
ಒಂದೇ ಚಿತ್ರದಲ್ಲಿ ನಟ ದೇವರಾಜ್ ಮಕ್ಕಳಾದ ಪ್ರಜ್ವಲ್ ಹಾಗೂ ಪ್ರಣಮ್!
ಪ್ರಣಮ್ ದೇವರಾಜ್ ನಾಯಕತ್ವದ 'ಶ್ರೀರಸ್ತು' ಚಿತ್ರವು ಈಗಾಗಲೇ ಸಾಕಷ್ಟು ಸುದ್ದಿಯಲ್ಲಿದೆ. ಇದೀಗ ಈ ಚಿತ್ರತಂಡದಿಂದ ಹೊಸದೊಂದು ಸುದ್ದಿ ಸೌಂಡ್ ಮಾಡತೊಡಗಿದೆ. ಹೌದು, ಪ್ರಣಮ್ ದೇವರಾಜ್ ಶ್ರೀರಸ್ತು ಚಿತ್ರಕ್ಕೆ ಅವರ ಅಣ್ಣ, ಸ್ಯಾಂಡಲ್ವುಡ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪ್ರವೇಶ ಮಾಡಿದ್ದಾರೆ. ಈ ಮೂಲಕ ಪರದೆಯ ಮೇಲೆ ಕನ್ನಡದ ಡೈನಾಮಿಕ್ ಹೀರೋ ದೇವರಾಜ್ ಅವರ ಇಬ್ಬರು ಮಕ್ಕಳಾದ ಪ್ರಣಮ್-ಪ್ರಜ್ವಲ್ ಇಬ್ಬರನ್ನೂ ತೆರೆಗೆ ಮೇಲೆ ನೋಡಿ ಅವರ ಅಭಿಮಾನಿಗಳು ಆನಂದಿಸಬಹುದು.
ಈಗಾಗಲೇ ಪ್ರಣಾಮ್ ದೇವರಾಜ್ ನಾಯಕ ಎನ್ನುವ ಕಾರಣದಿಂದಲೇ ಈ ಸಿನಿಮಾ ಸಾಕಷ್ಟು ದೊಡ್ಡ ಸುದ್ದಿ ಮಾಡಿತ್ತು ಈ ಶ್ರೀರಸ್ತು ಸಿನಿಮಾ. ಇದೀಗ ತಮ್ಮ ನಾಯಕನಾಗಿರುವ ಚಿತ್ರದಲ್ಲೇ ಅಣ್ಣ ಡೈನಾಮಿಕ್ ಪ್ರಿನ್ಸ್ ಕೂಡ ಎಂಟ್ರಿ ಕೊಡುತ್ತಿರುವುದು ಅಧಿಕೃತಗೊಂಡಿದೆ.
ಕನ್ನಡ ಚಿತ್ರರಂಗದಲ್ಲಿ ಸಹೋದರರು ಸಕ್ಸಸ್ ಹೀರೋಗಳಾಗಿರುವುದನ್ನು ನೋಡಿದ್ದೇವೆ. ಆದರೆ ಪ್ರಣಮ್ ಮತ್ತು ಪ್ರಜ್ವಲ್ ಒಂದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊಟ್ಟಮೊದಲು ಎನ್ನಬಹುದು. ಅದೇ ಕಾರಣದಿಂದಲೇ ಶ್ರೀರಸ್ತು ದೊಡ್ಡ ಕುತೂಹಲವನ್ನೇ ಸೃಷ್ಟಿಸಿದೆ.
