
ಬೆಂಗಳೂರು (ಸೆ.11): ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ಡೆನ್ಮಾರ್ಕ್ ಸಂಶೋಧಕರ ತಂಡಗಳು ಜಂಟಿಯಾಗಿ ಭಾರತೀಯ ನಾಗರಹಾವು ಹಾಗೂ ಕಾಳಿಂಗ ಸರ್ಪಗಳ ಕಡಿತಕ್ಕೆ ಹೊಸ ಔಷಧವನ್ನು (ಆ್ಯಂಟಿ ವಿನಮ್) ಸಂಶೋಧಿಸಿದ್ದಾರೆ.
ಐಐಎಸ್ಸಿಯ ಪರಿಸರ ವಿಜ್ಞಾನ ಕೇಂದ್ರದ ಸಂಶೋಧಕರು ಹಾಗೂ ಡೆನ್ಮಾರ್ಕ್ನ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಂಟಿಯಾಗಿ ಕೃತಕವಾಗಿ ರೂಪಿಸಿದ ನ್ಯಾನೋಬಾಡಿ ಆಧಾರಿತ ಹೊಸ ಆ್ಯಂಟಿವಿನಮ್ ಸಂಶೋಧನೆಯ ವಿವರಗಳು ಪ್ರತಿಷ್ಠಿತ ‘ಸೈನ್ಸ್ ಟ್ರಾನ್ಸ್ಲೇಷನಲ್ ಮೆಡಿಸಿನ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.
ಭಾರತದಲ್ಲಿ ಪ್ರತಿವರ್ಷ ಸುಮಾರು 50,000 ಜನರು ಹಾವು ಕಡಿತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ಇದು ಜಗತ್ತಿನಲ್ಲೇ ಗರಿಷ್ಠ ಪ್ರಮಾಣವಾಗಿದೆ. ಹಾವು ಕಡಿತದ ಚಿಕಿತ್ಸಾ ವಿಧಾನವು ಕಳೆದ 100 ವರ್ಷಗಳಿಂದ ಬದಲಾಗಿಲ್ಲ. ಭಾರತದ ಹಾವು ಕಡಿತದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಲ್ಲ ಹೊಸ ತಲೆಮಾರಿನ ಏಕೈಕ ಔಷಧಿ ಇದಾಗಿದೆ ಎಂದು ಐಐಎಸ್ಸಿ ಸಹಾಯಕ ಪ್ರಾಧ್ಯಾಪಕ ಡಾ.ಕಾರ್ತಿಕ್ ಸುನಗರ್ ಹೇಳಿದ್ದಾರೆ.
ಈಗಾಗಲೇ ಪ್ರಾಯೋಗಿಕವಾಗಿ ಇಲಿಗಳ ಮೇಲೆ ಹೊಸ ಔಷಧದ ಪ್ರಯೋಗ ಮಾಡಲಾಗಿದ್ದು, ಉತ್ತಮ ಫಲಿತಾಂಶ ನೀಡಿದೆ. ಇದು ಸಾಮಾನ್ಯ ನಾಗರಹಾವು, ಭಾರತದ ಕಾಳಿಂಗ ಸರ್ಪ ಪ್ರಭೇದಗಳು ಸೇರಿದಂತೆ ಬಹುತೇಕ ಎಲ್ಲಾ ಮಾದರಿಯ ಭಾರತೀಯ ನಾಗರಹಾವುಗಳ ವಿಷದ ವಿರುದ್ಧ ಸಂಪೂರ್ಣ ರಕ್ಷಣೆ ನೀಡಲಿದೆ. ಹಾವಿನ ವಿಷ ಶರೀರ ಸೇರಿದ 30 ನಿಮಿಷಗಳ ನಂತರ ಹಾಗೂ ಪಾರ್ಶ್ವವಾಯು ಅಥವಾ ನರಸಂಬಂಧಿ ಲಕ್ಷಣಗಳು ಕಾಣಿಸಿಕೊಂಡ ನಂತರವೂ ಪರಿಣಾಮಕಾರಿಯಾಗಿದೆ. ಇಲಿಗಳು ಸಂಪೂರ್ಣವಾಗಿ ಗುಣಮುಖವಾಗಿವೆ ಎಂದು ಐಐಎಸ್ಸಿ ಹೇಳಿದೆ.
ಈಗ ಆಗಿರುವ ಸಂಶೋಧನೆಯ ಪ್ರಕಾರ, ಅತ್ಯಂತ ಕಡಿಮೆ ಪ್ರಮಾಣದ ಡೋಸ್ ನೀಡಿ ಹಾವಿನ ವಿಷದ ಪರಿಣಾಮವನ್ನು ತಗ್ಗಿಸಬಹುದು. ಇದರಿಂದ ಉತ್ಪಾದನಾ ವೆಚ್ಚ ಹಾಗೂ ಅಡ್ಡಪರಿಣಾಮಗಳು ಕಡಿಮೆಯಾಗಲಿವೆ ಎಂದು ಐಐಎಸ್ಸಿ ತಿಳಿಸಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.