ಇದ್ಯಾವುದ್ರೀ ಕರ್ಮಾ ದುಸ್ಸೇರಾ, ದಿವಾಲಿ?; ಕವಿರಾಜ್ ಆಕ್ರೋಶ

By Suvarna NewsFirst Published Oct 27, 2020, 3:53 PM IST
Highlights

ದೀಪಾವಳಿ, ದಸರಾ ಆಚರಣೆ ಎಂದು ಬಳಸುವ ಬದಲು ದುಸ್ಸೇರಾ, ದಿವಾಲಿ ಬಳಸಿರುವುದಕ್ಕೆ ಚಿತ್ರ ಸಾಹಿತಿ ಕವಿರಾಜ್ ಆಕ್ರೋಶ..

ಸ್ನೇಹಿತರಿಗೆ, ಬಂಧು ಬಾಂಧವರಿಗೆ,  ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಗಳಲ್ಲಿ ವಿಶ್ ಮಾಡುವುದು ಸಾಮಾನ್ಯ. ಹಾಗೆ ವಿಶ್ ಮಾಡುವಾಗ ಉತ್ತರ ಭಾರತೀಯರ ಪ್ರಭಾವ ನಮ್ಮ ಮೇಲೆ ಆಗುವುದನ್ನು ಗಮನಿಸಬಹುದು. ದಸರಾವನ್ನು ದಶೆರಾ, ದೀಪಾವಳಿಯನ್ನು ದಿವಾಲಿ ಅಂತೆಲ್ಲಾ ವಿಶ್ ಮಾಡ್ತೀವಿ. ಅದು ತಪ್ಪಲ್ಲದೇ ಇರಬಹುದು. ಆದರೆ ನಮ್ಮ ಕನ್ನಡದಲ್ಲಿಯೇ ಚಂದದ ಪದಗಳಿರುವಾಗ ಯಾಕೆ ನಾವದನ್ನು ಅಪಭ್ರಂಶಗೊಳಿಸಬೇಕು. ಇದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೇ ಇರುತ್ತದೆ. ಈಗ ಸಾಹಿತಿ ಕವಿರಾಜ್ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ಕೊತ್ಮೀರಿ ಸೊಪ್ಪು' ವಿಡಿಯೋ ವೈರಲ್; ಸಾರ್ವಜನಿಕರ ಗಮನ ಸೆಳೆದ ಕವಿರಾಜ್‌ ಪೋಸ್ಟ್‌!

ಕವಿರಾಜ್‌ ಮಾತುಗಳು:
'ಹುಟ್ಟಿದಾಗಿನಿಂದಲೂ ಎಷ್ಟು ಸವಿಯಾಗಿ, ಸರಳವಾಗಿ, ಸಹಜವಾಗಿ, ಅರ್ಥಗರ್ಭಿತವಾಗಿ 'ದೀಪಾವಳಿ' 'ದಸರಾ' ಅನ್ಕೊಂಡು, ಆಚರಿಸ್ಕೊಂಡು ಬಂದಿದೀವಿ. ಇದ್ಯಾವುದ್ರೀ ಈಗ ಕರ್ಮ, ದುಸ್ಸೇರಾ, ದಿವಾಲಿ? 
ನಮ್ಮದು ಅಂತಾ ಒಂದು ಮೆದುಳಿದೆ ಅಲ್ವಾ ??  ಅದನ್ನ ಉಪಯೋಗಿಸೋದೇ ಇಲ್ವಾ? ಯಾರ್ ಬೇಕಾದರೂ ಏನ್ ಬೇಕಾದ್ರೂ ಕಸ ತಂದು ನಮ್ಮ ಮೆದುಳಿಗೆ ಬಿಸಾಡಿ ನಮ್ಮನ್ನು ಇಷ್ಟು ಹೀನಾಯವಾಗಿ ಅವರ ಕೈ ಗೊಂಬೆ ಆಗಿಸಿಕೊಳ್ಳಬಹುದಾದಷ್ಟು ಟೊಳ್ಳು ವ್ಯಕ್ತಿತ್ವವೇ ನಮ್ಮದು? ಏನು ಸಾಧಿಸೋಕ್ ಹೋಗ್ತಿದ್ದೀವಿ, ಎಲ್ಲದ್ದರಲ್ಲೂ ಇನ್ನ್ಯಾರನ್ನೋ ಅನುಕರಿಸುವ ಗುಲಾಮಗಿರಿಯನ್ನೇ ತೆವಲಾಗಿಸಿಕೊಂಡು? ನಮ್ಮತನಗಳನ್ನೆಲ್ಲಾ ತೊರೆಯುತ್ತಾ, ತೊರೆಯುತ್ತಾ ಕೊನೆಗೆ ಏನಾಗ ಹೊರಟಿದ್ದೀವಿ ??????' ಎಂದು ಬರೆದಿದ್ದಾರೆ.

