ಥೇಟರ್‌ ಓಪನ್‌ ಆದರೂದೊಡ್ಡ ಸಿನಿಮಾ ತಕ್ಷಣ ಬರಲ್ಲ?

By Suvarna NewsFirst Published Jun 13, 2020, 9:08 AM IST
Highlights

ರಾಬರ್ಟ್‌, ಕೋಟಿಗೊಬ್ಬ, ಪೊಗರು, ಯುವರತ್ನ, ಸಲಗ, ಯುವರತ್ನ- ಇವರಲ್ಲಿ ಯಾರು ಮೊದಲು?

ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾಗಳ ನಿರ್ಮಾಪಕರು ಕಳೆದ ಒಂದು ವಾರದಿಂದ ಸಭೆಗಳನ್ನು ಮಾಡುತ್ತಿದ್ದಾರೆ. ಯಾವಾಗ ಚಿತ್ರಮಂದಿರಗಳು ಬಾಗಿಲು ತೆಗೆಯಲು ಅನುಮತಿ ಸಿಗುತ್ತದೋ, ಯಾವ ಚಿತ್ರ ಮೊದಲು ತೆರೆಗೆ ಬರಬೇಕು ಎಂಬಿತ್ಯಾದಿ ವಿಚಾರಗಳ ಸುತ್ತ ಮಾತುಕತೆ ಮಾಡುತ್ತಿದ್ದರೂ ಈ ನಡುವೆ ಒಂದು ಹೊಸ ಸುದ್ದಿ ಹೊರಗೆ ಬಂದಿದೆ. ನಿರೀಕ್ಷೆಯಿಂದ ಎದುರು ನೋಡುತ್ತಿರುವ ಸ್ಟಾರ್‌ ನಟರ ಸಿನಿಮಾಗಳು, ಚಿತ್ರಮಂದಿರಗಳು ಬಾಗಿಲು ತೆಗೆದರೂ ಬಿಡುಗಡೆ ಆಗಲ್ಲ. ಚಿತ್ರಮಂದಿರಗಳು ಆರಂಭಗೊಂಡರೂ ಯಾಕೆ ಸ್ಟಾರ್‌ ನಟರ ಚಿತ್ರಗಳು ತೆರೆ ಕಾಣಲ್ಲ ಎಂಬುದು ಚಿತ್ರರಂಗದಿಂದಲೇ ಕೇಳಿ ಬರುತ್ತಿರುವ ಮಾಹಿತಿಗಳು ಇಲ್ಲಿವೆ.

ಕಾದು ನೋಡುವ ತಂತ್ರ

ಚಿತ್ರಮಂದಿರಗಳು ಬಾಗಿಲು ತೆರೆಯಲು ಅನುಮತಿ ಸಿಕ್ಕ ಕೂಡಲೇ ಸ್ಟಾರ್‌ ನಟರ ಚಿತ್ರಗಳು ತಾ ಮುಂದು, ನಾ ಮುಂದೆ ಎನ್ನುತ್ತ ಪ್ರೇಕ್ಷಕರು ಮುಂದೆ ಬರುತ್ತವೆ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ, ಈ ಚಿತ್ರತಂಡಗಳ ಲೆಕ್ಕಾಚಾರವೇ ಬೇರೆ. ಜನರಲ್ಲಿ ಕೊರೋನಾ ಭಯ ಯಾವ ಮಟ್ಟಕ್ಕೆ ಇದೆ, ಚಿತ್ರಮಂದಿರಗಳು ಆರಂಭಗೊಂಡರೂ ಜನ ಥಿಯೇಟರ್‌ಗಳಿಗೆ ಬಂದು ಸಿನಿಮಾ ನೋಡುತ್ತಾರೆಯೇ, ಚಿತ್ರಮಂದಿರಗಳು ಯಾವ ರೀತಿ ಸ್ವಚ್ಛತೆ ಕಾಪಾಡುತ್ತವೆ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟುಕೊಂಡು ಸ್ಟಾರ್‌ ನಟರ ಚಿತ್ರಗಳು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿವೆ. ಹಾಗಾದರೆ ಸಿನಿಮಾ ಮಂದಿರಗಳು ಬಾಗಿಲು ತೆಗೆದ ಮೇಲೆ ಖಾಲಿ ಇರುತ್ತವೆಯೇ ಎನ್ನುವ ಪ್ರಶ್ನೆಗೂ ಚಿತ್ರೋದ್ಯಮ ಮತ್ತೊಂದು ದಾರಿ ಹುಡುಕಿದೆ.

