Sandalwood News: ನೈಜ ಘಟನೆಯ 'ಡಿಸೆಂಬರ್ 24 ' ಆಡಿಯೋ, ಒಟಿಟಿಗೆ ಬಂದ ಶಿವ-ಹರಿ

By Kannadaprabha NewsFirst Published Dec 27, 2021, 10:26 PM IST
Highlights

* ನೈಜ ಘಟನೆಗಳ ಡಿಸೆಂಬರ್ 24 ಚಿತ್ರ
* ಆಡಿಯೋ ಜತೆಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಶ್ರೀನಗರ ಕಿಟ್ಟಿ
* ಓಟಿಟಿಗೆ ಬಂದ ಶಿವ- ಹರಿ ಮ್ಯಾಜಿಕ್
* ಜೀ 5ನಲ್ಲಿ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಜೋಡಿ

ಬೆಂಗಳೂರು( ಡಿ. 27)  ನೈಜ ಘಟನೆಗಳನ್ನು ಆಧರಿಸಿದ ‘ಡಿಸೆಂಬರ್ 24’ (December 24) ಚಿತ್ರದ ಆಡಿಯೋ (Audio) ಬಿಡುಗಡೆಯಾಗಿದೆ.  ದೇವು ಹಾಸನ್ ಇದೇ ಮೊದಲಬಾರಿಗೆ ನಿರ್ಮಿಸಿರುವ ಈ ಚಿತ್ರಕ್ಕೆ  ನಾಗರಾಜ್ ಎಂಜಿ ಗೌಡ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಹಾರರ್, ಥ್ರಿಲ್ಲರ್ ಕತೆಯನ್ನು ಹೊಂದಿರುವ ಈ ಚಿತ್ರದ ಮೋಷನ್ ಪೋಸ್ಟರ್ ಜತೆಗೆ ಆಡಿಯೋ ಬಿಡುಗಡೆ ಕೂಡ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದು ನಟ ಶ್ರೀನಗರ ಕಿಟ್ಟಿ.

ಬೆಂಗಳೂರು(Bengaluru) ಸಕಲೇಶಪುರ, ಹುಲಿಯೂರು ದುರ್ಗ ಹಾಗೂ ದಾಂಡೇಲಿ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.  ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್  ಸಂಗೀತ ನೀಡಿದ್ದಾರೆ. ಡಾ. ವಿ.ನಾಗೇಂದ್ರಪ್ರಸಾದ್, ವಿಶಾಲ್ ಆಲಾಪ್ ಹಾಗೂ ಗೀತಾ ಆನಂದ್ ಪಟೇಲ್ ಸಾಹಿತ್ಯ ಬರೆದಿದ್ದಾರೆ.

ಅಪ್ಪು ಬಡಿಗೇರ, ರವಿ ಕೆ.ಆರ್ ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ, ಸಾಗರ್, ಭೂಮಿಕಾ ರಮೇಶ್, ಮಿಲನಾ ರಮೇಶ್, ದಿವ್ಯ ಆಚಾರ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಉಸಿರಾಟದ  ತೊಂದರೆಯಿಂದ ಮರಣ ಹೊಂದುತ್ತಿರುವ ಮಕ್ಕಳನ್ನು ರಕ್ಷಿಸಲು ವೈದ್ಯಕೀಯ ಸಂಶೋಧನೆಗೆ ಕಾಡಿಗೆ ತೆರಳುವ ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಲ್ಲಿ ಎದುರಾಗುವ ಸಮಸ್ಯೆಗಳು, ತೊಂದರೆಗಳ ಹಿನ್ನೆಲೆ ಏನು, ಅದರ ಹಿಂದೆ ಯಾರಿದ್ದಾರೆ ಎನ್ನುವುದೇ ಈ ಚಿತ್ರದ ಕತೆ. 

