್ಥಾಪಕ ಮುಖ್ಯಸ್ಥ ಡಾ. ಅನೂಪ್ ಸಿಂಗ್ ಅವರು ಒಂಟಿತನದ ಭಯಾನಕ ದೈಹಿಕ ಪರಿಣಾಮಗಳನ್ನು ವಿವರಿಸುತ್ತಾರೆ. ದೀರ್ಘಕಾಲದ ಏಕಾಂಗಿತನವು ದೇಹದಲ್ಲಿ ನಿರಂತರ ಸೈಕಾಲಜಿಕಲ್ ಸ್ಟ್ರೆಸ್ (ಒತ್ತಡ) ಉಂಟುಮಾಡುತ್ತದೆ. ಇದರಿಂದಾಗಿ: ಅಧಿಕ ರಕ್ತದೊತ್ತಡ, ಹೃದ್ರೋಗದ ಅಪಾಯ ಮತ್ತು ನಿದ್ರಾಹೀನತೆ ಹೆಚ್ಚಾಗುತ್ತದೆ. ಅರಿವಿನ ಕುಸಿತ, ಆತಂಕ, ಖಿನ್ನತೆ ಮತ್ತು ಆಲ್ಝೈಮರ್ಸ್ನಂತಹ ಮನೋವ್ಯಾಧಿಗಳಿಗೆ ಇದು ಹಾದಿಮಾಡಿಕೊಡುತ್ತದೆ. ಇದು ಕೇವಲ ನಗರಗಳಿಗೆ ಸೀಮಿತವಾಗಿರದೆ, ಯುವಕರು ವಲಸೆ ಹೋದ ಕಾರಣ ಗ್ರಾಮೀಣ ಭಾಗದಲ್ಲೂ ವೃದ್ಧರಿಗೆ ಒಡನಾಟವಿಲ್ಲದೆ ತೀವ್ರವಾಗಿ ಕಾಡುತ್ತಿದೆ.
ವೃದ್ಧರ ಈ ಮಾನಸಿಕ ಮತ್ತು ಭಾವನಾತ್ಮಕ ಬಿಕ್ಕಟ್ಟಿಗೆ ಪರಿಹಾರ ನಮ್ಮ ಮನೆಯಿಂದಲೇ ಆರಂಭವಾಗಬೇಕಿದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಅಥವಾ ಮೌನವಾಗಿರುವುದನ್ನು ಕುಟುಂಬಸ್ಥರು ಸೂಕ್ಷ್ಮವಾಗಿ ಗಮನಿಸಬೇಕು. ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಅವರೊಂದಿಗೆ ಮುಕ್ತವಾಗಿ ಮಾತನಾಡುವುದು. ಊಟವನ್ನು ಒಟ್ಟಿಗೆ ಮಾಡುವುದು ಮತ್ತು ಹಿರಿಯರನ್ನು ಸಣ್ಣಪುಟ್ಟ ಕುಟುಂಬ ನಿರ್ಧಾರಗಳಲ್ಲಿ ಭಾಗಿ ಮಾಡಿಕೊಳ್ಳುವುದು. ಅವರ ಅನುಭವಗಳಿಗೆ ಸೂಕ್ತ ಗೌರವ ನೀಡಿ, 'ನಿಮ್ಮ ಅಗತ್ಯ ನಮಗಿದೆ' ಎಂಬ ಭರವಸೆ ಮೂಡಿಸುವುದು. ಹಿರಿಯರಿಗೆ ಬೇಕಿರುವುದು ಕೇವಲ ಆಸ್ಪತ್ರೆಯ ಔಷಧಗಳಲ್ಲ, ಬದಲಿಗೆ ಪ್ರೀತಿ, ಆಲಿಸುವ ಕಿವಿಗಳು ಮತ್ತು ಅರ್ಥಪೂರ್ಣ ಒಡನಾಟ. ಅವರ ಆರೋಗ್ಯಪೂರ್ಣ ಜೀವನಕ್ಕೆ ಸಾಮಾಜಿಕ ಸಂಪರ್ಕವೇ ಅಂತಿಮ ಸಂಜೀವಿನಿಯಾಗಿದೆ ಎನ್ನಲಾಗಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.