ಸಿನಿಮಾ ಜಾದೂಗಾರ ಉಪೇಂದ್ರ; ಹ್ಯಾಪಿ ಬರ್ತಡೇ ಉಪ್ಪಿ

By Kannadaprabha NewsFirst Published Sep 18, 2020, 11:35 AM IST
Highlights

ಪ್ರತಿಭಾವಂತ ನಿರ್ದೇಶಕ, ಅಪ್ರತಿಮ ನಟ, ದೂರದೃಷ್ಟಿ ಹೊಂದಿದ ಕನಸುಗಾರ ಉಪೇಂದ್ರ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ಒಡನಾಡಿಗಳು ಕಂಡಂತೆ ಉಪ್ಪಿ
 

ಉಪ್ಪಿ ಸ್ನೇಹ ದಕ್ಕಿಸಿಕೊಂಡ ಪುಣ್ಯವಂತ ನಾನು

-ಶಿವರಾಜ್‌ಕುಮಾರ್‌, ನಟ

ಉಪೇಂದ್ರ ಅಂದರೆ ಜಂಟಲ್‌ಮನ್‌. ಒಳ್ಳೆಯ ಕಲಾವಿದ, ತಂತ್ರಜ್ಞ, ಬರಹಗಾರ ಮತ್ತು ನಿರ್ದೇಶಕ. ಇಡೀ ಚಿತ್ರರಂಗಕ್ಕೆ ಉಪೇಂದ್ರ ಏನು ಅಂತ ಹೊಸದಾಗಿ ಹೇಳಬೇಕಿಲ್ಲ. ಆದರೆ, ಒಬ್ಬ ಒಳ್ಳೆಯ ವ್ಯಕ್ತಿಯ ಸ್ನೇಹ ಸಿಗಬೇಕು ಅಂದರೆ ಪುಣ್ಯ ಮಾಡಿರಬೇಕು ಅಂತಾರೆ. ಆ ವಿಚಾರದಲ್ಲಿ ನಾನು ಪುಣ್ಯವಂತ. 25 ವರ್ಷಗಳ ಹಿಂದೆ ನನ್ನ ಮತ್ತು ಉಪ್ಪಿ ಮಧ್ಯೆ ಸ್ನೇಹ ಬೆಳೆಯುವಂತೆ ಮಾಡಿದ್ದು ‘ಓಂ’ ಸಿನಿಮಾ. ಯಾವಾಗ ಉಪೇಂದ್ರ ನನಗೆ ಪರಿಚಯ ಆದ್ರೋ ಆಗಲೇ ನಾನು ಅದೃಷ್ಟವಂತ ಅಂದುಕೊಂಡೆ. ಯಾಕೆಂದರೆ ಉಪೇಂದ್ರ ಅವರಂತಹ ಸ್ನೇಹ ಜೀವಿ, ತಿಳುವಳಿಕೆ ಇರುವ ಮನುಷ್ಯನ ಸ್ನೇಹ ಸಿಕ್ಕಿರೋದಕ್ಕೆ. ಉಪೇಂದ್ರ ಮತ್ತೆ ನಿರ್ದೇಶನ ಮಾಡಲಿ ಎನ್ನುವಾಗಲೆಲ್ಲ ನನ್ನ ಹೆಸರು ಕೇಳುವುದು ಸಹಜ. ಯಾಕೆಂದರೆ ನಮ್ಮಿಬ್ಬರದು ಡಿಫರೆಂಟ್‌ ಕಾಂಬಿನೇಷನ್‌. ಈ ವರ್ಷವಾದರೂ ಅವರು ನಿರ್ದೇಶನದ ಸಿನಿಮಾ ಘೋಷಣೆ ಆಗಬೇಕು ಎಂದು ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ನಾನು ಬಯಸುತ್ತೇನೆ.

