
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ( Namma Metro ) ವಿಸ್ತರಣೆ ಆಗುತ್ತಲಿದೆ. ಈಗ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು ಇಡಲು ಸಿದ್ದರಾಮಯ್ಯನವರ ಸರ್ಕಾರ ನಿರ್ಧಾರ ಮಾಡಿದ್ದು, ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆಯಂತೆ. ಮೆಟ್ರೋ ಮಾಡಲು ಅಂದು ಸ್ವಂತ ಖರ್ಚು ಮಾಡಿ ಸರ್ವೇ ಮಾಡಿದ್ದ, ಲಂಡನ್ಗೆ ಹೋಗಿದ್ದ ಶಂಕರ್ ನಾಗ್ ಅವರನ್ನು ( Shankar Nag ) ಸರ್ಕಾರ ಮರೆತಿದೆ.
“ಸಿಎಂ ಸಿದ್ದರಾಮಯ್ಯ ಅವರು, “ನಮ್ಮ ಮೆಟ್ರೋಗೆ ಸೇಂಟ್ ಮೇರಿ ಹೆಸರಿಡಲು ಸಿದ್ದರಾಮಯ್ಯ ಅವರ ಸರ್ಕಾರ ರೆಡಿಯಾಗಿದೆ. ನಾವು ಕೇಂದ್ರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡ್ತೀವಿ, ಕೇಂದ್ರ ಅಸ್ತು ಅಂದರೆ ನಾವು ಅನುಷ್ಠಾನಕ್ಕೆ ತರುತ್ತೇವೆ. 6-1-2025 ರಲ್ಲಿ ಕರ್ನಾಟಕ ಕ್ರಿಶ್ಚಿಯನ್ ಪ್ರಾಧಿಕಾರವನ್ನು ಮಾಡಿದ್ದೇವೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆ ತರಲು ಪ್ರಯತ್ನ ಮಾಡಿದ್ದೇವೆ, ಇನ್ನು ನಾವು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ, ಅಲ್ಲಿ ಯಾವುದೇ ಜಾತಿ, ಧರ್ಮದ ಬೇಧಭಾವ ಮಾಡಿಲ್ಲ” ಎಂದು ಹೇಳಿದ್ದಾರೆ.
ವರ್ಷಗಳ ಹಿಂದೆ ಅರುಂಧತಿ ನಾಗ್ ಅವರು, “ಶಂಕರ್ ನಾಗ್ ಅವರು ಸಿನಿಮಾಗಳನ್ನು ಮಾಡಿದ್ದಾರೆ, ಬದುಕಿದ್ದ ಚಿಕ್ಕ ಕಾಲಾವಧಿಯಲ್ಲಿ ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ ತುಂಬ ಕೊಡುಗೆ ನೀಡಿದ್ದಾನೆ. ಕರ್ನಾಟಕದಲ್ಲಿ ಅಂಡರ್ಗ್ರೌಂಡ್ ಮೆಟ್ರೋ ಮಾಡಬೇಕು ಎನ್ನೋದು ಅವನ ಕನಸಾಗಿತ್ತು. ಎಸ್ ಆರ್ ಬೊಮ್ಮಾಯಿ ಅವರ ಜೊತೆ ಲಂಡನ್ಗೆ ಹೋಗಿ ಅಲ್ಲಿ ಮೆಟ್ರೋದವರ ಜೊತೆ ಚರ್ಚೆ ಮಾಡಿ ಬಂದಿದ್ದನು. ಯಾಕೆ ನಿನ್ನ ಸ್ವಂತ ದುಡ್ಡಿನಲ್ಲಿ ಲಂಡನ್ಗೆ ಹೋಗ್ತೀಯಾ? ನಿನಗೆ ದುಡ್ಡು ಹೆಚ್ಚಾಗಿದ್ಯಾ? ಅಂತ ನಾನು ಕೇಳಿದಾಗ ಅವನು, “ನನಗೆ ಕನ್ನಡ ಎಲ್ಲವನ್ನು ಕೊಟ್ಟಿದೆ, ನಾನು ಕನ್ನಡಕ್ಕೋಸ್ಕರ ಲಂಡನ್ಗೆ ಹೋಗೋಕೆ ಟಿಕೆಟ್ ತಗೊಳೋಕೆ ಆಗಲ್ವಾ? ನನಗೆ ಒಂದು ರೈಲ್ವೆ ಕೊಡೋಕೆ ಆಗಲ್ವಾ?” ಅಂತ ಕೇಳಿದ. ಅಷ್ಟು ಒಳ್ಳೆಯ ಮನಸ್ಸು ಇದ್ದ ಹುಡುಗ ಬದುಕಿದ್ದ ಕಡಿಮೆ ವರ್ಷ. ನಾವು ಕೇಳಿಕೊಂಡು ಬಂದಿದ್ದು ಅಷ್ಟೇ, ಅವನು ಕೇಳಿಕೊಂಡು ಬಂದಿದ್ದು ಅಷ್ಟೇ ಅನಿಸತ್ತೆ” ಎಂದು ಹೇಳಿದ್ದಾರೆ.
