ಕೆಜಿಎಫ್ ಗಣಿಯಲ್ಲಿ ಮತ್ತೆ ಶುರುವಾಗಲಿದೆ ರಾಕಿ ಬಾಯ್ ಅಬ್ಬರ!

By Web DeskFirst Published Mar 14, 2019, 9:10 AM IST
Highlights

ಏಪ್ರಿಲ್‌ನಲ್ಲಿ ಚಿತ್ರೀಕರಣ ಶುರು| ಮುಖ್ಯ ವಿಲನ್ ಆಗಿ ಸಂಜಯ್‌ ದತ್ ಕೆಜಿಎಫ್‌ಗೆ ಎಂಟ್ರಿ| ಮಹಿಳಾ ರಾಜಕಾರಣಿ ಪಾತ್ರಕ್ಕೆ ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್.

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ರಾಕಿ ಬಾಯ್ ಹವಾ ಶುರುವಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿದ ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ ‘ಕೆಜಿಎಫ್ ಚಾಪ್ಟರ್ ೨’ಗೆ ಮುಹೂರ್ತ ಮುಗಿದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬುಧವಾರ ಬೆಳಗ್ಗೆ ಚಿತ್ರತಂಡ ಸರಳವಾಗಿ ಮುಹೂರ್ತ ಪೂಜೆ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ನೀಡಿತು.

ನಿರ್ದೇಶಕ ಪ್ರಶಾಂತ್ ನೀಲ್ ತಾಯಿ ಭಾರತಿ ಸುಭಾಷ್ ಕ್ಯಾಮರಾ ಸ್ವಿಚ್ ಆನ್ ಮಾಡಿದರೆ, ನಿರ್ಮಾಪಕ ವಿಜಯ್ ಕಿರಗಂದೂರು ಸಹೋದರ ಮಂಜಣ್ಣ ಕ್ಲಾಪ್ ಮಾಡಿದರು. ಅಲ್ಲಿಂದ ವಿಜಯನಗರದ ಪಂಚಮುಖಿ ಗಣಪತಿ ಹಾಗೂ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ಕೊಟ್ಟ ಚಿತ್ರತಂಡ ಅಲ್ಲಿ, ವಿಶೇಷ ಪೂಜೆ ಸಲ್ಲಿಸಿತು.

‘ಕೆಜಿಎಫ್ ಚಾಪ್ಟರ್ 2’ಗೆ ಏಪ್ರಿಲ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗುತ್ತಿರುವುದನ್ನು ಅಧಿಕೃತವಾಗಿ ಚಿತ್ರತಂಡವೇ ಹೇಳಿಕೊಂಡಿದೆ. ಸದ್ಯಕ್ಕೆ ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುವುದನ್ನು ಚಿತ್ರತಂಡ ಬಹಿರಂಗ ಪಡಿಸಿಲ್ಲವಾದರೂ, ಚಾಪ್ಟರ್ 1ರ ಚಿತ್ರೀಕರಣಕ್ಕೆ ಬಳಕೆಯಾದ ಅದ್ಧೂರಿ ಸೆಟ್‌ಗಳು, ಕೋಲಾರ ಗಣಿ ಪ್ರದೇಶ ಮತ್ತೆ ಭುವನ್‌ಗೌಡ ಕ್ಯಾಮರಾಗೆ ಸೆರೆಯಾಗುವುದು ಖಾತರಿ ಆಗಿದೆ. ಮೈಸೂರಿನಲ್ಲಿ ಅದ್ಧೂರಿ ಸೆಟ್ ಕೂಡ ರೆಡಿ ಆಗಲಿದೆ. ಮುಂಬೈ, ಹೈದರಾಬಾದ್‌ನಲ್ಲೂ ಕೆಲವು ಭಾಗಗಳನ್ನು ಚಿತ್ರೀಕರಿಸುವ ಚಿಂತನೆ ಚಿತ್ರತಂಡಕ್ಕಿದೆ ಎನ್ನಲಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದು, ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಮುಖ್ಯ ಆಕರ್ಷಣೆ. ಯಶ್ ಜತೆಗೆ ಶ್ರೀನಿಧಿ ಶೆಟ್ಟಿ ಸೇರಿ ಚಾಪ್ಟರ್ 1ರ ಬಹುತೇಕ ಕಲಾವಿದರು ಇಲ್ಲೂ ಇರಲಿದ್ದಾರೆ. ಅದು ಬಿಟ್ಟರೆ, ಚಾಪ್ಟರ್ ೨ಗೆ ಮುಖ್ಯ ವಿಲನ್ ಆಗಿ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ. ಮೋಹಕ ತಾರೆ ರವೀನಾ ಟಂಡನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

click me!