"

ಉಪ್ಪಿ ಎಂದರೆ ಶ್ರಮಜೀವಿ ನಿರ್ದೇಶಕ

-ರಾಕ್‌ಲೈನ್‌ ವೆಂಕಟೇಶ್‌, ನಿರ್ಮಾಪಕ

ಉಪೇಂದ್ರ ಎಂದಾಗ ನನಗೆ ತಕ್ಷಣಕ್ಕೆ ನೆನಪಾಗುವುದು ಅವರೊಳಿಗೆ ನಿರ್ದೇಶಕ ಕಂ ಶ್ರಮಜೀವಿ. ಹೈಪರ್‌ ಆ್ಯಕ್ಟಿವ್‌ ಇರೋ ನಿರ್ದೇಶಕ ಅಂದರೆ ಉಪೇಂದ್ರ ಮಾತ್ರ. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ನಮ್ಮ ದಕ್ಷಿಣ ಭಾರತೀಯ ಸಿನಿಮಾ ಫೀಲ್ಡ್‌ಗೇ ನಿರ್ದೇಶನ ಅಂದರೆ ಹೀಗೆ ಎನ್ನುವ ಗುಂಗು ಹಿಡಿಸಿದವರು. ನನ್ನ ಪ್ರಕಾರ ಉಪೇಂದ್ರ ಅಂದರೆ ಪೇಯಿಂಟರ್‌ ಇದ್ದದ್ದಂತೆ. ಬಣ್ಣದ ಚಿತ್ತಾರ ಮೂಡಿಸುವ ಕಲಾವಿದನಿಗೆ ಎಷ್ಟುಚಿತ್ರ ಬಿಡಿಸಿದರೂ ತೃಪ್ತಿಯಾಗಲ್ಲ. ಕೊನೆಯವರೆಗೂ ಅದನ್ನು ತಿದ್ದುತ್ತಲೇ ಇರುತ್ತಾರೆ. ಅವರೊಳಗೊಬ್ಬ ಬೆಸ್ಟ್‌ ಸ್ಟೂಡೆಂಟ್‌ ಇದ್ದಾರೆ. ನಿರ್ದೇಶಕರಾಗಿ ಇಳಿದರೆ ಅವರು ವಾರ್‌ ಫೀಲ್ಡ್‌ನಲ್ಲಿ ಸೈನಿಕ ಇದ್ದಂತೆ. ನಾನು ಇದನ್ನು ನೋಡಿದ್ದು ನಮ್ಮದೇ ನಿರ್ಮಾಣದ ‘ಸೂಪರ್‌’ ಚಿತ್ರದ ಸಮಯದಲ್ಲಿ. ಪ್ಯಾಷನೇಬಲ್‌ ಸಿನಿಮಾ ನಿರ್ದೇಶಕ ಅಂದರೆ ಅದು ಉಪೇಂದ್ರ ಎನ್ನಬಹುದು. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಅವರಿಂದ ಬಯಸುವುದು ಒಂದೇ, ಅವರು ನಟನೆಗೆ ಮಾತ್ರ ಸೀಮಿತವಾಗಬಾರದು. ವರ್ಷಕ್ಕೆ ಒಂದೆರಡು ಸಿನಿಮಾ ನಿರ್ದೇಶನ ಮಾಡಬೇಕು. ಯಾಕೆಂದರೆ ಉಪೇಂದ್ರ ಅವರಂತಹ ನಿರ್ದೇಶಕರು ನಮಗೆ ಬೇಕು. ಅವರಿಂದ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳು ಬರುತ್ತವೆ.