ಅಂದಹಾಗೆ ಎಂಟಕ್ಕೂ ಅಧಿಕ ವರ್ಷಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅರುಂಧತಿ ನಾಗ್ ಅವರು, “ಮೆಟ್ರೋ ಆಗಬೇಕು ಎಂದು ಶಂಕರ್ ನಾಗ್ ಅವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಅರ್ಜಿ ಕೊಟ್ಟಿದ್ದರು. ಬೆಂಗಳೂರಿನ ಭೌಗೋಳಿಕ ಸ್ಥಿತಿ ಹೇಗಿದೆ ಎಂದು ಅವರು ಸರ್ವೇ ಮಾಡಿದ್ದರು. ಇಂದು ಮರಗಳನ್ನು ಕಡಿದು ಮೆಟ್ರೋ ಮಾಡಿದ್ದಾರೆ. ಆದರೆ ಶಂಕರ್, ಅಂಡರ್ಗ್ರೌಂಡ್ನಲ್ಲಿ ಮೆಟ್ರೋ ಮಾಡಬೇಕು ಅಂತಿದ್ದನು. ಆದರೆ ಶಂಕರ್ ಪ್ಲ್ಯಾನ್ಗೆ ಇದಕ್ಕಿಂತ ಎಂಟು ಪಟ್ಟು ಖರ್ಚು ಆಗುತ್ತಿತ್ತು, ಆದರೆ ನಾವು ದೂರಲೋಚನೆ ಮಾಡಬೇಕು. ದುಡ್ಡು ಖರ್ಚು ಆಗತ್ತೆ ಅಂತ ಸುಮ್ಮನೆ ಇರಬಾರದು. ಮೆಡಿಕಲ್ ನೆಟ್ವರ್ಕ್ ಮಾಡಬೇಕು ಎನ್ನೋದಿತ್ತು. ಏರ್ಪೋರ್ಟ್ನಿಂದ ಹೆಲಿಕ್ಯಾಪ್ಟರ್ ಮೂಲಕ ರೋಗಿಗಳನ್ನು ಕರೆದುಕೊಂಡು ಬರಬೇಕು ಎನ್ನೋದಿತ್ತು. ಶಂಕರ್ ನಾಗ್ ಅಂದು ವಿಜ್ಞಾನ, ತಂತ್ರಜ್ಞಾನ ಎಂದು ಸಿಕ್ಕಾಪಟ್ಟೆ ಓದುತ್ತಿದ್ದರು” ಎಂದು ಹೇಳಿದ್ದರು.