ಪ್ರಜ್ವಲ್ ದೇವರಾಜ್ ಜನ್ಮದಿನದ ಪ್ರಯುಕ್ತ ಶ್ರೀರಸ್ತು ಚಿತ್ರತಂಡ ಶುಭ ಕೋರುವ ಪೋಸ್ಟರ್ ಮತ್ತು ವಿಡಿಯೋ ಬಿಡುಗಡೆಗೊಳಿಸಿತ್ತು. ವಿಶೇಷ ಏನೆಂದರೆ ಪ್ರಣಮ್ ಜತೆಗೆ ಬರ್ತ್ ಡೇ ಬಾಯ್ ಪ್ರಜ್ವಲ್ ಕೂಡ ಇದ್ದ ದೃಶ್ಯಗಳು ಅಭಿಮಾನಿಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಇದೀಗ ಈ ಸುದ್ದಿಯ ಮೂಲಕ, ಅವರಿಬ್ಬರನ್ನೂ ಒಂದೇ ಬಾರಿಗೆ ಒಂದೇ ಚಿತ್ರದಲ್ಲಿ ತೆರೆಯಲ್ಲಿ ನೋಡುವ ಅಭಿಮಾನಿಗಳ ಕನಸು ನನಸಾಗಲಿದೆ. ಅಷ್ಟೇ ಅಲ್ಲ, ಅವರಿಬ್ಬರಿಗೂ ಕೂಡ ತಾವಿಬ್ಬರೂ ಜೊತೆಯಾಗಿ ನಟಿಸುವ ಕನಸೂ ಕೂಡ ಇದ್ದಿರಬಹುದು.
ಆರಂಭದಲ್ಲಿ ಶ್ರೀರಸ್ತು ಒಂದು ಲವ್ ಸ್ಟೋರಿ ಎಂದಷ್ಟೇ ಸುದ್ದಿಯಾಗಿತ್ತು. ಚಿತ್ರದಲ್ಲಿ ಪ್ರಣಮ್ಗೆ ಜೋಡಿ ಸಂಜನಾ ಆನಂದ್ ಎನ್ನುವುದಷ್ಟೇ ತಿಳಿದು ಬಂದಿತ್ತು. ಆದರೆ ಇದೀಗ ಪ್ರಜ್ವಲ್ ಕೂಡ ಸೇರಿಕೊಂಡಿದ್ದಾರೆ. ಚಿತ್ರಕ್ಕೂ ಒಂದು ಕೌಟುಂಬಿಕ ಕಳೆ ಬಂದಿದೆ. ಪ್ರೇಮದ ಜೊತೆಗೆ ಕೌಟುಂಬಿಕ ಪ್ರೀತಿಯನ್ನು ತೋರಿಸುವಂಥ ಒಂದು ವಿಭಿನ್ನ ಚಿತ್ರವಾಗಿ ಶ್ರೀರಸ್ತು ಮೂಡಿ ಬರಲಿದೆ ಎಂದು ನಿರ್ದೇಶಕ ಶಂಕರ್ ರೆಡ್ಡಿ ತಿಳಿಸಿದ್ದಾರೆ. ಹಾಗಂತ ಪ್ರಜ್ವಲ್ ತಮ್ಮನಿಗೆ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಪ್ರಧಾನ ಪಾತ್ರವಾಗಿ ಗಮನ ಸೆಳೆಯಲಿದ್ದಾರೆ ಎಂದು ಶಂಕರ್ ರೆಡ್ಡಿ ಭರವಸೆ ನೀಡುತ್ತಾರೆ.
ಶ್ರೀರಸ್ತು ಚಿತ್ರವು ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ತೆರೆ ಕಾಣಲಿದೆ. ಹೀಗಾಗಿ ದೊಡ್ಡ ಕ್ಯಾನ್ವಾಸ್ ನಲ್ಲಿಯೇ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಖ್ಯಾತ ಕಲಾವಿದರಾದ ಸುಮನ್, ಆಮನಿ, ಚೈತ್ರಾ ರೈ, ರವಿ ಶಿವತೇಜ, ಜೋಶ್ ರವಿ, ರವಿ ಪ್ರಕಾಶ್ ಹೀಗೆ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಕಲಾವಿದರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಹರ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಹರಗೌಡ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ನಿರ್ಮಿಸುತ್ತಿದ್ದಾರೆ. ಪುಷ್ಪ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳ ಸಹಾಯಕ ಛಾಯಾಗ್ರಾಹಕ ಬಾಲಸರಸ್ವತಿ ಈ ಚಿತ್ರದ ಕ್ಯಾಮರಾಮ್ಯಾನ್. ಕೃಷ್ಣ ಮಾಯ ಕಲಾನಿರ್ದೇಶನವಿದ್ದು ಶ್ರೀ ವರ್ಕಲ ಸಂಕಲನ ನಿರ್ವಹಣೆ ಮಾಡುತ್ತಿದ್ದಾರೆ. ಕನ್ನಡದ ಪಾಲಿಗೆ ಇದು ಇಂಡಸ್ಟ್ರಿ ತಿರುಗಿ ನೋಡುವಂತಹ ಚಿತ್ರವಾಗುವ ಬಗ್ಗೆ ಯಾವುದೇ ಸಂದೇಹವಿಲ್ಲ.