ಚಿತ್ರರಂಗದಲ್ಲಿ ಡ್ರಗ್ಸ್‌ ವಿಚಾರ ಕೇಳಿ ದಿಗ್ಬ್ರಮೆಯಾಯಿತು: ಉಪೇಂದ್ರ

ಬುದ್ಧಿವಂತ ಮಾಸ್ಟರ್‌ ಉಪ್ಪಿ

-ಮುನಿರತ್ನ, ನಿರ್ಮಾಪಕ

ತುಂಬಾ ತಿಳುವಳಿಕೆ ಇರುವ, ಜಾಣ್ಮೆಯಿಂದ ಕೂಡಿದ ಕ್ರಿಯಾಶೀಲ ವ್ಯಕ್ತಿ ಮತ್ತು ಬುದ್ಧಿವಂತ... ಇದು ಉಪೇಂದ್ರ ಅವರ ಹೆಸರು ಕೇಳಿದಾಗ ನೆನಪಾಗುವುದು. ಅವರು ಸೂಪರ್‌ ಡೈರೆಕ್ಟರ್‌, ಒಳ್ಳೆಯ ನಟ, ಸಾಕಷ್ಟುಮಂದಿಗೆ ಸ್ಫೂರ್ತಿ ಆಗಿದ್ದವರು ಎನ್ನುವುದೆಲ್ಲ ನಿಜ. ಆ ಎಲ್ಲಕ್ಕಿಂತ ಮುಖ್ಯವಾಗಿ ಉಪೇಂದ್ರ ಅಂದರೆ ಸ್ನೇಹ, ಮಾನವೀಯತೆ ಇರುವ ವ್ಯಕ್ತಿ. ಏನೇ ಮಾಡಿದರೂ ದೂರದೃಷ್ಟಿಇಟ್ಟುಕೊಂಡೇ ಯೋಜನೆ ರೂಪಿಸುವ ವಿಷನ್‌ ಮಾಸ್ಟರ್‌ ಅಂದರೆ ಉಪೇಂದ್ರ ಅವರು. ಅವರ ಜತೆ ಸಿನಿಮಾ ಮಾಡುವಾಗ ನಾನು ನಿರ್ಮಾಪಕ, ಅವರ ನಟ ಎನ್ನುವ ವ್ಯತ್ಯಾಸ ಗೊತ್ತಾಗಲ್ಲ. ಅವರು ನಮ್ಮ ಮನೆಯ ಸದಸ್ಯನಂತೆ ಕಾಣುತ್ತಾರೆ. ಕುಟುಂಬದವರಂತೆ ನಮ್ಮೊಂದಿಗೆ ಬೆರೆಯುತ್ತಾರೆ. ಇದು ನಾನು ನಿರ್ಮಾಪಕನಾಗಿ ಅವರಲ್ಲಿ ಕಂಡಿದ್ದು. ಉಪ್ಪಿ ಸಿನಿಮಾ ಎಂದರೆ ನನ್ನದೇ ನಿರ್ಮಾಣದ ‘ರಕ್ತ ಕಣ್ಣೀರು’ ಚಿತ್ರ ನೆನಪಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು. ಅವರ ಕೆರಿಯರ್‌ನಲ್ಲೂ ಹೊಸ ಉತ್ಸಾಹ ತುಂಬಿದ ಚಿತ್ರ. ಉಪ್ಪಿ ಅವರಿಗೂ ಸಹ ಯಾವುದಾದರೂ ಚಿತ್ರ, ಪಾತ್ರ, ಅದರ ಸಂಭಾಷಣೆಗಳು ಕಾಡುತ್ತಿವೆ ಎಂದರೆ ಅದು ‘ರಕ್ತ ಕಣ್ಣೀರು’ ಚಿತ್ರದ್ದು ಅಂತ ಹೇಳಬಲ್ಲೆ.

ಉಪ್ಪಿ ತೆಲುಗು ಸಿನಿಮಾ ರಿಜೆಕ್ಟ್ ಮಾಡಲೇನು ಕಾರಣ? 

