ಮಡದಿಗೆ ನೆಟ್ಟಿಗರ ಚುಚ್ಚು ಮಾತು, ಕುಟುಂಬದಲ್ಲಿ ಅಸಮಾಧಾನ: ನೋವು ತೋಡಿಕೊಂಡ ಕಿರಿಕ್ ಕೀರ್ತಿ

By Suvarna NewsFirst Published Sep 11, 2021, 2:26 PM IST
Highlights

ನೆಟ್ಟಿಗನೊಬ್ಬ ಮಾಡಿದ ಕಾಮೆಂಟ್‌ನಿಂದ ಒಬ್ಬರ ಜೀವನದಲ್ಲಿ ಎಷ್ಟೆಲ್ಲಾ ತೊಂದರೆ ಆಗಬಹುದು ಗೊತ್ತಾ? ಕಿರಿಕ್ ಕೀರ್ತಿ ಪತ್ನಿ ಅರ್ಪಿತಾ ತಂದೆಯನ್ನು ಅಪ್ಪಿಕೊಂಡು ಅಳುತ್ತಿರುವ ಫೋಟೋ ಹಂಚಿಕೊಂಡು, ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಆರ್‌ಜೆ, ನಿರೂಪಕ, ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಕಿರಿಕ್ ಕೀರ್ತಿ ಪತ್ನಿ ಅರ್ಪಿತಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದು ಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಹಾಗೂ ಅನೇಕ ಖಾಸಗಿ ಫೋಟೋಶೂಟ್‌ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಪೋಸ್ಟ್ ಹಾಕುತ್ತಲೇ ಇರುತ್ತಾರೆ ಅಂದಾಕ್ಷಣ ಅವರ ಜೀವನದಲ್ಲಿ ನಡೆಯುವುದು ಇಷ್ಟೇ, ಅವರ ಬಗ್ಗೆ ನಿಮಗೆ ಎಲ್ಲಾ ಗೊತ್ತಿದೆ ಎಂದು ತಿಳಿದುಕೊಳ್ಳಬೇಡಿ. ಅರ್ಪಿತಾ ಅವರ ಪೋಟೋಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದವರಿಗೆ ಕೀರ್ತಿ ಉತ್ತರಿಸಿದ್ದಾರೆ.

'ಈ ಫೋಟೋ ಹಿಂದೆ ಒಂದು ಕಥೆ ಇದೆ. ಬಹಳ ಬೇಸರದಿಂದ ಇದನ್ನು ಶೇರ್ ಮಾಡ್ತಿದ್ದೇನೆ. ಇತ್ತೀಚೆಗೆ ನನ್ನ ಮಡದಿಯ ಜೊತೆಗೊಂದು ಫೋಟೋ ಶೇರ್ ಮಾಡಿದ್ದೆ. ಆ ಫೋಟೋಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ರು. ಅದ್ರಲ್ಲಿ ಒಬ್ಬರು ಅವಳನ್ನು ವಿಧವೆ ಅಂತ ಕರೆದಿದ್ರು. ಆ ಕಮೆಂಟ್ ನನ್ನ ಅತ್ತೆ ಮಾವನಿಗೆ ತುಂಬಾ ನೋವುಂಟು ಮಾಡಿತ್ತು. ಅವತ್ತು ಆ ಫೋಟೋದಲ್ಲಿ ತಾಳಿ ಇರಲಿಲ್ಲ ಅನ್ನೋ ಕಾರಣಕ್ಕೆ ತುಂಬಾ ಜನ‌ ಕೆಟ್ಟದಾಗಿ ಕಮೆಂಟ್ ಮಾಡಿದ್ರು. ಆ ಕಮೆಂಟ್‌ನಿಂದಾಗಿ ಅವಳ ಅಪ್ಪ ಅಮ್ಮ ಅವಳ ಜೊತೆ ಮಾತಾಡೋದೇ ಬಿಟ್ಟಿದ್ರು. ಯಾಕಮ್ಮ ಹೀಗೆಲ್ಲಾ ಮಾತಾಡ್ತಾರೆ ಅಂತ ಕಣ್ಣೀರಾಗಿದ್ರು. 15 ದಿನದಿಂದ ಅತ್ತೆ, ಮಾವ ನನ್ನ ಮಡದಿ ಜೊತೆ ಮಾತಾಡಿರಲಿಲ್ಲ. ದಿನವೂ ನೊಂದುಕೊಳ್ತಿದ್ಲು,' ಎಂದು ಬರೆದು ಅಪ್ಪನನ್ನು ತಬ್ಬಿಕೊಂಡು ಅಳುತ್ತಿರುವ ಅರ್ಪಿತಾ ಫೋಟೋ ಹಂಚಿಕೊಂಡಿದ್ದಾರೆ.

