2021: ನಾವು ಬಂದೇವ,ನಾವು ಬಂದೇವಾ! ನಾವು ರೆಡಿ! ನೀವು?

By Kannadaprabha NewsFirst Published Dec 26, 2020, 9:14 AM IST
Highlights

ಸಂಕ್ರಾಂತಿ ಮುಗಿದ ಮೇಲೆ ಕನ್ನಡ ಚಿತ್ರರಂಗ ಹಳಿಗೆ ಬರುತ್ತದೆ ಎನ್ನುವ ವಿಶ್ವಾಸ ಇದೆ. ಆದರೆ ಇದು ಸಾಧ್ಯವಾಗಬೇಕಾದರೆ ನಿರ್ಮಾಪಕರು, ಪ್ರದರ್ಶಕರು ಮತ್ತು ಸರ್ಕಾರ ಸಮನ್ವಯ ಕಾಪಾಡಿಕೊಂಡು ಯಾರಿಗೂ ನಷ್ಟವಾಗದ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೀಗಾದರೆ ಮಾತ್ರ 2021 ಚಿತ್ರರಂಗದ ಪಾಲಿಗೆ ಒಳ್ಳೆಯ ವರ್ಷವಾಗಲಿದೆ. ಇಲ್ಲದೇ ಇದ್ದರೆ ಇದೇ ರೀತಿಯ ಬರಗಾಲ ಎದುರಾಗಿ ಇಡೀ ಉದ್ಯಮ ಕನಿಷ್ಟಮೂರು ತಿಂಗಳ ಮಟ್ಟಿಗಾದರೂ ಮತ್ತದೇ ಉಪವಾಸ ಮುಂದುವರೆಸಬೇಕಾಗುತ್ತದೆ.

ನಿರ್ಮಾಪಕರು ಏನಂತಾರೆ?

ದೊಡ್ಡ ಬಜೆಟ್‌ ಸಿನಿಮಾಗಳನ್ನು ಮಾಡಿಕೊಂಡು ತೆರೆಗೆ ಬರಲು ಸಿದ್ಧವಾಗಿರುವ ನಿರ್ಮಾಪಕರು ಈಗ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಥಿಯೇಟರ್‌ ಬಾಡಿಗೆ ಕಡಿಮೆ ಆಗಬೇಕು, ಶೇಕಡವಾರು ಪದ್ಧತಿಯಲ್ಲಿ ಸಿನಿಮಾ ಬಿಡುಗಡೆಗೆ ಮುಂದಾದರೆ ಅದರಲ್ಲಿಯೂ ಕಡಿಮೆ ಪರ್ಸಂಟೇಜ್‌ ಪಡೆದುಕೊಳ್ಳಬೇಕು, ಈಗಿರುವ ಶೇ. 50ರಷ್ಟುಆಸನ ಭರ್ತಿಗೆ ಬದಲಾಗಿ ಶೇ.100 ರಷ್ಟುಆಸನ ಭರ್ತಿಗೆ ಅವಕಾಶ ಸಿಕ್ಕಬೇಕು, ನೆರೆಯ ಆಂಧ್ರ ಪ್ರದೇಶ ಸರ್ಕಾರ ಚಿತ್ರರಂಗಕ್ಕೆ ಘೋಷಣೆ ಮಾಡಿದ ಪ್ಯಾಕೇಜ್‌ ರೀತಿಯಲ್ಲಿ ನಮ್ಮ ಸರ್ಕಾರವೂ ಚಿತ್ರರಂಗದ ನೆರವಿಗೆ ನಿಲ್ಲಬೇಕು ಎನ್ನುವ ಮುಖ್ಯ ಬೇಡಿಕೆಗಳನ್ನು ಇಟ್ಟುಕೊಂಡಿದ್ದಾರೆ ನಿರ್ಮಾಪಕರು. ಇದು ಸಾಧ್ಯವಾದರೆ ಫೆಬ್ರವರಿ ವೇಳೆಗೆಲ್ಲಾ ದೊಡ್ಡ ದೊಡ್ಡ ಸಿನಿಮಾಗಳಾದ ಪೊಗರು, ಕೋಟಿಗೊಬ್ಬ 3, ಸಲಗ, ಯುವರತ್ನ, ರಾಬರ್ಟ್‌, ಕೆಜಿಎಫ್‌ 2, ಭಜರಂಗಿ 2, ಕಬ್ಜ, ಮದಗಜ ಚಿತ್ರಗಳು ಅಧಿಕೃತ ದಿನಾಂಕ ಘೋಷಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಈಗಾಗಲೇ ನಿರ್ಮಾಪಕರು ಸಭೆಗಳನ್ನು ಮಾಡಿಕೊಂಡು ಒಬ್ಬರಾದ ಮೇಲೆ ಒಬ್ಬರು ತೆರೆಗೆ ಬರುವ ನಿರ್ಧಾರ ಕೈಗೊಂಡಿದ್ದಾರೆ. ಇದು ಬಿಗ್‌ ಬಜೆಟ್‌ ಸಿನಿಮಾಗಳಿಗೆ ಅನುಕೂಲವಾಗಲಿದೆ.

