
ಕನ್ನಡ ಚಿತ್ರರಂಗದ ಮನೆ ಮಗಳು, ಮಹಾಲಕ್ಷ್ಮಿ ಎಂದೇ ಹೆಸರು ಪಡೆದುಕೊಂಡಿರುವ ನಟಿ ಅದಿತಿ ಪ್ರಭುದೇವ (Aditi Prabhudeva) ತಮ್ಮ ಮುಂದಿನ ಸಿನಿಮಾ ಆನ ಬಿಡುಗಡೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಡಿಸೆಂಬರ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ತಂಡ ಸುದ್ಧಿ ಗೋಷ್ಠಿ (Aana Pressmeet) ನಡೆಸಿ, ಅಭಿಮಾನಿಗಳಿಗೆ ತಲುಪಿಸಬೇಕಾದ ವಿಚಾರಗಳ ಬಗ್ಗೆ ನೇರವಾಗಿ ಮಾತನಾಡಿದ್ದಾರೆ.
ಆನ ಸಿನಿಮಾ ಬಿಡುಗಡೆ ದಿನವೇ ಪುಷ್ಪ (Pushpa) ಸಿನಿಮಾ ಬಿಡುಗಡೆ ಆಗುತ್ತಿದೆ. ನಿರ್ಮಾಪಕಿ ಪೂಜಾ ವಸಂತ್ ಕುಮಾರ್ (Pooja Vasanth Kumar) ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಮನೋಜ್ ಪಿ (Manoj P) ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟ್ರೈಲರ್ (Aana trailer) ಸಿನಿ ರಸಿಕರ ಗಮನ ಸೆಳೆದಿದೆ. ತಪ್ಪದೆ ಸಿನಿಮಾ ನೋಡುತ್ತಾರೆ ಎನ್ನುವ ಭರವಸೆ ತಂಡಕ್ಕೆ ಸಿಕ್ಕಿದೆ.
'ಪುಷ್ಪ ಸಿನಿಮಾ ಬರ್ತಿರುವುದರಿಂದ ಸಾಕಷ್ಟು ತೊಂದರೆ ಆಗಿದೆ. ಒಳ್ಳೆಯ ಚಿತ್ರಮಂದಿರಗಳೇ ಸಿಗುತ್ತಿಲ್ಲ. ನಮ್ಮ ನಾಡಲ್ಲ, ನಮ್ಮ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಹೊಡೆದಾಡಬೇಕು ಅಂದ್ರೆ ಕಷ್ಟ. ಇದು ನಮ್ಮಪ್ಪನ ಮನೆ. ನಾನು ನಮ್ಮಪ್ಪನ ಮನೆಯಲ್ಲಿ ತಿನ್ನುವುದಕ್ಕೆ ಪಕ್ಕದ ಮನೆಯ ಅಂಕಲ್ನ ಕೇಳಬೇಕು. ಅಂಕಲ್ ಒಂದೇ ಒಂದು ಚಾಕಲೇಟ್ ತಿನ್ಲಾ ಎಂದು. ಇದು ಎಂಥ ದುರಂತ ಅಲ್ವಾ? ಆನ ಸಣ್ಣ ಸಿನಿಮಾ ಬಿಡಿ, ನಾನು ಕನ್ನಡದ ಬೇರೆ ಎಲ್ಲಾ ಸಿನಿಮಾಗಳನ್ನು ಸೇರಿಸಿಕೊಂಡು ಹೇಳುತ್ತಿರುವೆ. ಯಾರು ಬರ್ಲಿ, ಏನೇ ಮಾಡಲಿ ನಾನು ಒಳ್ಳೆ ಸಿನಿಮಾ ಮಾಡಿದ್ದೀವಿ. ವೀಕ್ಷಕರಿಗೆ ನಾನು ಒಂದು ಭರವಸೆ ಕೊಡುವೆ. ಅವರು ಕೊಟ್ಟಿರುವ ದುಡ್ಡಿಗೆ ಮೋಸ ಆಗುವುದಿಲ್ಲ. ಸಿನಿಮಾವನ್ನು ಸಿಳ್ಳೆ ಹೊಡೆದು ಎಂಜಾಯ್ ಮಾಡಿಕೊಂಡು ನೋಡುತ್ತಾರೆ. ಕೈ ಜೋಡಿಸಿ ಬೇಡಿಕೊಳ್ಳುವೆ ದಯವಿಟ್ಟು ಆನ ಸಿನಿಮಾ ನೋಡಿ,' ಎಂದು ನಟಿ ಅದಿತಿ ಕನ್ನಡಿಗರನ್ನು ಆಗ್ರಹಿಸಿದ್ದಾರೆ.