'ಗರುಡಗಮನ ವೃಷಭವಾಹನ': ವಿಶೇಷ ಸಂದರ್ಶನದಲ್ಲಿ ರಾಜ್‌ ಬಿ. ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ

2015ರಿಂದ 2019 ನಡುವೆ ನಡೆದ ಕೆಲ ನೈಜ ಘಟನೆಗಳನ್ನು ಇಟ್ಟುಕೊಂಡು ಮಾಡಿಕೊಂಡಿರುವಂತಹ ಚಿತ್ರ ಇದಾಗಿದೆ. ಆರ್ಯಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮಿಗಳು ಹಾಗೂ ಬಾಮಾ ಹರೀಶ್ ಆಗಮಿಸಿ  ಚಿತ್ರತಂಡಕ್ಕೆ ಶುಭ ಹಾರೈಸಿದರು. ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿಡಿಯೋಸಾಂಗ್ ಬಿಡುಗಡೆ ಮಾಡುವ ಮೂಲಕ ಹೊಸಬರ ಚಿತ್ರಕ್ಕೆ ಬೆಂಬಲ ಸೂಚಿಸಿದರು

ಓಟಿಟಿಗೆ ಬಂದ ಶಿವ- ಹರಿ: ಓಟಿಟಿ (OTt) ಪ್ಲಾಟ್‌ಫಾರಂಗಳಲ್ಲಿ ಕನ್ನಡ ಚಿತ್ರಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲ ಎಂದು ಆಗಾಗ ಕೇಳಿ ಬರುವ ಗುಮಾನಿ ಮಾತುಗಳನ್ನು ಸುಳ್ಳಾಗಿಸುತ್ತಿವೆ ಇತ್ತೀಚಿನ ಮಾರುಕಟ್ಟೆಯ ತಂತ್ರಗಳು. ಈಗಾಗಲೇ ಜೀ5 ನಂತರ ಪ್ರತಿಷ್ಠಿತ ಓಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಮಹತ್ವ ನೀಡಲಾಗುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ 2’, ಡಾ ರವಿಚಂದ್ರ ವಿ ಅಭಿನಯದ ‘ಕನ್ನಡಿಗ’ ಹಾಗೂ ಸಂಚಾರಿ ವಿಜಯ್ ನಟನೆಯ ‘ಪುಕ್ಸಟ್ಟೆ ಲೈಫ್’ ಚಿತ್ರಗಳ ಡಿಜಿಟಲ್ ಹಕ್ಕುಗಳನ್ನು ತಮ್ಮದಾಗಿಸಿಕೊಂಡ ಬೆನ್ನೆಲ್ಲೇ ಮತ್ತೊಂದು ಸೂಪರ್ ಹಿಟ್ ಚಿತ್ರವನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗಿದೆ ಜೀ5. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಜೀ 5 ಬಹು ದೊಡ್ಡ ವೇದಿಕೆ ಆಗುತ್ತಿದೆ.

ಜೀ5ನಲ್ಲಿ ಬಿಡುಗಡೆ ಆಗುತ್ತಿರುವ ಬಹಳಷ್ಟು ಕನ್ನಡ ಚಿತ್ರಗಳಿಗೆ ಪ್ರೇಕ್ಷಕಕ ಸಂಖ್ಯೆ ಹೆಚ್ಚಾಗುತ್ತಿದೆ. ಆ ಮೂಲಕ ಓಟಿಟಿಯಲ್ಲೂ ಕನ್ನಡ ಚಿತ್ರಗಳು ಪರಿಣಾಮ ಬೀರುತ್ತಿವೆ. ಈಗ ನಟರಾದ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘ಗರುಡಗಮನ ವೃಷಭವ ವಾಹನ’ ಚಿತ್ರವು ಜೀ5ನಲ್ಲಿ ಪ್ರಸಾರ ಆಗಲು ಸಜ್ಜಾಗಿದೆ. ಜನವರಿ ತಿಂಗಳ ಮೊದಲ ವಾರದಲ್ಲಿ ಪ್ರೇಕ್ಷಕರ ಮುಂದೆ ಈ ಚಿತ್ರ ಬರಲಿದೆ. ಚಿತ್ರಮಂದಿರಗಳಲ್ಲೇ ನೋಡಿ ಈ ಚಿತ್ರವನ್ನು ಗೆಲ್ಲಿಸಿದವರು ಪ್ರೇಕ್ಷಕರು. ಆದರೆ, ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೋಡುವ ಅವಕಾಶವನ್ನು ಮಿಸ್ ಮಾಡಿಕೊಂಡವರು ಈಗ ಓಟಿಟಿಯಲ್ಲಿ ಕೂತಲ್ಲೇ ಚಿತ್ರ ನೋಡಬಹುದಾಗಿದೆ. ಸದ್ಯದಲ್ಲೇ ಚಿತ್ರದ ಪ್ರಸಾರದ ದಿನಾಂಕವನ್ನು ಜೀ5 ಪ್ರಕಟಿಸಲಿದೆ.

 

click me!