ರಾಕ್ಷಸ ರೂಪವೇ 'ಐರಾವನ್‌';ಅರ್ಜುನನ ಮಗನಾಗಿ ಜೆಕೆ ಹೊಸ ಅವತಾರ!

ಪ್ರದರ್ಶಕರು ಏನಂತಾರೆ?

ಇತ್ತ ಚಿತ್ರಮಂದಿರಗಳ ಮಾಲೀಕರೂ ಕಳೆದ ಮಾಚ್‌ರ್‍ ಅಂತ್ಯದಿಂದ ಸಂಪೂರ್ಣವಾಗಿ ಥಿಯೇಟರ್‌ಗಳ ಬಾಗಿಲು ಮುಚ್ಚಿ ತೊಂದರೆಗೆ ಸಿಲುಕಿದ್ದಾರೆ. ಅಕ್ಟೋಬರ್‌ 15ರಿಂದ ಥಿಯೇಟರ್‌ಗಳ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ್ದರೂ ರಾಜ್ಯಾದ್ಯಂತ ಇನ್ನೂ ಎಲ್ಲಾ ಚಿತ್ರಮಂದಿರಗಳೂ ತೆರೆದಿಲ್ಲ. ಜೊತೆಗೆ ದೀರ್ಘಾವಧಿಯಲ್ಲಿ ಮುಚ್ಚಿರುವ ಥಿಯೇಟರ್‌ಗಳನ್ನು ಮತ್ತೆ ಆರಂಭಿಸಬೇಕು ಎಂದರೆ ಒಂದಷ್ಟುಪ್ರಮಾಣದ ಖರ್ಚು ಆಗಿಯೇ ಆಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ರಿಯಾಯಿತಿ ಬೇಕು, ವಿದ್ಯುತ್‌ ಬಿಲ್‌, ತೆರಿಗೆ ಸೇರಿದಂತೆ ಕೆಲವು ಪ್ಯಾಕೇಜ್‌ಗಳ ಘೋಷಣೆ ಮಾಡಬೇಕು, ನಿರ್ಮಾಪಕರೂ ಕೂಡ ಹೆಚ್ಚಿನ ಪ್ರಮಾಣದ ಕಮೀಷನ್‌ ನೀಡಬೇಕು ಎನ್ನುವ ಬೇಡಿಕೆ ಮುಂದಿಟ್ಟುಕೊಂಡಿದ್ದಾರೆ.

ಸರ್ಕಾರ ಏನು ಮಾಡಿದೆ?

