
ದರ್ಶನ್ ಅಕ್ಕನ ಮಗ ಚಂದು ಸಿನಿಮಾ ಶುರು
ದರ್ಶನ್ (Darshan Thoogudeepa) ಅವರ ಅಕ್ಕನ ಪುತ್ರ ಚಂದು (Chandrashekhar) ನಟನೆಯ ಮೊದಲ ಚಿತ್ರಕ್ಕೆ ಜನವರಿ ತಿಂಗಳಿಂದ ಚಾಲನೆ ಸಿಗಲಿದೆ. ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಈ ಕುರಿತು ದಿನಕರ್ ತೂಗುದೀಪ ಅವರು, ‘ರಾಯಲ್ ಸಿನಿಮಾ ನಂತರ ನನ್ನ ಅಕ್ಕನ ಮಗನ ಚಿತ್ರವನ್ನು ಶುರು ಮಾಡುತ್ತೇನೆ ಅಂತ ಈ ಹಿಂದೆಯೇ ಹೇಳಿದ್ದೆ. ಆ ನಿಟ್ಟಿನಲ್ಲಿ ಎಲ್ಲಾ ತಯಾರಿಗಳು ಮುಗಿದಿವೆ. ಕತೆ, ಚಿತ್ರಕಥೆ ಕಂಪ್ಲೀಟ್ ಮಾಡಿಕೊಂಡಿದ್ದೇನೆ. ಈಗ ಡೈಲಾಗ್ ಹಂತದಲ್ಲಿದ್ದು, ಸಣ್ಣ ಪುಟ್ಟ ಕರೆಕ್ಷನ್ಗಳು ನಡೆಯುತ್ತಿವೆ. ಜನವರಿ ತಿಂಗಳಲ್ಲಿ ಚಿತ್ರಕ್ಕೆ ಚಾಲನೆ ನೀಡಲಿದ್ದು, ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದೇವೆ. ಚಂದು ಕೂಡ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ.
ಹೌದು, ನಟ ದರ್ಶನ್ ಅಕ್ಕನ ಮಗನ ಸಿನಿಮಾ ಶುರುವಾಗಲಿದೆ ಎಂದು ಕಳೆದ ವರ್ಷದಿಂದ ಸುದ್ದಿ ಆಗುತ್ತಲೇ ಇತ್ತು. ಇದೀಗ ಎಲ್ಲಾ ಸಿದ್ಧತೆಗಳು ಮುಗಿದಿವೆ ಎಂಬ ಸುದ್ದಿ ಬಂದಿದೆ. ತನ್ನ ಸೋದರಳಿಯನ ಸಿನಿಮಾ ಆಗಿರುವುದರಿಂದ ದಿನಕರ್ ತೂಗುದೀಪ ಅವರು ಎಂತಹ ಕಥೆ ಮಾಡಿಕೊಂಡಿರಬಹುದು, ಎಂಥ ಚಿತ್ರಕಥೆ ಇರಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿದೆ. ಜನವರಿ ತಿಂಗಳಲ್ಲಿ ಚಿತ್ರಕ್ಕೆ ಚಾಲನೆ ನೀಡಲಿದ್ದು, ಬಹುಶಃ ಆ ವೇಳೆಗೆ ಚಿತ್ರದ ಕಥೆಯ ಬಗ್ಗೆ, ಶೂಟಿಂಗ್ ಲೊಕೇಶನ್ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬಹುದು. ಒಟ್ಟಿನಲ್ಲಿ, ದಿವಂಗತ 'ತೂಗುದೀಪ' ಶ್ರೀನಿವಾಸ್ ಅವರ ಕುಟುಂಬದ ಮೂರನೆಯ ತಲೆಮಾರಿನ ಕುಡಿ ಚಿತ್ರರಂಗಕ್ಕೆ ಕಾಲಿಡುವ ಮುಹೂರ್ತಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಅಂದಹಾಗೆ, ಸದ್ಯಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲೊಬ್ಬರಾದ ದರ್ಶನ್ ತೂಗುದೀಪ ನಟನೆ, ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಿರ್ದೇಶನದ 'ದಿ ಡೆವಿಲ್' ಸಿನಿಮಾ ಕರ್ನಾಟಕದಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. 1000ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಬಹುಶಃ ದರ್ಶನ್ ಅಭಿಮಾನಿಗಳು ಅವರ ಗೈರು ಹಾಜರಿಯಲ್ಲಿ ತಮ್ಮ ಬಾಸ್ ಚಿತ್ರವನ್ನು ನೋಡಿ ಹಬ್ಬದಾಚರಣೆ ಮಾಡುತ್ತಿದ್ದಾರೆ ಎನ್ನಬಹುದು. ಬಹುತೇಕರಿಗೆ ತಿಳಿದಿರುವ ಹಾಗೇ, ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ 'ಪರಪ್ಪನ ಅಗ್ರಹಾರ'ದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಅಂದಹಾಗೆ, ನಟ ದರ್ಶನ್ ಅಕ್ಕನ ಮಗ ಚಂದು ಅವರು 'ದಿ ಡೆವಿಲ್' ಸಿನಿಮಾದಲ್ಲಿ ಪಾತ್ರ ಮಾಡಬೇಕಿತ್ತು, ಆಯ್ಕೆ ಕೂಡ ಅಗಿತ್ತು. ಆದರೆ, ಅದನ್ನು ಕ್ಯಾನ್ಸಲ್ ಮಾಡಲಾಯ್ತು. ಅದಕ್ಕೆ ಕಾರಣವನ್ನು ಡೆವಿಲ್ ನಿರ್ದೇಶಕ ಪ್ರಕಾಶ್ ವೀರ್ ಹೇಳಿದ್ದಾರೆ. 'ಅದು ಕಾನ್ಷಿಯಸ್ ಡಿಸಿಷನ್. ಚಂದು ಮಾಡಬೇಕಿದ್ದ ಆ ಪಾತ್ರವನ್ನ ಯುವರಾಜ್ ಅವರು ಮಾಡಿದ್ದಾರೆ. ಚಂದು ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಹಾಗಾಗಿ ಅವರ ತಯಾರಿಗಳು ನಡೆಯುತ್ತಿದ್ದಾಗ, ಈ ಚಿಕ್ಕ ಪಾತ್ರ ಬೇಡ ಅಂತ ಹೇಳಿ ನಿರ್ಧಾರ ಆಗಿದ್ದು. ಆ ಪಾತ್ರ ಕೂಡ ತುಂಬಾ ಸ್ಟ್ರಾಂಗ್ ಆಗಿರುವಂಥದ್ದು. ಹಾಗಾಗಿ, ಯುವರಾಜ್ ಎಂಬುವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ' ಎಂದಿದ್ದಾರೆ ಮಿಲನ ಪ್ರಕಾಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.