ರಾಬರ್ಟ್‌ 'ದೋಸ್ತಾ' ಹಾಡಿಗೆ 12 ಮಿಲಿಯನ್‌ ಕ್ಲಿಕ್ಸ್! 

ಮರು ಬಿಡುಗಡೆ ಚಿತ್ರಗಳಿಗೆ ಅದ್ಯತೆ

ಲಾಕ್‌ಡೌನ್‌ಗೂ ಮೊದಲು ತೆರೆ ಕಂಡ, ಲಾಕ್‌ಡೌನ್‌ ಕಾರಣಕ್ಕೆ ಪ್ರದರ್ಶನ ನಿಲ್ಲಿಸಿದ್ದ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಪ್ರಜ್ವಲ್‌ ದೇವರಾಜ್‌ ಅವರ ‘ಜಂಟಲ್‌ಮನ್‌’ ಚಿತ್ರ ಮರು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರ ಜತೆಗೆ ಚಿರಂಜೀವಿ ಸರ್ಜಾ ಅವರ ‘ಶಿವಾರ್ಜುನ’ ಹಾಗೂ ‘ರಣಂ’ ಚಿತ್ರಗಳು ಕೂಡ ಬಿಡುಗಡೆ ಆಗಲು ತಯಾರಾಗಿವೆ. ಈ ಮೂರು ಚಿತ್ರಗಳ ಜತೆಗೆ ಹೊಸಬರ ನಾಲ್ಕೈದು ಚಿತ್ರಗಳು ಸೆನ್ಸಾರ್‌ ಮುಗಿಸಿದ್ದು, ಚಿತ್ರಮಂದಿರಗಳು ಬಾಗಿಲು ತೆಗೆದ ಕೂಡಲೇ ಅದೇ ವಾರ ಬಿಡುಗಡೆ ಆಗಲಿವೆ. ಈ ಚಿತ್ರಗಳಿಗೆ ಪ್ರೇಕ್ಷಕರು ನೀಡುವ ಪ್ರೋತ್ಸಾಹವನ್ನು ನೋಡಿಕೊಂಡು ಸ್ಟಾರ್‌ ಚಿತ್ರಗಳು ಬರಲಿವೆ. ಹಾಗಾದರೆ ಇನ್ನೂ ಎಷ್ಟುದಿನ ಕಾಯಬೇಕು?

ಬಿಡುಗಡೆಗೊಳ್ಳುವುದಕ್ಕೆ ಸಿದ್ದವಾಗಿರುವ ಸಿನಿಮಾಗಳ ನಿರ್ಮಾಪಕರು ಒಂದು ಸಮಿತಿ ಮಾಡಿಕೊಂಡು ಸಭೆ ಮಾಡುತ್ತಿರುವುದು ನಿಜ. ಮೊದಲ ಹಂತವಾಗಿ ಒಂದಿಷ್ಟುನಿರ್ಮಾಪಕರು ಸೇರಿ ಮಾತುಕತೆ ಮಾಡಿದ್ದೇವೆ. ಚಿತ್ರಮಂದಿರಗಳು ಬಾಗಿಲು ತೆರೆದ ಮೇಲೆ ಯಾರು ಬಿಡುಗಡೆ ಮಾಡುವುದಕ್ಕೆ ರೆಡಿ ಇದ್ದಾರೋ ಅಂತ ನಿರ್ಮಾಪಕರ ಜತೆಗೆ ಮಾತನಾಡಿ, ಎಲ್ಲರೂ ಸೌಹಾರ್ದಯುತವಾಗಿ, ಯಾರಿಗೂ ಯಾರೂ ಸ್ಪರ್ಧಿ ಆಗದಂತೆ ತಮ್ಮ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವುದಕ್ಕೆ ಪ್ಲಾನ್‌ ಮಾಡಿಕೊಳ್ಳುತ್ತಿದ್ದೇವೆ. ಸೋಮವಾರದ ಹೊತ್ತಿಗೆ ಎಲ್ಲ ಮಾಹಿತಿಗಳನ್ನು ಅಧಿಕೃತವಾಗಿ ಹೇಳಲಿದ್ದೇವೆ.- ಸೂರಪ್ಪ ಬಾಬು, ನಿರ್ಮಾಪಕವರ್ಷಾಂತ್ಯಕ್ಕೆ ಕೆಜಿಎಫ್‌ 2

