ಬೆಂಗಳೂರು ವಿವಿ ಬಿಕಾಂ ಪಠ್ಯ ಪುಸ್ತಕದಲ್ಲಿ ಪುನೀತ್‌ ರಾಜ್‌ಕುಮಾರ್‌!

Published : Dec 23, 2022, 10:52 AM IST
 ಬೆಂಗಳೂರು ವಿವಿ ಬಿಕಾಂ ಪಠ್ಯ ಪುಸ್ತಕದಲ್ಲಿ ಪುನೀತ್‌ ರಾಜ್‌ಕುಮಾರ್‌!

ಸಾರಾಂಶ

ಬಿಕಾಂ ಪದವಿ ಮೂರನೇ ಸೆಮಿಸ್ಟರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಆಯ್ದ ಭಾಗವನ್ನು ಪಠ್ಯಕ್ಕೆ ಆಳವಡಿಸಲಾಗಿದೆ. 

ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಕರ್ನಾಟಕದ ರತ್ನ ಪುನೀತ್ ರಾಜ್‌ಕುಮಾರ್ ಕುರಿತ ಪಾಠ ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ. ಬಿಕಾಂ ಪದವಿ ಮೂರನೇ ಸೆಮಿಸ್ಟರ್‌ನ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್‌ ಅವರ ಜೀವನದ ಆಯ್ದಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಳ್ಳಲಾಗಿದೆ.

ಈ ಹಿಂದೆ ಪುನೀತ್‌ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಅವರ ಅಭಿಮಾನಿಗಳು ಸರಕಾರಕ್ಕೆ ಪತ್ರ ಬರೆದಿದ್ದರು. ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದರು. ಇದೀಗ ಬೆಂಗಳೂರು ವಿವಿ ಈ ಕೋರಿಕೆಗೆ ಅಸ್ತು ಎಂದಿದೆ. ಡಾ.ಶರಣು ಹುಲ್ಲೂರು ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರುವ ‘ನೀನೇ ರಾಜಕುಮಾರ್‌’ ಕೃತಿಯ ‘ಲೋಹಿತ್‌ ಎಂಬ ಮರಿಮುದ್ದ’ ಭಾಗವನ್ನು ಪಠ್ಯದಲ್ಲಿ ಬಳಸಿಕೊಳ್ಳಲಾಗಿದೆ.

ನೀನೇ ರಾಜಕುಮಾರ್ 4 ಆವೃತ್ತಿ:

ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಹನ್ನೊಂದು ತಿಂಗಳಲ್ಲಿ ನಾಲ್ಕನೇ ಮರುಮುದ್ರಣ ಕಂಡಿದ್ದು, ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಾಲ್ಕನೇ ಆವೃತ್ತಿಯನ್ನು ಇಂದು ಬೆಂಗಳೂರಿನ ಪಿ.ಆರ್.ಕೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು. 15 ಮಾರ್ಚ್ 2022ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಆನಂತರ ಈ ಪುಸ್ತಕವು ಅಮೆಜಾನ್ , ಸಪ್ನಾ ಸೇರಿದಂತೆ ಹಲವು ಕಡೆ ಟಾಪ್ ಪಟ್ಟಿಯಲ್ಲಿ ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸತತ ನಾಲ್ಕು ಮುದ್ರಣಗಳನ್ನು ಕಂಡು ಇನ್ನೂ ದಾಖಲೆ ರೀತಿಯಲ್ಲೇ ಮಾರಾಟವಾಗುತ್ತಿದೆ. ಅಲ್ಲದೇ, ಈ ಪುಸ್ತಕದೊಂದಿಗೆ ಪುನೀತ್ ಅವರ ಸಹಿ ಇರುವಂತಹ ಫೋಟೋ ಮತ್ತು ಬುಕ್ ಮಾರ್ಕ್ ಕೂಡ ಉಚಿತವಾಗಿ ಕೊಡಲಾಗುತ್ತಿದೆ.

Gandhada Gudi ಅಭಿಮಾನಿ ಕೈ ಮೇಲೆ ಅಪ್ಪು ಟ್ಯಾಟು: ಭಾವುಕರಾಗಿ ಅಪ್ಪಿಕೊಂಡ ಅಶ್ವಿನಿ ಪುನೀತ್

ಕೊನೆಯ ಸಿನಿಮಾ:

ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಕೊನೆ ಸಿನಿಮಾ ಗಂಧದ ಗುಡಿ ವಿಶ್ವಾದ್ಯಂತ ಬಿಡುಗಡೆ ಕಂಡು ಕೋಟಿ ಗಟ್ಟಲೆ ಕಲೆಕ್ಷನ್ ಮಾಡಿದೆ. ವಯಸ್ಸಿನ ಮಿತಿ ಇಲ್ಲದೆ ಜನರು ಸಿನಿಮಾ ನೋಡಿದ್ದಾರೆ ಅದರಲ್ಲೂ ಸರ್ಕಾರಿ ಶಾಲೆ ಮಕ್ಕಳಿಗೆ ವಿಶೇಷವಾಗಿ ಸ್ಕ್ರೀನಿಂಗ್ ಮಾಡಿಸಲಾಗಿತ್ತು. 

