ಕಥೆಯನ್ನು 6 ತಿಂಗಳು ಕಾಯಿಸಿದ ಡಾಲಿ.. ಕೊನೆಗೂ, ಗೆಳೆಯನ ಕಥೆ-ನಿರ್ದೇಶನಕ್ಕೆ ನಿರ್ಮಾಪಕನಾಗಿ ಧನಂಜಯ್ 'ಅಸ್ತು'..!

Published : Mar 30, 2026, 06:07 PM IST
Dolly Dhananjay

ಸಾರಾಂಶ

ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದರಲ್ಲಿ 'ಜೆನ್ ಜಿ' ಹುಡುಗರ ತಂಡವಿದ್ದು, ಹೊಸ ಪ್ರತಿಭೆಗಳಿಗೆ ಡಾಲಿ ವೇದಿಕೆ ಕಲ್ಪಿಸಿದ್ದಾರೆ. "ಇದು ನೂರಕ್ಕೆ ನೂರರಷ್ಟು ಎಂಟರ್‌ಟೈನರ್ ಸಿನಿಮಾ. ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ, ಆದರೆ ಹಬ್ಬದ ಸೀಸನ್‌ಗೆ ನಿಮ್ಮ ಮುಂದೆ ಬರಲಿದ್ದೇವೆ" ಎಂದು ಧನಂಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಾಲಿ ಧನಂಜಯ್ ಹೊಸ ಸಿನಿಮಾ ಘೋಷಣೆ!

ಸ್ಯಾಂಡಲ್‌ವುಡ್‌ನ 'ನಟ ರಾಕ್ಷಸ' ಡಾಲಿ ಧನಂಜಯ್ (Dolly Dhananjay) ಸದ್ಯ ಬಿಡುವಿಲ್ಲದ ನಟ. ಒಂದೆಡೆ 'ಹಲಗಲಿ'ಯಂತಹ ಐತಿಹಾಸಿಕ ಮಾದರಿಯ ಸಿನಿಮಾ, ಇನ್ನೊಂದೆಡೆ 'ಅಣ್ಣಾ ಫ್ರಮ್ ಮೆಕ್ಸಿಕೋ' ಹಾಗೂ '666 ಆಪರೇಷನ್ ಡ್ರೀಮ್ ಥಿಯೇಟರ್' ಅಂತಹ ವಿಭಿನ್ನ ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಆದರೆ, ಡಾಲಿ ಕೇವಲ ನಟನಾಗಿ ಮಾತ್ರವಲ್ಲ, ಒಬ್ಬ ಯಶಸ್ವಿ ನಿರ್ಮಾಪಕನಾಗಿಯೂ ಸದ್ದು ಮಾಡುತ್ತಿದ್ದಾರೆ. ಈಗ ಸದ್ದಿಲ್ಲದೆ ತಮ್ಮದೇ ನಿರ್ಮಾಣದ ಹೊಸ ಸಿನಿಮಾವೊಂದರ ಬಗ್ಗೆ ಡಾಲಿ ಹಂಚಿಕೊಂಡಿರುವ ವಿಷಯಗಳು ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿವೆ.

ವಿಶೇಷವೆಂದರೆ, ಈ ಸಿನಿಮಾದ ಕಥೆ ಬರೋಬ್ಬರಿ 6 ತಿಂಗಳುಗಳ ಕಾಲ ಡಾಲಿ ಅವರ ಟೇಬಲ್ ಮೇಲೆಯೇ ಧೂಳು ತಿನ್ನುತ್ತಾ ಬಿದ್ದಿತ್ತಂತೆ! ಈ ಬಗ್ಗೆ ಧನಂಜಯ್ ಅವರೇ ಒಂದು ಸುದೀರ್ಘ ಮತ್ತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

6 ತಿಂಗಳ ಕಾಲ ಧೂಳು ಹಿಡಿದಿದ್ದ ಸ್ಕ್ರಿಪ್ಟ್!