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಸುದೀಪ್‌, ದರ್ಶನ್‌, ಧ್ರುವ ಸರ್ಜಾ, ಪುನೀತ್‌ ರಾಜ್‌ಕುಮಾರ್‌, ದುನಿಯಾ ವಿಜಯ್‌ ನಟನೆ ಚಿತ್ರಗಳು ಒಂದು ತಿಂಗಳು ಚಿತ್ರಮಂದಿರಗಳಿಗೆ ಬರಲ್ಲ. ಯಾವಾಗ ಥಿಯೇಟರ್‌ಗಳು ಬಾಗಿಲು ತೆಗೆಯುತ್ತವೋ ಅಲ್ಲಿಂದ ಒಂದು ಅಥವಾ ಎರಡು ತಿಂಗಳು ಕಾದು ಆ ನಂತರ ಸ್ಟಾರ್‌ ನಟರು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೀಗೆ ದೊಡ್ಡ ಸ್ಟಾರ್‌ಗಳ ಚಿತ್ರಗಳು ಬರಲು ಕಾಯುವ ಅವಧಿಯನ್ನು ಬೇರೆ ಚಿತ್ರಗಳು ಬಳಸಿಕೊಳ್ಳಲು ಸಜ್ಜಾಗಿವೆ. ಇನ್ನು ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರ ನೋಡಲು ವರ್ಷದ ಕೊನೆಯವರೆಗೂ ಕಾಯಬೇಕು. ಅಲ್ಲಿಗೆ ಚಿತ್ರಮಂದಿರಗಳು ಬಾಗಿಲು ತೆಗೆದರೂ ಸ್ಟಾರ್‌ ನಟರ ಅಭಿಮಾನಿಗಳು ಒಂದೆರಡು ತಿಂಗಳು ಕಾಯಲೇಬೇಕು.

ಸ್ಟಾರ್‌ಗಳಿಗೆ ಮರುಜನ್ಮ ಕೊಟ್ಟ ಚಿತ್ರಗಳು; ಅವರಿಗೂ ಈ ಗೆಲುವು ತುರ್ತಾಗಿ ಬೇಕಿದೆ! 

ಯಾವ ಚಿತ್ರ ಮೊದಲು?

ದರ್ಶನ್‌ ಅಭಿನಯದ ‘ರಾಬರ್ಟ್‌’, ಸುದೀಪ್‌ ನಟನೆಯ ‘ಕೋಟಿಗೊಬ್ಬ 3’, ಯಶ್‌ ಅವರ ‘ಕೆಜಿಎಫ್‌2’, ಪುನೀತ್‌ರಾಜ್‌ಕುಮಾರ್‌ ಅಭಿನಯದ ‘ಯುವರತ್ನ’, ಧ್ರುವ ಸರ್ಜಾ ಅವರ ‘ಪೊಗರು’, ದುನಿಯಾ ವಿಜಯ್‌ ನಟನೆಯ ‘ಸಲಗ’ ಹೀಗೆ ಸಾಲು ಸಾಲು ಚಿತ್ರಗಳು ತೆರೆಗೆ ಬರಬೇಕಿದೆ. ಸದ್ಯ ಈ ಎಲ್ಲ ಚಿತ್ರಗಳ ನಿರ್ಮಾಪಕರು ಕಳೆದ ಎರಡುವಾರಗಳಿಂದ ಸೌಹಾರ್ದಯುತವಾದ ಸಭೆ ಮಾಡಿ, ಯಾರು ಮೊದಲು ಬರಬೇಕು, ಪ್ರತಿಯೊಂದು ಚಿತ್ರದ ಬಿಡುಗಡೆಗೂ ಎಷ್ಟುವಾರಗಳು ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ಮಾತುಕತೆ ಮಾಡಿ ಅಂತಿಮಮಾಡಿಕೊಂಡಿದ್ದು, ಈ ಪೈಕಿ ಇನ್ನೆರಡು ದಿನಗಳಲ್ಲಿ ಅಧಿಕೃತ ಮಾಹಿತಿಗಳು ಹೇಳಿಕೊಳ್ಳಲಿದ್ದಾರೆ.

