
ದಕ್ಷಿಣ ಭಾರತದ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಕರೆಯಲ್ಪಡುವ ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದರು. ಈಗ ಈ ಜೋಡಿ ತಮ್ಮ ಮಾನವೀಯ ಗುಣದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಮದುವೆಯಾದ ಬಳಿಕ ಮೊದಲ ಬಾರಿಗೆ ಪತ್ನಿ ರಶ್ಮಿಕಾ ಜೊತೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ, ಅಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ವಿದ್ಯಾರ್ಥಿವೇತನ ಘೋಷಿಸುವ ಮೂಲಕ ಮದುವೆಯ ಸಂಭ್ರಮವನ್ನು ಸಾರ್ಥಕಗೊಳಿಸಿದ್ದಾರೆ.
ನಾಗರ್ಕರ್ನೂಲ್ ಜಿಲ್ಲೆಯ ಬಲ್ಮೂರು ಮಂಡಲದಲ್ಲಿರುವ 'ತುಮ್ಮನ್ಪೇಟೆ' ವಿಜಯ್ ದೇವರಕೊಂಡ ಅವರ ಹುಟ್ಟೂರು. ಮದುವೆಯ ಸಂಭ್ರಮದ ಬಳಿಕ ವಿಜಯ್ ತಮ್ಮ ಪತ್ನಿ ರಶ್ಮಿಕಾ ಮಂದಣ್ಣ ಮತ್ತು ಕುಟುಂಬಸ್ಥರೊಂದಿಗೆ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದರು. ತಮ್ಮ ಗ್ರಾಮದ ಹುಡುಗ ಸ್ಟಾರ್ ನಟನಾಗಿ, ಮಲೆನಾಡಿನ ಸುಂದರಿಯನ್ನು ಕೈಹಿಡಿದು ಊರಿಗೆ ಬಂದಿದ್ದನ್ನು ಕಂಡು ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ಹೂಮಳೆಗರೆದು, ವಾದ್ಯಘೋಷಗಳೊಂದಿಗೆ ನವಜೋಡಿಯನ್ನು ಬರಮಾಡಿಕೊಳ್ಳಲಾಯಿತು.
ಮನೆಯಲ್ಲಿ ಹೊಸ ಸೊಸೆ ರಶ್ಮಿಕಾ ಮಂದಣ್ಣ ಅವರ ಗೃಹಪ್ರವೇಶದ ಅಂಗವಾಗಿ ಸತ್ಯನಾರಾಯಣ ಸ್ವಾಮಿ ವ್ರತವನ್ನು ನೆರವೇರಿಸಲಾಯಿತು. ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದ ಈ ಜೋಡಿಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಪೂಜಾ ಕಾರ್ಯಕ್ರಮದ ನಂತರ, ವಿಜಯ್ ದೇವರಕೊಂಡ ಇಡೀ ಗ್ರಾಮದ ಜನರಿಗಾಗಿ ಭರ್ಜರಿ ಮದುವೆಯ ಔತಣಕೂಟವನ್ನು ಏರ್ಪಡಿಸಿದ್ದರು. ಸಾವಿರಾರು ಜನರು ಈ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಹರಸಿದರು.
ಈ ಸಂಭ್ರಮದ ನಡುವೆಯೇ ವಿಜಯ್ ದೇವರಕೊಂಡ ಒಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ತಮ್ಮ ಹುಟ್ಟೂರಿನ ಋಣ ತೀರಿಸುವ ಉದ್ದೇಶದಿಂದ, ಅಚ್ಚಂಪೇಟೆ ವಿಭಾಗದ ವ್ಯಾಪ್ತಿಗೆ ಬರುವ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ 'ವಿಜಯ್ ದೇವರಕೊಂಡ ಚಾರಿಟಬಲ್ ಟ್ರಸ್ಟ್' ವತಿಯಿಂದ ಉಚಿತವಾಗಿ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿದರು.
'ನಮ್ಮ ಊರಿಗೆ ಬಂದಿರುವುದು ಮತ್ತು ನಿಮ್ಮೆಲ್ಲರ ಪ್ರೀತಿ ಕಂಡು ತುಂಬಾ ಖುಷಿಯಾಗಿದೆ. ಈ ಮಣ್ಣಿನ ಋಣ ನನ್ನ ಮೇಲಿದೆ. ಇಲ್ಲಿನ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಹಂಬಲ ನನಗಿದೆ. ಹಾಗಾಗಿ, ಮುಂದಿನ ಶೈಕ್ಷಣಿಕ ಸಾಲಿನಿಂದಲೇ 44 ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲಾಗುವುದು. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಊರಿಗಾಗಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ' ಎಂದು ವಿಜಯ್ ಭಾವುಕರಾಗಿ ನುಡಿದರು.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದಾಗ ವಿದೇಶ ಪ್ರವಾಸ ಅಥವಾ ಅದ್ದೂರಿ ಪಾರ್ಟಿಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಸಂಭ್ರಮವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಿಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಕೂಡ ತಮ್ಮ ಪತಿಯ ಈ ನಿರ್ಧಾರಕ್ಕೆ ಸಾಥ್ ನೀಡಿದ್ದು, ಕೊಡಗಿನ ಸೊಸೆಯ ಉದಾರ ಮನಸ್ಸಿಗೆ ಕನ್ನಡಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಮತ್ತು ರಶ್ಮಿಕಾ ಜೋಡಿ ಕೇವಲ ತೆರೆಯ ಮೇಲೆ ಮಾತ್ರವಲ್ಲದೆ, ನಿಜ ಜೀವನದಲ್ಲೂ ಹೀರೊ-ಹೀರೋಯಿನ್ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.