ಶ್ರೀರಸ್ತು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಹೊರಗೆ ಬಂದಿರುವುದು ಒಂದು ವಿಡಿಯೋ ತುಣುಕು ಮಾತ್ರ. ಆದರೆ ಅದರ ಹಿನ್ನೆಲೆ ಸಂಗೀತವನ್ನು ಗಮನಿಸಿರುವ ಅಭಿಮಾನಿಗಳು ಹಾಡುಗಳ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಚಿತ್ರದ ಸಂಗೀತ ನಿರ್ದೇಶಕ ಶೇಖರ್ ಚಂದ್ರ ಎನ್ನುವ ಸತ್ಯವೂ ಅರಿವಾಗಿದೆ. ಹೀಗಾಗಿಯೇ ಹಾಡುಗಳು ಅದ್ಭುತವಾಗಿರುವ ನಿರೀಕ್ಷೆ ಸೃಷ್ಟಿಯಾಗಿದೆ. ಅಭಿಮಾನಿಗಳ ನಂಬಿಕೆ ಖಂಡಿತಾ ಸತ್ಯವಾಗಲಿದೆ ಎನ್ನುವ ಭರವಸೆಯನ್ನು ನಿರ್ದೇಶಕ ಶಂಕರ್ ರೆಡ್ಡಿ ಹೇಳಿದ್ದಾರೆ.
ಮತ್ತೆ ಸದ್ದು ಮಾಡಲಿದೆ ಯುವ ತಾರಾ ಸಂಗಮ
ಪ್ರಣಾಮ್ ಜತೆಗೆ ಪ್ರಜ್ವಲ್ ಇರುವುದು ಅಭಿಮಾನಿಗಳಿಗೆ ಎಷ್ಟು ಖುಷಿಯಾಗಿದೆಯೋ ಸಂಜನಾ ಆನಂದ್ ನಾಯಕಿಯಾಗಿರುವುದು ಕೌಟುಂಬಿಕ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ. ಸಂಜನಾ ನಟನೆಯ ಈ ಹಿಂದಿನ ಚಿತ್ರದಲ್ಲಿ 'ಬ್ಯಾಂಗಲ್ ಬಂಗಾರಿ' ಎನ್ನುವ ಹಾಡು ಜನಪ್ರಿಯತೆ ಪಟ್ಟ ಗಿಟ್ಟಿಸಿತ್ತು. ಮನೆಯ ಹಿರಿಯರಿಂದ ಹಿಡಿದು ಕಿರಿಯ ಮಕ್ಕಳ ತನಕ ಎಲ್ಲರೂ ಈ ಹಾಡಿಗೆ ಡಾನ್ಸ್ ಮಾಡಿದ್ದರು. ಇದೀಗ ಅದೇ ಸಂಜನಾ ಆನಂದ್ ಮರಳಿ ಬರುತ್ತಿದ್ದಾರೆ. ಈ ಬಾರಿ ಹಿಂದಿನ ದಾಖಲೆ ಮುರಿಯುವ ಹಾಡುಗಳಿರುತ್ತವೆ. ಈ ಮೂವರು ಸೇರಿ ಹೊಸ ಮೋಡಿ ಮಾಡುವ ನಿರೀಕ್ಷೆ ಎಲ್ಲರದ್ದೂ ಆಗಿದೆ. ಈ ಮೂಲಕ ಸ್ಯಾಂಡಲ್ವುಡ್ ಹೊಸ ಸುದ್ದಿಯೊಂದಕ್ಕೆ ಸಾಕ್ಷಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.