ಬೆಂಗಳೂರಿನ ಮೊದಲ ಸ್ಟೀಲ್ ಫ್ಲೈ ಓವರ್ ಗೆ ಪುನೀತ್ ಹೆಸರಿಡುವಂತೆ ಒತ್ತಾಯ

ನೇತ್ರ, ಅಂಗದಾನದಲ್ಲಿ ಭಾರೀ ಹೆಚ್ಚಳ:

ಒಂದು ವರ್ಷದ ಹಿಂದೆ ಸಾವಿಗೀಡಾದ ನಟ ಪುನೀತ್‌ ರಾಜಕುಮಾರ್‌ ನೇತ್ರದಾನ ಮಾಡಿ ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದರು. ಅವರಿಂದ ಸ್ಫೂರ್ತಿ ಪಡೆದು ಕಳೆದ ಒಂದು ವರ್ಷದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಡಾ.ರಾಜಕುಮಾರ್‌ ನೇತ್ರದಾನ ಕೇಂದ್ರದಲ್ಲಿ ನೇತ್ರದಾನ ಮಾಡಿದ್ದು, ಇದರಿಂದ 1650 ಅಂಧರ ಬಾಳಿಗೆ ಬೆಳಕು ಸಿಕ್ಕಿದೆ. ಇನ್ನೊಂದೆಡೆ ನೇತ್ರದಾನದಿಂದ ಪ್ರೇರೇಪಣೆಗೊಂಡ ಪುನೀತ್‌ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅಂಗಾಂಗ ದಾನ ಕೂಡ ಮಾಡಿದ್ದಾರೆ. ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ಕಸಿ ನಿರ್ವಹಣಾ ಸಂಸ್ಥೆಯಾದ ಜೀವಸಾರ್ಥಕತೆಯಲ್ಲಿ 2021ರ ನವೆಂಬರ್‌ಗೂ ಮುನ್ನ ಮೂರು ಸಾವಿರದ ಆಸುಪಾಸಿನಲ್ಲಿದ್ದ ನೋಂದಣಿದಾರರ ಸಂಖ್ಯೆ ಸದ್ಯ ಬರೋಬ್ಬರಿ 33 ಸಾವಿರಕ್ಕೆ ಹೆಚ್ಚಿದೆ. ಒಂದು ವರ್ಷದಲ್ಲಿ 10 ಪಟ್ಟು ಅಧಿಕ ಮಂದಿ ನೋಂದಣಿಯಾಗಿದ್ದಾರೆ.

30 ಸಾವಿರ ಅಂಗಾಂಗ ದಾನ:

ಜೀವಸಾರ್ಥಕತೆಯಲ್ಲಿ 2017ರಿಂದ 2021 ಅಕ್ಟೋಬರ್‌ವರೆಗೂ (ಐದು ವರ್ಷದಲ್ಲಿ) 2,775 ಮಂದಿ ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು. ಆದರೆ, ಪುನೀತ್‌ ನಿಧನದ ಬಳಿಕ ನವೆಂಬರ್‌ನಿಂದ ಸಂಸ್ಥೆಯ ಸಹಾಯವಾಣಿಗೆ ನೇತ್ರದಾನದ ನೋಂದಣಿ ಮಾಹಿತಿ ಕೋರಿ ಬರುವ ಕರೆಗಳು ಹೆಚ್ಚಾದವು. ಬಹುತೇಕರು ಪುನೀತ್‌ ನೇತ್ರದಾನದ ಪ್ರೇರೇಪಣೆಯನ್ನು ಉಲ್ಲೇಖಿಸಿದರು. ಅಂತಹವರಿಗೆ ಅಂಗಾಂಗ ದಾನ ಮಹತ್ವವನ್ನು ವಿವರಿಸಲಾಗುತ್ತಿತ್ತು. ಸದ್ಯ ನೋಂದಣಿಯಾಗಿರುವವರ ಸಂಖ್ಯೆ 33,907ಕ್ಕೆ ಹೆಚ್ಚಿದೆ. ನೋಂದಣಿಯಾದವರ ಪೈಕಿ ಶೇ.90ರಷ್ಟುಮಂದಿ ಯುವ ಜನರೇ ಆಗಿದ್ದಾರೆ. ಎಲ್ಲರಿಗೂ ಸಂಸ್ಥೆಯಿಂದ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ಜೀವಸಾರ್ಥಕತೆ ಅಧಿಕಾರಿಗಳು ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?