'ನಮ್ಮೂರು ದಾವಣಗೆರೆ (Davanagere). ಅಲ್ಲಿ ನಾವು ಮೂವಿ ಟೈಮ್ ಅಂತ ಹೇಳಿ ಒಂದು ಮಲ್ಟಿಫ್ಲೆಕ್ಸ್ ಇದೆ. ಅಲ್ಲಿ ನಮ್ಮ ಸಿನಿಮಾ ಹಾಕಬೇಕು ಅಂದ್ರೆ ಇಲ್ಲಿ ಕಾಂಪಿಟೇಷನ್ಗೆ ಇನ್ನೂ ಎರಡು ಸಿನಿಮಾ ಇವೆ. ಈ ಎರಡೂ ಕನ್ನಡ ಸಿನಿಮಾವಲ್ಲ. ಒಂದು ಪುಷ್ಪ ಇನ್ನೊಂದು ಸ್ಪೈಡರ್ ಮ್ಯಾನ್. ನಾವು ಎಲ್ಲಿಯೇ ಹೋದರೂ ಪುಷ್ಪ ಪುಷ್ಪ ಅಂತ ಹೇಳುತ್ತಿದ್ದಾರೆ. ನಮ್ಮ ಕನ್ನಡ ಸಿನಿಮಾಗೆ ಸಿಗ ಬೇಕಿರುವ ಬೆಲೆ ಸಿಗುತ್ತಿಲ್ಲ. ನಾನು ಪ್ರಶ್ನೆ ಮಾಡಿದ್ದರೆ ಏನ್ ಸರ್ ದೊಡ್ಡ ಸಿನಿಮಾ ಬರ್ತಿದೆ, ಅಲ್ಲು ಅರ್ಜುನ್ ಅವರದ್ದು.. ಅಂತ ಹೇಳುತ್ತಾರೆ. ದೇವರ ದಯೆಯಿಂದ ನಮ್ಮ ಸಿನಿಮಾ ಚೆನ್ನಾಗಿ ಓಡಿದರೆ ಸಾಕು,' ಎಂದು ನಿರ್ದೇಶಕರು ಮಾತನಾಡಿದ್ದಾರೆ.
ಆನ ಒಂದು ಡಾರ್ಕ್ ಫ್ಯಾಂಟಸಿ (Dark Fatancy) ಸಿನಿಮಾವಾಗಿದ್ದು, ಇದರಲ್ಲಿ ಮಾಟ ಮಂತ್ರ ಇದೆ, ಹಾರರ್ ಸನ್ನಿವೇಶಗಳಿರುವ ಕತೆ. ಇದು ಭಾರತದ ಮೊದಲ ಫೀಮೆಲ್ ಸೂಪರ್ ಹೀರೋ ಸಿನಿಮಾವಾಗಿದ್ದು, ಅದಿತಿ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಬಹಳ ವರ್ಷಗಳ ನಂತರ ಸುನಿಲ್ ಪುರಾಣಿಕ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಮಾಡುವಾಗ ನಿರ್ದೆಶಕರು ರಿಸ್ಕ್ ತೆಗೆದುಕೊಳ್ಳುತ್ತಾರೆ. ಆದರೆ ಈ ಸಿನಿಮಾದಲ್ಲಿ ನಿರ್ಮಾಪಕಿ ರಿಸ್ಕ್ ತೆಗೆದುಕೊಂಡಿದ್ದಾರಂತೆ.
'ಆಗಷ್ಟೇ ಲಾಕ್ಡೌನ್ ಮುಗಿದಿತ್ತು. ಯಾರಿಗೆ ಬೇಕು ಅವರು ಚಿತ್ರೀಕರಣ ಮಾಡಬಹುದು ಎಂದಿದ್ದರು. ಆರ್ಥಿಕ ಸಂಕಷ್ಟ ಎದುರಿಸಿ, ಕಾಲ ಕಷ್ಟವಾಗಿತ್ತು. ನಾನು ಕಥೆ ಹೇಳಿದಾಗ ಹಿಂದೆ ಮುಂದೆ ಒಂದು ಸಲವೂ ಥಿಂಕ್ ಮಾಡದೇ ಒಪ್ಪಿಕೊಂಡು ಸಿನಿಮಾ ಮಾಡು, ನಿನಗೆ ಏನ್ ಸಹಾಯ ಬೇಕು ಅದನ್ನ ನೀಡುವೆ ಅಂತ ಹೇಳಿದ್ದು ನಮ್ಮ ನಿರ್ಮಾಪಕರು,' ಎಂದು ಮನೋಜ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.