ಜ್ಞಾನಿ ಮತ್ತು ಲೆಜೆಂಡ್‌

-ಆರ್‌ ಚಂದ್ರು, ನಿರ್ದೇಶಕ

ಉಪೇಂದ್ರ ಅಂದರೆ ಒಳ್ಳೆಯ ಮನುಷ್ಯ. 25 ವರ್ಷಗಳ ಹಿಂದೆಯೇ ಕನ್ನಡ ಚಿತ್ರರಂಗವನ್ನು ಭಾರತೀಯ ಚಿತ್ರರಂಗದ ಭೂಪಟದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು. ನನ್ನ ಪ್ರಕಾರ ಅವರೊಬ್ಬ ಲೆಜೆಂಡ್‌ ಡೈರೆಕ್ಟರ್‌ ಎನ್ನಬಹುದು. ನನ್ನ ಪ್ರಕಾರ ಉಪೇಂದ್ರ ಅಂದರೆ ಜ್ಞಾನಿ. ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಂಡಿರುವ, ಸ್ಪಷ್ಟಅರಿವು ಇರುವ ವ್ಯಕ್ತಿ. ಯಾವ ವಿಚಾರದ ಬಗ್ಗೆ ಬೇಕಾದರೂ ಸ್ಪಷ್ಟವಾಗಿ ಖಡಕ್‌ ಆಗಿ ಮಾತನಾಡಬಲ್ಲ ವ್ಯಕ್ತಿ. ಹೀಗಾಗಿ ಅವರ ಸಿನಿಮಾಗೆ ಮಾತ್ರ ಸೀಮಿವಲ್ಲ. ಚಿತ್ರರಂಗದಲ್ಲಿ ಹೇಗೆ ಕ್ರಾಂತಿಕಾರಕ ಬದಲಾವಣೆ ತಂದರೋ ಹಾಗೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಬಯಸುವ ವ್ಯಕ್ತಿ. ನಾನು ಅವರೊಂದಿಗೆ ಎರಡು ಸಿನಿಮಾ ಮಾಡಿ ಈಗ ‘ಕಬ್ಜ’ ಮೂಲಕ ಮೂರನೇ ಸಿನಿಮಾ ಮಾಡುತ್ತಿದ್ದೇನೆ. ‘ಐ ಲವ್‌ಯೂ’ ಸಿನಿಮಾ ಮಾಡುವಾಗ ಅವರಿಗೆ ಕೊಡಬೇಕಿದ್ದ ಹಣವನ್ನು ಡಬ್ಬಿಂಗ್‌ ದಿನ ಕೊಡಲು ಹೋದೆ. ಅವರ ಸಂಭಾವನೆ ಕಡಿಮೆ ಮಾಡಿಕೊಂಡು, ‘ಸಿನಿಮಾ ಬಿಡುಗಡೆ ಸಮಯ. ನಿರ್ದೇಶಕ- ನಿರ್ಮಾಪಕ ನೀವೇ. ಹೀಗಾಗಿ ಸಾಕಷ್ಟುಒತ್ತಡ ಇರುತ್ತದೆ ನಿಮಗೆ’ ಎಂದು ಕೊಡಲು ಹೋಗಿದ್ದ ಹಣವನ್ನು ವಾಪಸ್ಸು ಕೊಟ್ಟು ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಆಗುವಂತೆ ನೋಡಿಕೊಂಡರು. ಈ ಕಾರಣಕ್ಕೆ ನಾನು ಹೇಳೋದು ಉಪೇಂದ್ರ ಅವರಿಗೆ ಚಿತ್ರರಂಗ, ಇಲ್ಲಿ ನಿರ್ದೇಶಕರ ಬಗ್ಗೆ ಸಾಕಷ್ಟುಪ್ರೀತಿ ಇದೆ.

"