ಇದೇ ವೇಳೆಯಲ್ಲಿ ಸರ್ಕಾರದಿಂದ ಚಿತ್ರರಂಗ ನಿರೀಕ್ಷೆ ಮಾಡಿದಷ್ಟುಸಹಾಯ ಸಿಕ್ಕಿಲ್ಲ. ಪ್ರಾರಂಭದಲ್ಲಿ ಸಂಕಷ್ಟದಲ್ಲಿ ಇರುವ ಕಲಾವಿದರಿಗೆ ಸರ್ಕಾರ ಒಂದಷ್ಟುಸಹಾಯ ಮಾಡಿದೆ ಬಿಟ್ಟರೆ, ಚಿತ್ರಮಂದಿರಗಳಿಗೆ ವಿಧಿಸುತ್ತಿರುವ ತೆರಿಗೆ, ವಿದ್ಯುತ್‌ ಶುಲ್ಕದಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ, ಚಿತ್ರಗಳಿಗೆ ನೀಡುವ ಸಹಾಯಧನದ ವಿಚಾರದಲ್ಲಿಯೂ ಮಹತ್ತರವಾದ ನಿರ್ಧಾರ ತೆಗೆದುಕೊಂಡಿಲ್ಲ. ಇಡೀ ಚಿತ್ರರಂಗ ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ನಾಲ್ಕು ತಿಂಗಳ ಹಿಂದೆಯೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಗತ್ಯ ನೆರವು ಕೋರಿದೆ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡರೆ 2021 ಚಿತ್ರರಂಗದ ಪಾಲಿಗೆ ವರವಾಗಲಿದೆ.

3 ವರ್ಷದ ಈ ಪುಟ್ಟ ಹುಡುಗಿಗೆ ನಾನು ಅಭಿಮಾನಿ: ದರ್ಶನ್ 

40ಕ್ಕೂ ಅಧಿಕ ಚಿತ್ರಗಳು ಸಿದ್ಧ

ಇತ್ತ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿ ಶೂಟಿಂಗ್‌ಗೆ ಅನುಮತಿ ಸಿಗುತ್ತಿದ್ದಂತೆ ಕೆಲಸ ಶುರು ಮಾಡಿಕೊಂಡು ಚಿತ್ರಗಳು ಸಾಕಷ್ಟಿವೆ. ಈಗಲೂ ವಾರಕ್ಕೆರಡು ಚಿತ್ರಗಳಾದರೂ ಸೆಟ್ಟೇರುತ್ತಿವೆ. ಲಾಕ್‌ಡೌನ್‌ಗೂ ಮೊದಲು ಸೆಟ್ಟೇರಿದ್ದ, ಶೂಟಿಂಗ್‌ ಅರ್ಧಕ್ಕೇ ನಿಂತಿದ್ದ ಚಿತ್ರಗಳೆಲ್ಲವೂ ಶೂಟಿಂಗ್‌ ಪೂರ್ಣ ಮಾಡಿಕೊಂಡು, ಡಬ್ಬಿಂಗ್‌ ಮುಗಿಸಿಕೊಂಡು ಬಿಡುಗಡೆಗೆ ಕಾದಿವೆ. ಮೊದಲೇ ಹೇಳಿದ ಹಾಗೆ ಸರಿಯಾದ ಪಟ್ಟಿತಯಾರು ಮಾಡಿಕೊಂಡು ಒಂದಾದ ಮೇಲೆ ಒಂದರಂತೆ ಚಿತ್ರಗಳು ತೆರೆಗೆ ಬಂದರೆ ಪ್ರೇಕ್ಷಕ, ನಿರ್ಮಾಪಕ, ಪ್ರದರ್ಶಕರೆಲ್ಲರಿಗೂ ಅನುಕೂಲ. ಇಲ್ಲದೇ ಇದ್ದರೆ ವಾರಕ್ಕೆ ಎಂಟೋ ಹತ್ತೋ ಸಿನಿಮಾಗಳು ಬಂದು ಗುಂಪಿನಲ್ಲಿ ಗೋವಿಂದ ಎನ್ನುವಂತೆ ಆಗಬೇಕಾದೀತು ಎನ್ನುವ ಆತಂಕ ಹೆಚ್ಚಿನ ನಿರ್ಮಾಪಕರಲ್ಲಿ ಇದೆ.

click me!