
ಎರಡು ದಶಕಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಕಾದಂಬರಿಕಾರರಾಗಿ, ಲೇಖಕರಾಗಿ ಸಕ್ರಿಯರಾಗಿರುವ ಪಿ.ವಿ. ಪ್ರದೀಪ್ ಕುಮಾರ್ ಇದೀಗ ಎಐ ಆಧಾರಿತ ‘ಅದಿತಿ’ ಟೆಲಿಚಿತ್ರ ನಿರ್ದೇಶಿಸಿದ್ದಾರೆ. ಈ ಟೆಲಿಚಿತ್ರವು ಇತ್ತೀಚೆಗೆ ಮಂಗಳೂರಿನಲ್ಲಿ ಬಿಡುಗಡೆಯಾಗಿದೆ.
‘ಕಥಾಬಿಂದು ಪ್ರಕಾಶನ’ದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿರುವ ಪಿ.ವಿ. ಪ್ರದೀಪ್ ಕುಮಾರ್ ಈ ಹಿಂದೆ ನಿರ್ದೇಶಿಸಿದ್ದ ‘ಬದಲಾಗದವರು’ ಕಿರುಚಿತ್ರ ಭಾರಿ ಯಶಸ್ಸು ಮತ್ತು ಪ್ರಶಂಸೆ ಗಳಿಸಿತ್ತು. ಆ ಯಶಸ್ಸಿನ ಬೆನ್ನಲ್ಲೇ ಎರಡನೇ ಸಿನಿಮಾ ಸಿದ್ಧಪಡಿಸಿದ್ದಾರೆ.
ಚಿತ್ರದ ಕುರಿತು ಪಿ.ವಿ. ಪ್ರದೀಪ್ ಕುಮಾರ್, ‘ನಾನು ಈ ಚಿತ್ರಕಥೆಯನ್ನು ಮೊದಲೇ ಸಿದ್ಧಪಡಿಸಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಶೂಟಿಂಗ್ ಮುಂದುವರಿಯಲಿಲ್ಲ. ಅದೇ ಸಮಯದಲ್ಲಿ ಎಐ ಸಿನಿಮಾಗಳ ಪ್ರಯೋಗ ನನ್ನನ್ನು ಆಕರ್ಷಿಸಿತು. ‘ಅದಿತಿ’ ಚಿತ್ರಕಥೆಯನ್ನು ಎಐ ತಂತ್ರಜ್ಞಾನ ಬಳಸಿ ನಾನೇಕೆ ದೃಶ್ಯರೂಪಕ್ಕೆ ತರಬಾರದು ಎಂದು ಆಲೋಚಿಸಿ, ಸತತ ಒಂದು ವರ್ಷಗಳ ಕಾಲ ಕಠಿಣ ಪ್ರಯತ್ನ ಪಟ್ಟೆ.
ಕಳೆದ ಆರು ತಿಂಗಳಲ್ಲಿ ತಂತ್ರಜ್ಞಾನದ ಸಂಪೂರ್ಣ ಮಾಹಿತಿ ಪಡೆದು ದೃಶ್ಯಗಳನ್ನು ಕಲ್ಪಿಸಿಕೊಂಡು ಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿದೆ’ ಎಂದು ಹೇಳಿಕೊಂಡಿದ್ದಾರೆ. ‘ಅದಿತಿ’ ಚಿತ್ರಕ್ಕೆ ‘ನಾರಿ ಮುನಿದರೆ ಸಾಮ್ರಾಜ್ಯವೇ ಧೂಳಿಪಟ’ ಎಂಬ ಟ್ಯಾಗ್ಲೈನ್ ನೀಡಲಾಗಿದೆ. ಇದು ಕೇವಲ ಒಂದು ಮನೋರಂಜನಾ ಚಿತ್ರವಲ್ಲ, ಬದಲಾಗಿ ಸಸ್ಪೆನ್ಸ್, ಆಕ್ಷನ್ ಹಾಗೂ ಭಾವನಾತ್ಮಕ ಪ್ರೇಮಕಥೆ ಹೊಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ ಚಿತ್ರವನ್ನು ಬಿಡುಗಡೆಗೊಳಿಸಿ ಈ ವಿನೂತನ ಪ್ರಯೋಗಕ್ಕೆ ಶುಭ ಹಾರೈಸಿದರು. ನಿರ್ಮಾಪಕಿ ಸುನೀತಾ ಪ್ರದೀಪ್ ಕುಮಾರ್ ಮತ್ತು ಹಿರಿಯ ಪತ್ರಕರ್ತ ರೇಮಂಡ್ ಡಿ''ಕುನ್ಹಾ ತಾಕೋಡೆ ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.