ನಿರ್ಭಯ ನೆರಳಲ್ಲಿ 'ರಂಗನಾಯಕಿ'!

By Web DeskFirst Published Oct 18, 2019, 10:20 AM IST
Highlights

ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಚಿತ್ರ ನವೆಂಬರ್ 1 ರಂದು ತೆರೆಕಾಣುತ್ತಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್ ಕೆಲಸದಲ್ಲಿ ನಿರ್ದೇಶಕ ದಯಾಳ್ ಆ್ಯಂಟ್ ಟೀಮ್ ಬ್ಯುಸಿ ಆಗಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟ್ರೇಲರ್ ಅನ್ನು ಹೊರತಂದಿದೆ.

ಜತೆಗೆ ಈ ಚಿತ್ರ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಆಯ್ಕೆ ಆಗಿದೆ.ಟ್ರೇಲರ್ ಲಾಂಚ್ ಜತೆಗೆ ಆ ಖುಷಿ ಹಂಚಿಕೊಳ್ಳಲು ದಯಾಳ್ ಚಿತ್ರತಂಡದೊಂದಿಗೆ ಮಾಧ್ಯಮದ ಮುಂದೆ
ಬಂದಿದ್ದರು. ‘ಇದೊಂದು ಕಾದಂಬರಿ ಆಧರಿತ ಚಿತ್ರ. ನಾನೇ ಬರೆದ ಕಾದಂಬರಿಯನ್ನು ಈಗ ಸಿನಿಮಾವಾಗಿ ತೆರೆಮೇಲೆ ತಂದಿದ್ದೇನೆ.

ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಮಹಿಳಾ ಪ್ರಧಾನ ಚಿತ್ರ. ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ  ಸಂತ್ರಸ್ತ ಹುಡುಗಿ ಬದುಕಿದ್ದರೆ, ಎಂಥಹ ಸಂದರ್ಭ ಮತ್ತು ಸವಾಲುಗಳನ್ನು  ಎದುರಿಸುತ್ತಿದ್ದಳು ಅನ್ನೋದನ್ನ ಈ ಚಿತ್ರದಲ್ಲಿ ಕಾಲ್ಪನಿಕವಾಗಿ ಹೇಳಿದ್ದೇವೆ.

ಮತ್ತೆ ಕನ್ನಡ ನಾಡಿನ ರಸಿಕರ ಮನವ ಗೆಲ್ಲಲು ಬರುತ್ತಿದ್ದಾಳೆ ’ರಂಗನಾಯಕಿ’

ನ್ಯಾಯಕ್ಕೊಳಗಾಗಿ ಹುಡುಗಿಯೊಬ್ಬಳು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಟ್ಟುಕೊಂಡು, ಹೇಗೆ ಕಾನೂನಿನ ಚೌಕಟ್ಟಿನಲ್ಲಿ ಹೋರಾಡಿ ನ್ಯಾಯ ಪಡೆಯುತ್ತಾಳೆ ಅನ್ನೋದು ಚಿತ್ರದ ಕಥೆಯ ಎಳೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

‘ರಂಗನಾಯಕಿ’ ಚಿತ್ರ ತೆರೆಗೆ ಬರೋದಕ್ಕೂ ಮುನ್ನವೇ ‘ಗೋವಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್-೨೦೧೯’ಕ್ಕೆ ಪನೋರಮಾ ವಿಭಾಗದಲ್ಲಿ ಕನ್ನಡದಿಂದ ಸ್ಥಾನ ಪಡೆದುಕೊಂಡಿದೆ. ಈ ವರ್ಷ ಕನ್ನಡದಿಂದ ಆಯ್ಕೆಯಾಗಿರುವ ಏಕೈಕ ಚಿತ್ರ ಎನ್ನುವ ಗರಿಯನ್ನು ಮುಡಿಗೇರಿಸಿಕೊಂಡಿರುವ ‘ರಂಗನಾಯಕಿ’, ಇದೇ ಅ. 24ರಂದು ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ ಎಂಬ ಮಾಹಿತಿ ನೀಡಿತು ಚಿತ್ರತಂಡ. ‘ರಂಗನಾಯಕಿ’ ಚಿತ್ರದಲ್ಲಿ ಮೂರು ಶಾಸ್ತ್ರೀಯ ಹಾಡುಗಳನ್ನು ಬಳಸಿಕೊಳ್ಳಲಾಗಿದ್ದು, ಹಾಡುಗಳು ಮತ್ತು ಟ್ರೇಲರ್‌ಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

'ರಂಗನಾಯಕಿ' ಫಸ್ಟ್ ಲುಕ್ ರಿಲೀಸ್!

ಅಧಿತಿ ಪ್ರಭುದೇವ, ಶ್ರೀನಿ, ತ್ರಿವಿಕ್ರಮ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸುಂದರ್, ಸುಚೇಂದ್ರ ಪ್ರಸಾದ್, ಸಿಹಿಕಹಿ ಚಂದ್ರು, ಸುಂದರ್ ರಾಜ್ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ, ಚಿತ್ರ ಬಿಡುಗಡೆಯ ನಂತರ ಮಹಿಳೆಯರಿಗಾಗಿಯೇ ವಿಶೇಷ ಪ್ರದರ್ಶನವನ್ನು ಆಯೋಜಿಸಲು ಪ್ಲಾನ್ ಮಾಡಿಕೊಂಡಿದೆ. ಚಿತ್ರಕ್ಕೆ ಎಸ್.ವಿ.ನಾರಾಯಣ್ ಬಂಡವಾಳ ಹೂಡಿದ್ದು, ಚಿತ್ರವನ್ನು ಕನ್ನಡಕ್ಕೆ ಅರ್ಪಿಸಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್.

click me!