ನನ್ನ ಪಾಲಿನ ಆಪದ್ಬಾಂಧವ

-ವಿ ಮನೋಹರ್‌, ಸಂಗೀತ ನಿರ್ದೇಶಕ

ನಾನು, ಉಪೇಂದ್ರ ಅವರು ಕಾಶಿನಾಥ್‌ ಅವರಿಂದ ಬೆಳಕಿಗೆ ಬಂದವರು. ಈಗ ನನ್ನ ಪ್ರಕಾರ ಉಪೇಂದ್ರ ಎಂದರೆ ಟ್ರೆಂಡ್‌ ಸೆಟ್ಟರ್‌ ಎಂದು ಹೇಳಬಹುದು. ಒಳ್ಳೆಯ ರೈಟರ್‌ ಹಾಗೂ ನಿರ್ದೇಶಕರು. ಏನೇ ಮಾಡಿದರೂ ಸ್ಪೆಷಲ್ಲಾಗಿ ಪ್ರಸೆಂಟ್‌ ಮಾಡುವ ಹೊಸತನದ ಮನುಷ್ಯ. ಉಪ್ಪಿ ಹೇಗೆ ಅಂದರೆ ನನ್ನಂಥವನ ಪಾಲಿಗೆ ಆಪದ್ಬಾಂಧವ. ನನ್ನ ಆಕಸ್ಮಿಕವಾಗಿ ಸಂಗೀತ ನಿರ್ದೇಶಕನಾಗಿಸಿದ್ದು ಅವರೇ. ಅವರು ನನ್ನ ಸಂಗೀತ ನಿರ್ದೇಶಕರನ್ನಾಗಿಸಿದ್ದಕ್ಕೆ ನಾನು ಅದೇ ವೃತ್ತಿಯಲ್ಲಿ ಮುಂದುವರೆದಿದ್ದೇನೆ. ನನ್ನ ಬದುಕು ಮತ್ತು ಅನ್ನದ ದಾರಿ ತೋರಿಸಿಕೊಟ್ಟವರು ಉಪೇಂದ್ರ ಅವರು. ಕಾಶಿನಾಥ್‌ ಜತೆಗೆ ಅಸಿಸ್ಟೆಂಟ್‌ ಆಗಿದ್ದೆ. ಆಗ ಉಪೇಂದ್ರ ಅವರು ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜು ಹುಡುಗನಾಗಿದ್ದಾಗಲೇ ನನಗೆ ಒಂದಿಷ್ಟುಹಿತವಚನಗಳನ್ನು ಹೇಳಿದ್ದಾರೆ. ಅವರು ಅಂದು ಹೇಳಿದ್ದು ಮುಂದೆ ನನ್ನ ಜೀವನದಲ್ಲಿ ನಿಜ ಆಗುತ್ತ ಬಂತು. ಹೀಗಾಗಿ ಉಪ್ಪಿ ದೂರದೃಷ್ಟಿಇರುವ ಪ್ರತಿಭಾವಂತ. ಸಿನಿಮಾ ಮತ್ತು ಅದರ ಆಚೆಗೂ ಅವರು ಕಂಡುಕೊಳ್ಳುವ ಕನಸುಗಳು ಈಡೇರಬೇಕು. ಅವರಲ್ಲಿ ಒಳ್ಳೆಯ ಆದರ್ಶಗಳು ಇವೆ. ಅವು ಸಮಾಜಕ್ಕೆ ಹತ್ತಿರವಾಗಲಿವೆ ಎಂದು ಅವರ ಸ್ನೇಹಿತನಾಗಿ ನಾನು ಆಶಿಸುತ್ತೇನೆ.

