Puneeth Rajkumar: ಶಿಕಾರಿಪುರದಲ್ಲಿ ಪುನೀತ್ ಸ್ಮರಣಾರ್ಥ 'ಅಪ್ಪು ಟ್ರೋಫಿ' ಕ್ರಿಕೆಟ್ ಪಂದ್ಯಾವಳಿ

By Suvarna NewsFirst Published Dec 22, 2021, 7:19 PM IST
Highlights

ಪುನೀತ್ ಅಗಲಿದರೂ ಅಭಿಮಾನಿಗಳಲ್ಲಿ ಮಾತ್ರ ಅಪ್ಪು ನೆನಪು ಹಸಿರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ 'ಅಪ್ಪು ಸ್ಮರಣಾರ್ಥ' ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಶಿಕಾರಿಪುರದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಂದ ಆಯೋಜನೆಗೊಂಡಿದೆ.

ಶಿವಮೊಗ್ಗ (ಡಿ.22): ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆ ನೋವಿನಿಂದ ಇನ್ನೂ ಜನರು ಹೊರಬಂದಿಲ್ಲ. ಜನರ ಪ್ರೀತಿಯ ಅಪ್ಪುವಿನ ಅಕಾಲಿಕ ಸಾವು ಚಿತ್ರರಂಗಕ್ಕೂ, ಕುಟುಂಬ, ಮಿತ್ರರು, ಅಭಿಮಾನಿಗಳಿಗೆ ಅತೀವ ನೋವು ಕೊಟ್ಟಿದೆ. ದಿನನಿತ್ಯ ಸಾವಿರಾರು ಜನರು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ನಮನ ಸಲ್ಲಿಸುತ್ತಿದ್ದಾರೆ. ಸ್ಟಾರ್ ನಟ ಅಗಲಿದರೂ ಅಭಿಮಾನಿಗಳಲ್ಲಿ ಮಾತ್ರ ಅಪ್ಪು ನೆನಪು ಹಸಿರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ 'ಅಪ್ಪು ಸ್ಮರಣಾರ್ಥ' ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಶಿಕಾರಿಪುರದಲ್ಲಿ ಕ್ರಿಕೆಟ್ ಟೂರ್ನಮೆಂಟ್ (Cricket Tournament) ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಂದ ಆಯೋಜನೆಗೊಂಡಿದೆ.

'ಅಪ್ಪು ಟ್ರೋಫಿ 2021 ಶಿಕಾರಿಪುರ' ಎಂಬ ಹೆಸರಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥಕದ ಸವಿನೆನಪಿಗಾಗಿ ಡಿಸೆಂಬರ್ 24 ರಂದು ಬೆಳಿಗ್ಗೆ ಶಿಕಾರಿಪುರ ಪಟ್ಟಣದ ಡಿಗ್ರಿ ಕಾಲೇಜು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ ಯುವಕರು ಈ ಪಂದ್ಯಾವಳಿಯನ್ನು ನಡೆಸುತ್ತಿದ್ದಾರೆ. ಡಿಸೆಂಬರ್ 24ರಿಂದ ನಡೆಯಲಿರುವ ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು, ಮೊದಲ ಬಾರಿಗೆ ಮೂರು ದಿನದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೊಂಡಿದೆ. ಜೊತೆಗೆ ಯೂಟ್ಯೂಬ್‌ನಲ್ಲಿ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ. 