ಸಂಸಾರದ ಸರಿಗಮದಲ್ಲಿ ಸಪ್ತವರ್ಷ ದಾಟಿದ ‘ಕಿರಿಕ್’ಜೋಡಿ!

'15 ದಿನದ ನಂತರ ಇವತ್ತು ಗೌರಿ ಹಬ್ಬ ಅಂತ ಮನೆಗೆ ಬಂದಾಗ ನನ್ನ ಮಡದಿ ಕಣ್ಣೀರಾದ್ಲು. ಬಿಕ್ಕಿಬಿಕ್ಕಿ ಅತ್ತು ಅಪ್ಪ ಅಮ್ಮನನ್ನು ತಬ್ಬಿ ಗಳಗಳನೆ ಕಣ್ಣೀರು ಹಾಕಿದ್ಲು. ಒಂದು ಕಮೆಂಟ್ ಏನೆಲ್ಲಾ ಮಾಡಿಬಿಡ್ತು. ಯಾವ ಖುಷಿಗೆ ಕಮೆಂಟ್ ಮಾಡ್ತಾರೋ, ಗೊತ್ತಿಲ್ಲ. ಒಂದು ಕಮೆಂಟ್ ಏನೆಲ್ಲಾ ಮಾಡಬಹುದು ಯೋಚಿಸಿ. ಈ ಸೋಷಿಯಲ್ ಮೀಡಿಯಾವನ್ನು ನಿಮ್ಮ ವಿಕೃತ ಸಂತೋಷಕ್ಕೆ ಬಳಸಿಕೊಳ್ಳಬೇಡಿ. ನನ್ನ ಮೇಲಿನ ಕೋಪ ನನ್ನ ಮೇಲಿರಲಿ. ಕುಟುಂಬದವರ ಮೇಲೆ ಬೇಡ. ಒಂದು ನೆಗೆಟಿವ್ ಕಮೆಂಟ್‌ನಿಂದ ಅದರಿಂದ ಎಷ್ಟೋ ಸಂಸಾರಗಳು ಹೀಗಾಗಿವೆ. ಹಾಗಾಗಿಯೇ ಫೇಸ್ ಬುಕ್ಕಲ್ಲಿ ಕಮೆಂಟ್ ಆಪ್ಷನ್ನೇ ಡಿಲೀಟ್ ಮಾಡಿಬಿಟ್ಟೆ. ಕೆಲವರ ವಿಕೃತಿಗೆ ನಾವ್ಯಾಕೆ ನೋವು ತಿನ್ನಬೇಕು? ಕೈ ಮುಗಿದು ಕೇಳ್ತೀನಿ ಪ್ಲೀಸ್ ಯಾರನ್ನೂ ನೋಯಿಸಬೇಡಿ. ಇಷ್ಟವಿಲ್ಲ ಅಂದ್ರೆ unfollow ಮಾಡಿ. ಕೆಟ್ಟದಾಗಿ ಯಾರಿಗೂ, ಯಾವತ್ತೂ ಕಮೆಂಟ್ ಮಾಡಬೇಡಿ. ಕಣ್ಣೀರಲ್ಲೇ ಇದನ್ನು ಟೈಪ್ ಮಾಡುತ್ತಿದ್ದೇನೆ. ಅಲ್ಲಿರುವ ನನ್ನ ಮಗನ ಸಂತೋಷವಷ್ಟೇ ನನ್ನ ಇವತ್ತಿನ ಸ್ವರ್ಗ. ಧನ್ಯವಾದ .ತಪ್ಪಿದ್ದರೆ ಕ್ಷಮೆ ಇರಲಿ,' ಎಂದು ಬರೆದುಕೊಂಡಿದ್ದಾರೆ.

 

click me!