ಧನಂಜಯ್ ಅವರ ಪ್ರಕಾರ, ಒಬ್ಬ ನಟನಿಗೆ ಕಥೆ ಕೇಳುವುದು ಅತ್ಯಂತ ಕಷ್ಟದ ಕೆಲಸ. "ಬೌಂಡ್ ಸ್ಕ್ರಿಪ್ಟ್ ಕೊಡಿ, ನಾನೇ ಓದುತ್ತೀನಿ" ಎನ್ನುವುದು ಡಾಲಿಯ ಸ್ಟೈಲ್. ಹಾಗೆ ಓದಿದಾಗ ಮಾತ್ರ ಅವರಿಗೆ 'ಬಡವ ರಾಸ್ಕಲ್' ಮತ್ತು 'ಟಗರು ಪಲ್ಯ' ಅಂತಹ ಅದ್ಭುತ ಸಿನಿಮಾಗಳು ಸಿಕ್ಕಿದ್ದು. ಇದೇ ಸಾಲಿಗೆ ಈಗ ಸೇರ್ಪಡೆಯಾಗುತ್ತಿದೆ ಅವರ ಗೆಳೆಯ ಪೂರ್ಣಚಂದ್ರ ನಿರ್ದೇಶನದ ಹೊಸ ಸಿನಿಮಾ. ಗೆಳೆಯ ಪೂರ್ಣ ಒಂದು ಕಥೆ ಬರೆಯುತ್ತಿರುವುದು ಡಾಲಿಗೆ ಗೊತ್ತಿತ್ತು, ಆದರೆ ಕೆಲಸದ ಒತ್ತಡದಲ್ಲಿ ಅವರು ಅದನ್ನು ಗಮನಿಸಿರಲಿಲ್ಲ. ಸುಮಾರು 6 ತಿಂಗಳ ಕಾಲ ಆ ಕಥೆಯ ಸ್ಕ್ರಿಪ್ಟ್ ಧನಂಜಯ್ ಅವರ ಟೇಬಲ್ ಮೇಲೆಯೇ ಇತ್ತು.

ಬಾಲ್ಕನಿ ಹರಟೆ ಮತ್ತು ತಿರುವು:

ಒಂದು ದಿನ ಆಕಸ್ಮಿಕವಾಗಿ ಬಾಲ್ಕನಿಯಲ್ಲಿ ನಿಂತು ಹರಟೆ ಹೊಡೆಯುವಾಗ ಧನಂಜಯ್ ಪೂರ್ಣಚಂದ್ರ ಅವರನ್ನು ಕೇಳಿದರು, "ಆ ಕಥೆ ಏನಾಯ್ತು?". ಅದಕ್ಕೆ ಪೂರ್ಣಚಂದ್ರ ನಿರಾಸೆಯಿಂದಲೇ ಉತ್ತರಿಸಿದ್ದರು, "ಅದು ಆರು ತಿಂಗಳಿಂದ ಅಲ್ಲೇ ಟೇಬಲ್ ಮೇಲಿದೆ, ಸಿನಿಮಾ ಆಗುತ್ತೋ ಇಲ್ವೋ ಗೊತ್ತಿಲ್ಲ ಅಂತ ಬರೆಯೋದನ್ನೇ ನಿಲ್ಲಿಸಿದ್ದೀವಿ". ಈ ಮಾತು ಕೇಳಿ ಕುತೂಹಲದಿಂದ ಧನಂಜಯ್ ಅಂದೇ ಆ ಸ್ಕ್ರಿಪ್ಟ್ ಹಿಡಿದು ಓದುತ್ತಾ ಕೂತರು. ಅಲ್ಲಿಂದ ಶುರುವಾಗಿದ್ದೇ ಅಸಲಿ ಮ್ಯಾಜಿಕ್!

100% ಎಂಟರ್‌ಟೈನರ್ ಸಿನಿಮಾ ರೆಡಿ!