Puneeth Rajkumar: ಲಕ್ಕಿಮ್ಯಾನ್ ಚಿತ್ರದ ಅಪ್ಪು ವಿಡಿಯೋ ಝಲಕ್ ಹಂಚಿಕೊಂಡ ಡಾರ್ಲಿಂಗ್​ ಕೃಷ್ಣ

ಕ್ರಿಕೆಟ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ತಂಡಗಳಿಗೆ ಪಂದ್ಯ ಗೆಲ್ಲುವುದು, ಹಣ ಗೆಲ್ಲುವುದು ಮುಖ್ಯವಾಗಿಲ್ಲ. ಅಪ್ಪು ಕಪ್ ಎಂಬ ಹೆಸರಿನ ಟ್ರೋಫಿಗಾಗಿ ತಂಡಗಳು ಹೋರಾಡುತ್ತವೆ.  ಹಾಗೂ 'ದಿಲ್ ಹೈ ಇಂಡಿಯಾ' ತಂಡದವರಿಂದ ರಂಗಮಂದಿರದಲ್ಲಿ 'ಅಪ್ಪು ನಮನ' ಕಾರ್ಯಕ್ರಮ ನಡೆಯಲಿದ್ದು, ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಸೇರಿದಂತೆ ಕನ್ನಡ ಚಿತ್ರರಂಗದ ನಟರು, ಗಾಯಕರು ಮತ್ತು ನಿರ್ದೇಶಕರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಸಾರ್ವಜನಿಕ     ಅನ್ನಸಂತರ್ಪಣೆ ಕಾರ್ಯಕ್ರಮವು ನಡೆಯಲಿದೆ. ವಿಶೇಷವಾಗಿ ಸಂಜೆ 'ಅಪ್ಪು ನಮನ' ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಲಿದ್ದು, ಪುನೀತ್ ಅಭಿಮಾನಿಗಳಿಗೆ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಶುಭ ಹಾರೈಸಿದ್ದಾರೆ.



ಇತ್ತೀಚೆಗೆ ನಟ ಶ್ರೀಮುರಳಿ ಅವರು ಪುನೀತ್ ರಾಜ್‍ಕುಮಾರ್ ಅವರ ಸಾಧನೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸುವ ವಿಚಾರವಾಗಿ ಒತ್ತಾಯ ಮಾಡಿದ್ದಾರೆ. ಕನ್ನಡ ಪಠ್ಯ ಪುಸ್ತಕದಲ್ಲಿ ಪುನೀತ್ ಅವರ ಸಾಧನೆ ಸೇರಿಸಬೇಕು. ಅಪ್ಪು ಅವರು ಸಾಧನೆ ಮಾಡಿದ್ದಾರೆ, ಅದನ್ನ ನಾವು ಗೌರವಿಸಬೇಕು. ಅಭಿಮಾನಿಗಳು ಹೇಳುತ್ತಿರುವುದು ನ್ಯಾಯವಾಗಿದೆ. ಅದನ್ನು ಗಮನಹರಿಸಿ ಮಾಡುವುದು ಒಳ್ಳೆಯದು. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದ್ದರು. ಪುನೀತ್ ತಮ್ಮ ಅದ್ಭುತ ವ್ಯಕ್ತಿತ್ವ, ಸರಳತೆ ಹಾಗೂ ವಿನಯವಂತಿಕೆಯಿಂದ ಎಲ್ಲರಿಗೂ ಪ್ರಿಯವಾಗಿದ್ದರು. ಮುಗ್ಧ ನಗುವಿನಿಂದ ಕನ್ನಡಿಗರ ಹೃದಯದಲ್ಲಿ ರಾರಾಜಿಸುತ್ತಿರುವ ಕರ್ನಾಟಕದ ಈ ಅಮೂಲ್ಯ ರತ್ನ ಎಂದೆಂದಿಗೂ ಅಮರರಾಗಿರುತ್ತಾರೆ. 

Puneeth Rajkumar: ಭಜರಂಗಿ 2 ಚಿತ್ರವನ್ನು ಪವರ್ ಸ್ಟಾರ್‌ಗೆ ಅರ್ಪಿಸಿದ ಶಿವರಾಜ್​ಕುಮಾರ್​

ಇನ್ನು ಪುನೀತ್ ರಾಜ್‌ಕುಮಾರ್ ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' (Gandhada Gudi) ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ವೈಲ್ಡ್‌ಲೈಫ್ ಫೋಟೋಗ್ರಾಫರ್ ಅಮೋಘವರ್ಷ (Amoghavarsha) ಅವರು ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಅವರು ನಿರ್ಮಾಣ ಮಾಡಿರುವ ಈ ವಿಡಿಯೋವನ್ನು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ, ಅಜನೀಶ್ ಲೋಕನಾಥ್ (Ajaneesh Loknath ) ಸಂಗೀತವಿದೆ. ಆನೆ, ಹುಲಿ, ಹಾವು ಸೇರಿದಂತೆ ಸುಂದರವಾದ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ವಿಡಿಯೋ ಕೊನೆಯಲ್ಲಿ ಅಪ್ಪು ಆಕಾಶ ನೋಡುತ್ತಿರುವ ವಿಡಿಯೋ ತೋರಿಸಿ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

click me!