ಅವರು ಮಿ. ಪರ್ಫೆಕ್ಟ್

- ರಚಿತಾ ರಾಮ್‌

ಉಪೇಂದ್ರ ಸರ್‌ ನಿರ್ದೇಶನದಲ್ಲಿ ಜೀನಿಯಸ್‌. ಉಪ್ಪಿ ಸರ್‌ ಅಂದ ಕೂಡಲೇ ಮನಸ್ಸಿಗೆ ಬರೋದು ಓಂ. ಪ್ರತೀ ಸಲ ಓಂ ನೋಡಿದಾಗಲೂ ಅವರು ಮಾಡಿರುವ ಕೆಲಸ ಕಣ್ಮುಂದೆ ಬರುತ್ತೆ. ಒರಿಜಿನಲ್‌ ರೌಡಿಗಳನ್ನು ಇಟ್ಕೊಂಡು ಸಿನಿಮಾ ಮಾಡಿದವ್ರು ಅವ್ರು. ಎಂಥಾ ಸೊಗಸಾದ ಸಿನಿಮಾ ಅದು. ಈಗ್ಲೂ ತುಂಬ ಜನ ಓಂ ಸೀನ್‌ಗಳನ್ನು ಕಾಪಿ ಮಾಡ್ತಾರೆ. ಅವರೊಬ್ಬ ಅದ್ಭುತ ಟೆಕ್ನಿಷಿಯನ್‌. ಪಟ ಪಟ ಅಂತ ಡೈಲಾಗ್‌ ಹೇಳೋದನ್ನು ಅವರಿಂದ ಕಲೀಬೇಕು. ಡೈಲಾಗು, ಎಕ್ಸ್‌ಪ್ರೆಶನ್‌ ಎಲ್ಲವನ್ನೂ ಏಕಕಾಲದಲ್ಲಿ ನೀಡೋದು ಎಂಥವರಿಗೂ ಕಷ್ಟ. ಇವರಿಗೆ ಸಲೀಸು. ನಟನಾಗಿ ಅವರನ್ನು ಮಿ. ಪರ್ಫೆಕ್ಟ್ ಅಂತೀನಿ. ನಿರ್ದೇಶಕರಾಗಿ ಅವರು ಮಿ. ಪರ್ಫೆಕ್ಷನಿಸ್ಟ್‌. ‘ಐ ಲವ್‌ ಯೂ’ ಸಿನಿಮಾ ಮಾಡುವಾಗ ಒಂದು ಬಹಳ ಎಮೋಶನಲ್‌ ಸೀನ್‌ ಒಂದಿತ್ತು. ಆದ್ರೆ ಒಂದು ಡೈಲಾಗ್‌ ಬಂದಾಗ ನಮಗೆ ನಗು ತಡೆಯೋದಕ್ಕೇ ಆಗ್ತಿರಲಿಲ್ಲ. ಇಪ್ಪತ್ತು ನಿಮಿಷ ನಕ್ಕಿದ್ದೀವಿ. ಇಡೀ ಸೆಟ್‌ ಸೈಲೆಂಟ್‌ ಆಗಿತ್ತು. ನನ್ನ ಫೋನ್‌ನಲ್ಲಿರುವ ಒಂದು ಫೋಟೋ ತೋರಿಸಿ ‘ನೋಡು’ ಅಂತ ಹೇಳ್ಬೇಕು ನಾನು. ಅವರು ಅದನ್ನು ವಿಜುವಲೈಸ್‌ ಮಾಡಿಕೊಳ್ಳಬೇಕು. ಆದರೆ ಆಗ ಅವರಿಗೆ ನಗು, ನನಗೂ ನಗು. ಇದು ಯಾವತ್ತಿಗೂ ಮರೆತುಹೋಗಲ್ಲ.

‘ಓಂ’ ನೋಡಿದಾಗ ಬೇಸರ ಆಗಿದ್ದು ಅದೊಂದೇ ಕಾರಣಕ್ಕೆ: ಉಪೇಂದ್ರ 

ಉತ್ತಮ ಲೀಡರ್‌ ನಮ್ಮ ಉಪ್ಪಿ

ಗುರುಕಿರಣ್‌

ಉಪೇಂದ್ರ ಅಂದಾಗ ಥಟ್ಟನೆ ನೆನಪಾಗೋದು ಕಾಲೇಜ್‌ನಿಂದ ಆಗಷ್ಟೇ ಹೊರಬಂದು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಹುಡುಗ ಉಪೇಂದ್ರ. ಅವರು ಮಲ್ಟಿಟ್ಯಾಲೆಂಟೆಡ್‌. ನಾಲ್ಕೈದು ಐಡಿಯಾಗಳು ಒಟ್ಟಿಗೇ ಬಂದಾಗ ಯಾವುದು ಬೆಸ್ಟ್‌ ಅಂತ ಜಡ್ಜ್‌ ಮಾಡೋದ್ರಲ್ಲಿ ಅವರನ್ನು ಮೀರಿಸೋರಿಲ್ಲ. ಜೊತೆಗೆ ಅವರೊಬ್ಬ ಉತ್ತಮ ಲೀಡರ್‌. ನಾವು ಯಾವಾಗ್ಲೂ ಕಾಲೆಳೆಯುತ್ತಲೇ ಮಾತಾಡೋದು. ಅವರ ಜೊತೆಗಿನ ಒಡನಾಟದಲ್ಲಿ ತಕ್ಷಣ ನೆನಪಿಗೆ ಬರೋದು ಹೋಳಿಯಾಟ. ಅವರು ಸೀರಿಯಸ್‌ ವಿಷ್ಯ ಇದೆ ಅಂತ ಕರೆಸಿಕೊಳ್ಳೋದು, ರೋಡ್‌ನಲ್ಲೆಲ್ಲ ಓಡಾಡಿ ಮೊಟ್ಟೆಒಡೆಯೋದು, ಹೋಳಿ ಆಡೋದು. 2004ರ ಗೋಕರ್ಣ ಸಿನಿಮಾ ಬರೋವರೆಗೂ ಹೀಗೆ ಹೋಳಿಯಾಡ್ತಿದ್ದೆವು. ಆಮೇಲೆ ಅದು ನಿಂತುಹೋಯ್ತು.

