
ಕಳೆದ ವರ್ಷ ಭಾರತದಾದ್ಯಂತ ಸಂಚಲನ ಮೂಡಿಸಿದ್ದ ಸಿನಿಮಾಗಳ ಪಟ್ಟಿಗೆ ಕಾಂತಾರ ಕೂಡ ಸೇರಿತ್ತು. ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಈ ಸಿನಿಮಾ ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿತ್ತು. ಕರ್ನಾಟಕದ ತುಳು ಸಂಸ್ಕೃತಿಯನ್ನು ಬಿಂಬಿಸುವ ಈ ಅತ್ಯುತ್ತಮ ಚಿತ್ರವನ್ನು ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮದೇ ನಿರ್ದೇಶನದಲ್ಲಿ ನಿರ್ದೇಶಿಸಿದ್ದಾರೆ.
ಬಿಡುಗಡೆಯಾಗಿ ವರ್ಷಗಳೇ ಕಳೆದರು ಈ ಸಿನಿಮಾ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮೆಚ್ಚುಗೆ ಗಳಿಸುತ್ತಿದೆ. ಇನ್ನೊಂದು ವಿಶೇಷತೆಯೆಂದರೆ ಈ ಚಿತ್ರ ವಿಶ್ವಸಂಸ್ಥೆಯಲ್ಲಿ ವಿಶೇಷವಾಗಿ ಪ್ರದರ್ಶನಗೊಂಡು ಕನ್ನಡಿಗರಿಗೆ ಹೆಮ್ಮೆ ತಂದುಕೊಟ್ಟಿತ್ತು. ಇದೀಗ ಭರವಸೆಯ ನಾಯಕ ರಿಷಬ್ ಶೆಟ್ಟಿ ಅವರಿಂದ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇ ಕಾಂತಾರ ಚಿತ್ರದ ಪ್ರಿಕ್ವೆಲ್. ಹೌದು! ಸದ್ಯ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಇತ್ತೀಚೆಗೆ, ರಿಷಬ್ ಶೆಟ್ಟಿ ಇದರ ಬಗ್ಗೆ ಕ್ರೇಜಿ ಅಪ್ಡೇಟ್ ನೀಡಿದ್ದರು.
ಸದ್ಯ ಈ ಕುರಿತು ರಿಷಬ್ ಶೆಟ್ಟಿ ಟ್ವಿಟ್ಟರ್ನಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಕಾಂತಾರ ಪ್ರಿಕ್ವೇಲ್ನ ಫಸ್ಟ್ ಲುಕ್ ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ. ಅವರು ಶೇರ್ ಮಾಡಿಕೊಂಡಿರುವ ಪೋಸ್ಟ್ನಲ್ಲಿ 'ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವುದರ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡಿರದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ, Revealing the first look on 27th nov @ 12:25pm' ಎಂದು ಘೋಷಿಸಲಾಗಿದ್ದು ಒಟ್ಟಿನಲ್ಲಿ ಸೋಮವಾರದಿಂದ ಕಾಂತಾರ ಪ್ರೀಕ್ವೆಲ್ ಹೀಟ್ ಆರಂಭವಾಗಲಿದೆ.
ಇನ್ನು ರಿಷಬ್ ಶೆಟ್ಟಿ ಅವರ ಸಿನಿಪಯಣದ ದಿಕ್ಕನ್ನು ಬದಲಿಸಿದ ಸಿನಿಮಾ ಕಾಂತಾರ. ವಿಶ್ವವ್ಯಾಪಿ ಪ್ರೇಕ್ಷಕರ ಮನಗೆಲ್ಲುವುದರೊಂದಿಗೆ, ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಹಣವನ್ನೂ ಬಾಚಿತ್ತು. ಇದೀಗ ಈ ಸಿನಿಮಾದ ಪ್ರೀಕ್ವೆಲ್ (ಹಿಂದಿನ ಕಥೆ) ತೆರೆಯ ಮೇಲೆ ಬರಲಿದ್ದು, ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಪ್ರೀಕ್ವೆಲ್ ಕುರಿತು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ರಿಷಬ್ ಶೆಟ್ಟಿ, 'ನಾನು ವೈಯಕ್ತಿಕವಾಗಿ ಪ್ರೀಕ್ವೆಲ್ಗೆ ಹೇಗೆ ಸಿದ್ಧವಾಗುತ್ತಿದ್ದೇನೆ ಎನ್ನುವುದನ್ನು ಮೇಕಿಂಗ್ ಮೂಲಕವೇ ತಿಳಿಸುತ್ತೇನೆ. ಮೊದಲ ಭಾಗವು ಎಷ್ಟು ಸಮಯದ ಮಿತಿಯನ್ನು ಬಯಸಿತ್ತೋ, ಅಷ್ಟೇ ಸಮಯದಲ್ಲಿ ಅದರ ಚಿತ್ರೀಕರಣ ಮುಗಿಸಿದ್ದೆವು. ಪ್ರೀಕ್ವೆಲ್ ಕಥೆಯ ಬೇಡಿಕೆ ಏನಿರುತ್ತದೆಯೋ ಅಷ್ಟೇ ಸಮಯವನ್ನು ಅದಕ್ಕೆ ನೀಡುತ್ತೇವೆ' ಎಂದು ಹೇಳಿದ್ದರು.
ದೊಡ್ಡ ಬಜೆಟ್ನಲ್ಲಿ ಚಿತ್ರ ತಯಾರಾಗಲಿದ್ದು, ಕಾಂತಾರ ಮೊದಲ ಭಾಗದ ಕೆಲವು ನಟರು ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಿದ್ದಾರೆ ಎಂದು ರಿಷಬ್ ಪ್ರಸ್ತಾಪಿಸಿದ್ದಾರೆ. ಈ ಬಹುನಿರೀಕ್ಷಿತ ಪ್ಯಾನ್-ಇಂಡಿಯನ್ ಯೋಜನೆಗೆ ಸೇರ್ಪಡೆಗೊಳ್ಳುವ ಹೊಸ ಹೆಸರುಗಳನ್ನು ಕಾದು ನೋಡಬೇಕಾಗಿದೆ. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಸಾದ್ ತುಮಿನಾಡ್, ಸ್ವರಾಜ್ ಶೆಟ್ಟಿ, ಮತ್ತು ಮಾನಸಿ ಸುಧೀರ್ ಮುಂತಾದವರು ಮೊದಲ ಭಾಗದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ವಿಜಯ್ ಕಿರಂಗಂದೂರು ನಿರ್ಮಿಸಿರುವ ಈ ಸೀಕ್ವೆಲ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ನಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.