50 ದಿನ ಪೂರೈಸಿದ ಕಾಂತಾರ: ಅಭಿಮಾನಿಗಳ ಗಮನ ಸೆಳೆದ ಮರಳಲ್ಲಿ ಮೂಡಿದ ಪಂಜುರ್ಲಿ ಕಲಾಕೃತಿ

By Shruthi KrishnaFirst Published Nov 14, 2022, 4:15 PM IST
Highlights

ಕಾಂತಾರ 50 ದಿನಗಳನ್ನು ಪೂರೈಸಿದ ಹಿನ್ನಲೇ ಮಣಿಪಾಲದ ಸ್ಯಾಂಡ್ ಹಾರ್ಟ್ ಕಲಾವಿದರು ಅದ್ಭುತ ಮರಳುಶಿಲ್ಪ ರಚಿಸಿದ್ದಾರೆ. ಮರಳಿನಲ್ಲಿ ಅರಳಿದ ಪಂಜುರ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾಗೆ 50 ದಿನಗಳ ಸಂಭ್ರಮ. ಹೌದು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆದರೂ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕರಾವಳಿ ದೈವಾರಾಧನೆಯ ಕಥೆ ಹೇಳುವ ಕಾಂತಾರ ಚಿತ್ರಕ್ಕೆ ಭಾರತೀಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಣಿಪಾಲದ ಸ್ಯಾಂಡ್ ಹಾರ್ಟ್ ಕಲಾವಿದರು ಅದ್ಭುತ ಮರಳುಶಿಲ್ಪ ರಚಿಸಿದ್ದಾರೆ.

ಉಡುಪಿಯ ಕಾಪು ಬೀಚ್‌ಗೆ ಭಾನುವಾರ ಭೇಟಿ ಕೊಟ್ಟವರಿಗೆ ಅಚ್ಚರಿ ಕಾದಿತ್ತು. ಕಡಲ ತೀರದ ಮರಳುರಾಶಿಯಲ್ಲಿ ಕಾಂತಾರ ಕಲಾಕೃತಿ ಪ್ರವಾಸಿಗರನ್ನು ಸ್ವಾಗತಿಸುತ್ತಿತ್ತು. ಕರಾವಳಿಯ ಕೌತುಕದ ಕತೆ ಹೇಳಿದ ಕಾಂತಾರ ಚಿತ್ರವು ಐವತ್ತು ದಿನ ಪೂರೈಸಿದ ಹಿನ್ನೆಲೆಯಲ್ಲಿ ಈ ಕಲಾಕೃತಿ ರಚಿಸಲಾಗಿತ್ತು. ಸ್ಯಾಂಡ್ ಹಾರ್ಟ್ ಕಲಾವಿದರು ಹೃದಯ ತುಂಬಿ ಈ ಕಲಾಕೃತಿ ರಚಿಸಿದ್ದಾರೆ.

ದಿನವಿಡೀ ಪರಿಶ್ರಮ ಪಟ್ಟು ರಚಿಸಿದ ಈ ಕಲಾಕೃತಿಯಲ್ಲಿ ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಚಿತ್ರಣ ಮೂಡಿಬಂದಿದೆ. ಐವತ್ತು ದಿನಗಳ ದಾಖಲೆ ಬರೆದ  ಚಿತ್ರತಂಡ ಕ್ಕೆ ಕಲಾವಿದರು ಬರಹದ ಮೂಲಕ ಶುಭ ಕೋರಿದ್ದಾರೆ. ಕಾಂತಾರದ ಸಕ್ಸಸ್ ಗೆ ಕೇವಲ ಚಿತ್ರತಂಡ ಮಾತ್ರವಲ್ಲ, ಕರುನಾಡೇ ಹೆಮ್ಮೆಯಿಂದ ಭೀಗುತ್ತಿದೆ. ಕರಾವಳಿ ಭಾಗದ ಇತರ ಕಲಾವಿದರಿಗೂ ಈ ಚಲನಚಿತ್ರ ಮುದ ನೀಡಿದೆ. ಇದೇ ಕಾರಣಕ್ಕೆ ಸ್ಯಾಂಡ್ ಹಾರ್ಟ್ ಕಲಾವಿದರು, ಈ ಸ್ಯಾಂಡ್ ಆರ್ಟ್ ರಚಿಸಿದ್ದಾರೆ.

Kantara ಹಾಡಿನ ವಿವಾದ; ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ 'ವರಾಹ ರೂಪಂ..' ಹಾಡು ಡಿಲೀಟ್

ಮರಳುಶಿಲ್ಪವೆಂದರೆ ತಾಳ್ಮೆಯ ಸಾಗರ

ಕರಾವಳಿ ಭಾಗದ ಸಮುದ್ರ ತೀರದಲ್ಲಿ ರಚಿಸುವ ಮರಳು ಶಿಲ್ಪಗಳೆಂದರೆ ವಿಶೇಷ ಆಕರ್ಷಣೆ ಇದೆ. ಈ ಮರಳು ಶಿಲ್ಪಗಳನ್ನು ರಚಿಸುವುದು ಸುಲಭದ ಕೆಲಸವಲ್ಲ. ದಿನವಿಡೀ ಶ್ರಮಪಟ್ಟು, ಹಲವು ಗಂಟೆಗಳ ಪರಿಶ್ರಮದ ಅಗತ್ಯವಿದೆ. ಜಾರುವ ಗುಣದ ಮರಳಿನ ಕಣಗಳನ್ಬು ಜೋಡಿಸಿ‌ ಕಲಾಕೃತಿ ಮೂಡಿಸುವುದೇ ಒಂದು ಸಾಹಸ. ಸ್ಯಾಂಡ್ ಹಾರ್ಟ್ ಹೆಸರಲ್ಲಿ ತಂಡ ಕಟ್ಟಿಕೊಂಡಿರುವ ಶ್ರೀನಾಥ್ ಮಣಿಪಾಲ, ವೆಂಕಿ‌ ಪಲಿಮಾರು, ರವಿ ಹಿರೇಬೆಟ್ಡು ಮರಳುಶಿಲ್ಪ ರಚನೆಯಲ್ಲಿ ಸಿದ್ದಹಸ್ತರು. ಇಷ್ಟೊಂದು‌ ಕಷ್ಟ ಪಟ್ಟು ತಯಾರಿಸಿದ ಈ ಮರಳು ಶಿಲ್ಪವನ್ನು ಕೆಲವೇ ನಿಮಿಷಗಳ ಕಾಲ ಮಾತ್ರ ನೋಡಬಹುದು. ನಂತರ ಈ ಕಲಾಕೃತಿ ಮರಳುಪಾಲಾಗುತ್ತೆ.

Siddhashree National Award: ನಟ ರಿಷಬ್‌ ಶೆಟ್ಟಿಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

ಕಾಂತಾರ ಬಗ್ಗೆ, 

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ.  ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ.

click me!