ಈ ಚಿತ್ರಗಳ ಪೈಕಿ ದರ್ಶನ್‌ ಅವರ ‘ರಾಬರ್ಟ್‌’ ಸಿನಿಮಾ ಮೊದಲು ತೆರೆಕಂಡರೆ, ನಂತರ ಸುದೀಪ್‌ ಅವರ ‘ಕೋಟಿಗೊಬ್ಬ 3’ ಸಿನಿಮಾ ತೆರೆ ಮೇಲೆ ಮೂಡಲಿದೆ. ಈ ಇಬ್ಬರು ಬಂದ ಮೇಲೆ ದುನಿಯಾ ವಿಜಯ್‌ ತಮ್ಮ ಬಹು ನಿರೀಕ್ಷೆಯ ‘ಸಲಗ’ ಚಿತ್ರವನ್ನು ತೆರೆ ಮೇಲೆ ತರಲಿದ್ದಾರೆ. ಹೀಗೆ ಮೂರು ಚಿತ್ರಗಳು ಒಂದರ ನಂತರ ಒಂದರಂತೆ ಎರಡು ಅಥವಾ ಮೂರು ವಾರಗಳ ಅಂತರದಲ್ಲಿ ಬಿಡುಗಡೆ ಮಾಡುವುದಕ್ಕೆ ಆಯಾ ಚಿತ್ರದ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಉಳಿದಂತೆ ‘ಯುವರತ್ನ’ ಹಾಗೂ ‘ಪೊಗರು’ ಚಿತ್ರಗಳ ಸರದಿ ಯಾವಾಗ ಎಂಬುದು ಇನ್ನಷ್ಟೆಗೊತ್ತಾಗಬೇಕಿದೆ. ಆದರೆ, ‘ಕೆಜಿಎಫ್‌ 2’ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಹೇಳಿಕೊಂಡಿದ್ದಾರೆ. ಅಂದರೆ ಅಕ್ಟೋಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಯಶ್‌ ತೆರೆ ಮೇಲೆ ರಾರಾಜಿಸಲಿದ್ದಾರೆ.

ರಾಕಿಭಾಯ್‌ ಬಂದಿಳಿಯುವ ರೋಲ್ಸ್‌ ರಾಯ್‌ ಕಾರಿನ ಸಿಕ್ರೇಟ್‌ ಇದು..!

ಮುಂದಿನ ವರ್ಷ ರಕ್ಷಿತ್‌ ಶೆಟ್ಟಿ ಹವಾ

ರಕ್ಷಿತ್‌ ಶೆಟ್ಟಿನಟನೆಯ ಯಾವ ಚಿತ್ರವೂ ಮುಂದಿನ ವರ್ಷದ ತನಕ ತೆರೆ ಮೇಲೆ ಬರಲ್ಲ. ಸದ್ಯ ಅವರ ನಟನೆಯ ‘777 ಚಾರ್ಲಿ’ ಚಿತ್ರಕ್ಕೆ ಬಹುತೇಕ ಶೂಟಿಂಗ್‌ ಮುಗಿದಿದೆ. ಉಳಿದಂತೆ ಮೂರು- ನಾಲ್ಕು ಸಿನಿಮಾಗಳು ಸೆಟ್ಟೇರಿವೆ. ಈ ಪೈಕಿ ಹೇಮಂತ್‌ ರಾವ್‌ ನಿರ್ದೇಶನದ ‘ಸಪ್ತಸಾಗರದಾಚೆ’ ಎಲ್ಲೋ ಸಿನಿಮಾ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿಕೊಂಡಿದೆ. ಆದರೆ, ‘777 ಚಾರ್ಲಿ’ ಚಿತ್ರಕ್ಕೆ ಶೂಟಿಂಗ್‌ ಮುಗಿದರೂ 2021ರಲ್ಲೇ ತೆರೆ ಮೇಲೆ ಬರಲು ಕಾರಣ, ಈ ಚಿತ್ರವೂ ಬಹುಭಾಷೆಗೆ ಹೋಗುತ್ತಿದೆ. ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಿಗೆ ಹೋಗುತ್ತಿರುವ ಕಾರಣ ತಾಂತ್ರಿಕ ಕೆಲಸಗಳು ಸಾಕಷ್ಟುಆಗಬೇಕಿದೆ. ಹೀಗಾಗಿ ರಕ್ಷಿತ್‌ ಶೆಟ್ಟಿಅವರ ಬಿಡುಗಡೆಯ ಖಾತೆಗೆ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಂತರ ಮತ್ತೊಂದು ಸಿನಿಮಾ ನೋಡಬೇಕು ಅಂದರೆ ಇನ್ನೂ ಆರು ತಿಂಗಳು ಕಾಯಬೇಕು.

click me!