ಉಪೇಂದ್ರ ನಟನೆ ಕಂಡು ಬೆರಗಾಗಿದ್ದೆ

ಪರಿಣಿತ ಸುಭಾಷ್‌

ನಂಗೆ ಉಪ್ಪಿ ಸರ್‌ ಅಂದ ತಕ್ಷಣ ಮನಸ್ಸಿಗೆ ಬರೋದು ಪಂಚಿಂಗ್‌ ಲೈನ್‌. ಅವರ ಪ್ರತೀ ಮಾತು ಡಿಫರೆಂಟ್‌ ಅನಿಸೋದಕ್ಕೆ ಕಾರಣ ಇದೇ. ಅವರ ಹೆಚ್‌2ಓ ಇರಬಹುದು, ಬೇರೆ ಸಿನಿಮಾಗಳಿರಬಹುದು, ಎಲ್ಲವೂ ನನಗಿಷ್ಟ. ಸಿನಿಮಾದ ಪ್ರತಿಯೊಂದು ವಿಭಾಗದಲ್ಲೂ ಅವರಿಗೆ ಬಹಳ ಜ್ಞಾನ ಇದೆ. ಅಷ್ಟೇ ಅಲ್ಲ, ರಾಜಕೀಯವನ್ನೂ ಚೆನ್ನಾಗಿ ತಿಳ್ಕೊಂಡಿದ್ದಾರೆ. ಇನ್ನೊಂದು ನನಗೆ ಅದ್ಭುತ ಅಂತನಿಸಿದ್ದು ಅವರ ಸ್ಪಾಂಟೆನಿಟಿ ಅಥವಾ ನಿರರ್ಗಳತೆ. ಅವರು ಬಹಳ ಸಾಫ್ಟ್‌ ಆಗಿ ನಮ್ಮ ಜೊತೆಗೆ ಮಾತನಾಡುತ್ತಿರುವಾಗಲೇ ಆ್ಯಕ್ಷನ್‌ ಅಂದರೆ ಕೂಡಲೇ ಸಂಪೂರ್ಣ ಆ ಪಾತ್ರವಾಗಿ ಬದಲಾಗಿ ಬಿಡುತ್ತಾರೆ. ಉಪ್ಪಿ ಸರ್‌ ಅವರ ಇಂಥಾ ಪ್ರತಿಭೆ ಕಂಡು ನಮಗೆಲ್ಲ ಅಬ್ಬಾ ಅಂತನಿಸುತ್ತಿತ್ತು. ಅವರ ನಿರ್ದೇಶನವೂ ಸೂಪರ್‌. ನಟಿಯಾಗಿ ಅವರಿಂತ ಕಲಿತದ್ದು ಬಹಳವಿದೆ.

ನಿರ್ದೇಶನದಲ್ಲಿ ಮುಂದುವರಿಯಲಿ

ಪ್ರೇಮಾ

ನನಗೆ ಉಪೇಂದ್ರ ಅಂದಾಕ್ಷಣ ನೆನಪಾಗೋದು ಓಂ. ಆ ಸಿನಿಮಾದ ಬಗ್ಗೆ, ಶೂಟಿಂಗ್‌ ಸಂದರ್ಭದ ಬಗ್ಗೆ ಈ ಹಿಂದೆಯೇ ಸಾಕಷ್ಟುಸಲ ಮಾತನಾಡಿದ್ದೇನೆ. ಉಪೇಂದ್ರ ಅವರಿಗೆ ಹ್ಯಾಪಿ ಹ್ಯಾಪಿ ಬತ್‌ರ್‍ ಡೇ. ಮುಂದಿನ ದಿನಗಳಲ್ಲಿ ನಾನು ಅವರಿಂದ ನಿರ್ದೇಶನವನ್ನು ನಿರೀಕ್ಷಿಸುತ್ತೇನೆ.

"

click me!