“ಇಂದು ರೋಲ್ ಮಾಡೆಲ್ ಇಲ್ಲ. ಯುವಜನತೆಗೆ ಇಂಥ ಮಾದರಿ ಬೇಕಿತ್ತು. ಸಾಮಾನ್ಯ ಕುಟುಂಬದಲ್ಲಿ ಓದಿದ ಹುಡುಗ ಶಂಕರ್ ನಾಗ್, ಎಂದಿಗೂ ಓದೋದು ಬಿಡಲಿಲ್ಲ. ಚುನಾವಣೆ ಟೈಮ್ನಲ್ಲಿ ರಾಮಕೃಷ್ಣ ಹೆಗಡೆ ಅವರು ಖರ್ಚಿಗೋಸ್ಕರ ಶಂಕರ್ನಾಗ್ಗೆ ಹಣ ಕೊಟ್ಟಿದ್ದರು. ಎಲ್ಲ ಖರ್ಚು ಆದ್ಮೇಲೆ ಉಳಿದ ಹಣವನ್ನು ಶಂಕರ ನಾಗ್ ಅವರು ಮರಳಿ ಹೆಗಡೆ ಅವರಿಗೆ ನೀಡಿದರಂತೆ. ನನ್ನ ರಾಜಕೀಯ ಜೀವನದಲ್ಲಿ ಇಂಥವರನ್ನು ನೋಡಿಲ್ಲ ಎಂದು ಹೆಗಡೆ ಅವರು ಹೇಳಿದ್ದರು. ಕರ್ನಾಟಕ ಅಥವಾ ಕನ್ನಡಿಗರಿಗೆ ಹೇಗೆ ಭ್ರಷ್ಟಾಚಾರ ನಿಲ್ಲಿಸೋದು? ನಾನು ನಾಡಿಗೆ ಏನು ಕೊಡಬಹುದು? ಇದು ನನ್ನ ನಾಡು ಎನ್ನೋದಿದ್ದರೆ ನಮ್ಮ ದೇಶ ಶ್ರೇಷ್ಠ ಆಗುತ್ತದೆ” ಎಂದು ಅರುಂಧತಿ ನಾಗ್ ಹೇಳಿದ್ದರು.
ಮೆಟ್ರೋಗೆ ಶಂಕರ್ ನಾಗ್ ಹೆಸರು ಇಡಬೇಕು ಎಂದು ಅಭಿಯಾನ ಕೂಡ ಶುರುವಾಗಿದೆ. ಈ ಬಗ್ಗೆ ಕೆಲ ತಿಂಗಳುಗಳ ಹಿಂದೆಯೇ ಮಾತನಾಡಿದ್ದ ನಟ ರಮೇಶ್ ಭಟ್ ಅವರು, “1986, 1987ರಲ್ಲಿ ಸ್ವಂತ ದುಡ್ಡಿನಿಂದ ಬೆಂಗಳೂರು ಸರ್ವೇ ಮಾಡಿದ್ದರು. ಅಂಡರ್ಗ್ರೌಂಡ್ನಲ್ಲಿ ಮರಗಳನ್ನು ಕಡಿಯದೆ ಮೆಟ್ರೋ ಮಾಡಬೇಕು ಎನ್ನೋ ಆಸೆ ಇತ್ತು. ಆದರೆ ನಮ್ಮ ಸರ್ಕಾರದವರಿಗೆ ಇದನ್ನೆಲ್ಲ ನೋಡುವ, ಕೇಳಿಸಿಕೊಳ್ಳುವ ವ್ಯವಧಾನವೇ ಇಲ್ಲ. ಅಂದಿನ ಕಾಲದಲ್ಲಿ ಅವನು ಮೆಟ್ರೋಗೆ 10 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದನು. ಅಂಥವನಿಗೆ ಸರ್ಕಾರ ಗೌರವ ಕೊಡೋದಿಲ್ಲ. ಆದರೆ ನಾವು ಅವರ ಆದರ್ಶಗಳನ್ನು ಫಾಲೋ ಮಾಡಬೇಕು, ಅದೊಂದೇ ನಮ್ಮ ಪಾಲಿಗೆ ಉಳಿದಿದೆ” ಎಂದು ಹೇಳಿದ್ದರು.
ನಟ ಶಂಕರ್ ನಾಗ್ ಅವರು 36ನೇ ವಯಸ್ಸಿಗೆ 1990ರಲ್ಲಿ ದಾವಣಗೆರೆ ಹೊರಭಾಗದಲ್ಲಿ ನಡೆದ ಕಾರ್ ಅಪಘಾತದಲ್ಲಿ ತೀರಿಕೊಂಡರು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವರು ನಟ, ನಿರ್ದೇಶಕ, ಬರಹಗಾರ ಆಗಿ ಗುರುತಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.