
ರಾಯಚೂರು (ಫೆ.24): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಗುರು ವೈಭವೋತ್ಸವದಲ್ಲಿ ಸ್ಟಾರ್ ನಟರು ಭಾಗಿಯಾಗಿ ರಾಯರ ದರ್ಶನ ಪಡೆದಿದ್ದಾರೆ. ಈ ಸಂಭ್ರಮದ ವೇದಿಕೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್, ನಮ್ಮ ಕನ್ನಡದ ಹೆಸರನ್ನು ಇಡೀ ವಿಶ್ವಕ್ಕೆ ತಲುಪಿಸಿದ ಅದ್ಭುತ ನಟ ರಿಷಬ್ ಶೆಟ್ಟಿ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಿಷಬ್ ಅವರ ಶ್ರಮ ಮತ್ತು ಅವರು ಆಯ್ಕೆ ಮಾಡಿಕೊಳ್ಳುವ ಕಥೆಗಳ ಬಗ್ಗೆ ಕೇಳಿದಾಗ ತಮಗೆ ಅಗಾಧವಾದ ಆನಂದವಾಗುತ್ತದೆ ಎಂದು ಜಗ್ಗೇಶ್ ಭಾವುಕರಾಗಿ ನುಡಿದರು.
ರಿಷಬ್ ಶೆಟ್ಟಿ ಅವರ ಸಿನಿಮಾಗಳ ಬಗ್ಗೆ ಪ್ರಸ್ತಾಪಿಸಿದ ಜಗ್ಗೇಶ್, 'ಇಂತಹ ಅದ್ಭುತ ಕೆಲಸಗಳನ್ನು ಮಾಡಬೇಕೆಂದರೆ ಕೇವಲ ಶ್ರಮವಿದ್ದರೆ ಸಾಲದು, ದೈವ ಪ್ರೇರಣೆಯೂ ಇರಬೇಕು. ನಮ್ಮ ನಾಡಿನ ಸೊಗಡನ್ನು ಪ್ರಪಂಚಕ್ಕೆ ತೋರಿಸುವ ಮೂಲಕ ರಿಷಬ್ ಕನ್ನಡಿಗರ ಹೆಮ್ಮೆ ಎನಿಸಿದ್ದಾರೆ ಎಂದರು. ರಿಷಬ್ ಶೆಟ್ಟಿ ಅವರ ಸಾಧನೆಯ ಹಿಂದೆ ದೈವಿಕ ಶಕ್ತಿ ಕೆಲಸ ಮಾಡುತ್ತಿದೆ ಎಂಬ ನಂಬಿಕೆಯನ್ನು ಅವರು ಈ ವೇಳೆ ವ್ಯಕ್ತಪಡಿಸಿದರು.
ರಿಷಬ್ ಶೆಟ್ಟಿ ಅವರ ಮುಂಬರುವ 'ಜೈ ಹನುಮಾನ್' ಚಿತ್ರದ ಬಗ್ಗೆ ಮಾತನಾಡಿದ ಜಗ್ಗೇಶ್, 'ರಾಯರ ನೆರಳಿನಂತೆ ಹನುಮ ಎನ್ನುವ ಆಡುಮಾತಿದೆ. ಈಗ ರಿಷಬ್ ಹನುಮನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಗ್ಗೆ ಅವರ ಬಾಯಲ್ಲಿ ಕೇಳಿದಾಗ ನನಗೆ ರೋಮಾಂಚನವಾಯಿತು. 'ಹನುಮ ಎಲ್ಲಿ ಹುಟ್ಟಿದ್ದಾನೋ, ಅಲ್ಲಿಂದಲೇ ಚಿತ್ರೀಕರಣ ಶುರು ಮಾಡಿದ್ದೇನೆ, ನಮ್ಮ ಹನುಮ ಕನ್ನಡಿಗ' ಎಂದು ರಿಷಬ್ ಹೇಳಿದರು. ಈ ಮಾತು ಕೇಳಿ ನನಗೆ ಹೆಮ್ಮೆ ಎನಿಸಿತು' ಎಂದು ಜಗ್ಗೇಶ್ ಸಭೆಯಲ್ಲಿ ಹಂಚಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.