ಆ ಸ್ಕ್ರಿಪ್ಟ್ ಓದುತ್ತಾ ಧನಂಜಯ್ ಒಬ್ಬರೇ ನಕ್ಕು ನಲಿದಿದ್ದಾರೆ. ಇವತ್ತಿನ ಬೆಂಗಳೂರಿನ ಬದುಕು, ಮಹಾನಗರದ ಜನರ ಪಡಿಪಾಟಲುಗಳನ್ನು ಅಷ್ಟು ಅರ್ಥಪೂರ್ಣವಾಗಿ ಮತ್ತು ತಮಾಷೆಯಾಗಿ ಪೂರ್ಣಚಂದ್ರ ಕಟ್ಟಿಕೊಟ್ಟಿದ್ದರಂತೆ. ಕಥೆ ಓದಿದ ತಕ್ಷಣವೇ ಡಾಲಿ ಫೋನ್ ಮಾಡಿ, "ಈ ಸಿನಿಮಾ ನಾನೇ ನಿರ್ಮಾಣ ಮಾಡ್ತೀನಿ, ಅರ್ಧಕ್ಕೆ ನಿಲ್ಲಿಸಬೇಡಿ" ಎಂದು ಭರವಸೆ ನೀಡಿದರು. ಗೆಳೆಯನ ಮೇಲಿನ ನಂಬಿಕೆಯಿಂದ ಈ ಪ್ರಾಜೆಕ್ಟ್‌ಗೆ ಶಶಾಂಕ್ ಸೋಗಾಲ್ ಮತ್ತು ಗೆಳೆಯ ಹರ್ಷ ಕೂಡ ಕೈಜೋಡಿಸಿದ್ದಾರೆ.

ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದರಲ್ಲಿ 'ಜೆನ್ ಜಿ' (GenZ) ಹುಡುಗರ ತಂಡವಿದ್ದು, ಹೊಸ ಪ್ರತಿಭೆಗಳಿಗೆ ಡಾಲಿ ವೇದಿಕೆ ಕಲ್ಪಿಸಿದ್ದಾರೆ. "ಇದು ನೂರಕ್ಕೆ ನೂರರಷ್ಟು ಎಂಟರ್‌ಟೈನರ್ ಸಿನಿಮಾ. ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ, ಆದರೆ ಹಬ್ಬದ ಸೀಸನ್‌ಗೆ ನಿಮ್ಮ ಮುಂದೆ ಬರಲಿದ್ದೇವೆ" ಎಂದು ಧನಂಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಸದ್ಯದಲ್ಲೇ ಟೈಟಲ್ ಲಾಂಚ್ ಆಗಲಿದೆ. ಒಟ್ಟಿನಲ್ಲಿ, ಗೆಳೆತನ ಮತ್ತು ಪ್ರತಿಭೆಯ ಸಂಗಮದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವಿಲ್ಲ. ಡಾಲಿ ಧನಂಜಯ್ ಅವರ ಈ ಹೊಸ ಸಾಹಸಕ್ಕೆ ಅಭಿಮಾನಿಗಳು ಈಗಲೇ "ಆಲ್ ದಿ ಬೆಸ್ಟ್" ಹೇಳುತ್ತಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿವಾಹ ವಾರ್ಷಿಕೋತ್ಸವದ ದಶಕದ ಸಂಭ್ರಮದಲ್ಲಿ ‘ರಂಗಿತರಂಗ’ ನಟ ನಿರೂಪ್ ಭಂಡಾರಿ
ಭರ್ಜರಿ ಎಂಟ್ರಿಗೆ ಸಿದ್ಧರಾಗಿ ನಿಂತ ಜ್ಯೇಷ್ಠವರ್ಧನ್.. ಡಾ ವಿಷ್ಣುವರ್ಧನ್ ಮೊಮ್ಮಗನ ಸಿನಿಮಾ ಜರ್ನಿ ಸದ್ಯದಲ್ಲೇ ಶುರು..!