 

ನೆಟ್ಟಿಗರ ಅಭಿಪ್ರಾಯ:
ಕವಿರಾಜ್‌ ಹೇಳಿರುವ ಮಾತುಗಳು ನೂರಕ್ಕೆ ನೂರು ಸತ್ಯ ಎಂದು ನೆಟ್ಟಿಗರು ಒಪ್ಪಿಕೊಂಡಿದ್ದಾರೆ. ಅವರ ಪೋಸ್ಟಿಗೆ ಕಾಮೆಂಟ್ ಮಾಡುವ ಮೂಲಕ ಕವಿರಾಜ್ ಅಭಿಪ್ರಾಯವನ್ನು ಸಮ್ಮತಿಸಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು ನೆಪೊಟಿಸಂ ಪರ-ವಿರೋಧ ಚರ್ಚೆ! 

'ನಮ್ಮತನವೆಂಬ ಅಸ್ತಿತ್ವ, ಅಸ್ಮಿತೆ ಮಣ್ಣು ಪಾಲಾಗುವ ದಿನಗಳು ದೂರವಿಲ್ಲ' ಎಂದು ಒಬ್ಬರು ಬರೆದರೆ, ಮತ್ತೊಬ್ಬರು ದಶ+ಹರ=ದಸರಾ=ರಾವಣ. ಇಂಗ್ಲಿಷ್ ಭಾಷಾ ಪ್ರಯೋಗ ನಮ್ಮ ಭಾಷೆಯಷ್ಟು ಸರಳವಲ್ಲ. ಹೀಗಾಗಿ ನೀವು ಹೇಳಿರುವಂಥ ಎಡವಟ್ಟುಗಳು ಆಗುತ್ತಿರುತ್ತವೆ. ಇನ್ನು ಕರ್ನಾಟಕದಲ್ಲಿ ಕಾಸ್ಮೊಪಾಲಿಟನ್ ಸಂಸ್ಕೃತಿ ಬಂದು ದಶಕಗಳೇ ಕಳೆದಿವೆ. ಹೀಗಾಗಿ ಹಿಂದಿಯ 'ದಿವಾಲಿ' ಪದಪ್ರಯೋಗ ಸಾಮಾನ್ಯವಾಗಿದೆ. ಅದನ್ನು ಬಳಸುವವರಿಗೇನು ಗೊತ್ತು? ಕನ್ನಡದಲ್ಲಿ ಅದರರ್ಥ ಹಾಳಾಗಿ ಹೋಗುವುದು ಎಂದು?' ಹೇಳಿದ್ದಾರೆ. 

ಒಟ್ಟಿನಲ್ಲಿ ನಮ್ಮ ಕನ್ನಡ ನಮ್ಮ ಮಾತೃ ಭಾಷೆಯನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಎಂಬುದು ಕವಿರಾಜ್‌ ಅವರ ಶ್ರಮ.

click me!