'ತಪ್ಪಾಯ್ತು, ಕ್ಷಮಿಸಿಬಿಡಿ';ಅಳುತ್ತಾ ಮಂಡಿಯೂರಿ ಕ್ಷಮೆಯಾಚಿಸಿದ ನಟ ವಿಜಯ್‌ ರಂಗರಾಜು

By Kannadaprabha NewsFirst Published Dec 14, 2020, 8:42 AM IST
Highlights

‘ನಾನು ದೊಡ್ಡ ತಪ್ಪು ಮಾಡಿದ್ದೇನೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ. ಪ್ರತಿಯೊಬ್ಬರ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ, ದಯಮಾಡಿ ನನ್ನನ್ನ ಬಿಟ್ಟುಬಿಡಿ’

ಹೀಗೆ ಮಂಡಿಯೂರಿ ಆರ್ತವಾಗಿ ಕ್ಷಮೆ ಕೇಳಿದ್ದು ತೆಲುಗು ನಟ ವಿಜಯ್‌ ರಂಗರಾಜು.

ಹಿಂದೆ ಸಂದರ್ಶನವೊಂದರಲ್ಲಿ ವಿಷ್ಣುವರ್ಧನ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯ್‌ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಯಶ್‌, ಜಗ್ಗೇಶ್‌ ಸೇರಿದಂತೆ ಕನ್ನಡ ಚಿತ್ರರಂಗದ ಹೆಚ್ಚಿನೆಲ್ಲ ನಟರು, ವಿಷ್ಣುವರ್ಧನ್‌ ಅಭಿಮಾನಿಗಳು ವಿಜಯ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ವಿಷ್ಣುಸೇನೆ, ವಿಷ್ಣುವರ್ಧನ್‌ ಅಭಿಮಾನಿಗಳು ವಿಜಯ್‌ ವಿರುದ್ಧ ಪೊಲೀಸ್‌ ಕಂಪ್ಲೇಂಟ್‌ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ದೂರು ದಾಖಲಿಸಿತ್ತು.

"

ವಿಷ್ಣುವರ್ಧನ್‌ಗೆ ಅವಮಾನ: ಕನ್ನಡಿಗರ ಕ್ಷಮೆ ಕೋರಿದ ನಟ ವಿಜಯ್ ರಂಗರಾಜು!

ಇದೀಗ ವಿಜಯ್‌ ರಂಗರಾಜು ಸಮಸ್ತ ಕನ್ನಡಿಗರ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ‘ನಾನು ದೊಡ್ಡ ತಪ್ಪು ಮಾಡಿದ್ದೇನೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ. ನನಗೆ ಕೊರೋನಾ ಬಂದಿದೆ ಅದಕ್ಕೆ ಮಾಸ್ಕ್‌ ಹಾಕಿಕೊಂಡಿದ್ದೇನೆ ನಿಮಗೆ ಮುಖ ತೋರಿಸಬಾರದು ಅಂತ ಅಲ್ಲ. ನಾನು ಆ ದಿನ ನಾನು ವಿಷ್ಣು ಅವರನ್ನ ಹಿಡಿದುಕೊಂಡಿರಲಿಲ್ಲ. ಹಾಗೆ ಹಿಡಿದುಕೊಂಡಿದ್ರೆ ಯೂನಿಟ್‌ ಅವರು ಬಿಡುತ್ತಿದ್ದರಾ, ಅಂದೇ ಸಾಯಿಸಿ ಬಿಡುತ್ತಿದ್ದರು. ಏನೋ ಫೋನಲ್ಲಿ ಹೇಳಿಬಿಟ್ಟೆ, ದಯವಿಟ್ಟು ಕ್ಷಮಿಸಿ. ನನ್ನನ್ನು ಬಿಟ್ಟುಬಿಡಿ, ಪ್ರತಿಯೊಬ್ಬರಿಗೂ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ’ ಎಂದು ಬೇಡಿಕೊಂಡಿದ್ದಾರೆ.

‘ಭಾರತಿ ಅಮ್ಮನವರ ಕಾಲು ಹಿಡಿದು ಕ್ಷಮೆ ಕೇಳುತ್ತೇನೆ. ಸುದೀಪ್‌, ರಾಜ್‌ಕುಮಾರ್‌ ಪುತ್ರ ಪುನೀತ್‌ ರಾಜ್‌ಕುಮಾರ್‌, ಉಪೇಂದ್ರ ಎಲ್ಲರ ಬಳಿ ಕ್ಷಮೆ ಕೇಳಿಕೊಳ್ಳುತ್ತೇನೆ. ವಿಷ್ಣುವರ್ಧನ್‌ ಅಭಿಮಾನಿಗಳು ನನ್ನನ್ನು ದಯಮಾಡಿ ಕ್ಷಮಿಸಬೇಕು’ ಎಂದು ವಿಜಯ್‌ ಕಣ್ಣೀರು ಸುರಿಸಿದ್ದಾರೆ.

ಕ್ಷಮೆಗೆ ಅರ್ಹರಲ್ಲ : ಸುಮಲತಾ

ವಿಷ್ಣುವರ್ಧನ್‌ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ ’ಚೀಪ್‌ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು ಎಂದು ಖಾರವಾಗಿ ಸಂಸದೆ ಸುಮಲತಾ ಟ್ವೀಟ್‌ ಮಾಡಿದ್ದಾರೆ.

‘ಕೆಲವು ಸಿನಿಮಾಗಳಲ್ಲಷ್ಟೇ ಅಭಿನಯಿಸಿದ್ದೇನೆ. ನಾನೇನು ದೊಡ್ಡ ನಟನಲ್ಲ, ಒಬ್ಬ ಫೈಟರ್‌ ಆಗಿಯಷ್ಟೇ ಸಿನಿಮಾಕ್ಕೆ ಬಂದಿದ್ದೆ. ಸ್ವಲ್ಪ ಕಾಲ ಬ್ಯುಸಿನೆಸ್‌ ಮಾಡಿಕೊಂಡಿದ್ದೆ. ಕೆಲವು ವರ್ಷ ಲಂಡನ್‌ನಲ್ಲೂ ನೆಲೆಸಿದ್ದೆ. ಅಲ್ಲಿ ಟಾಯ್ಲೆಟ್‌ ಕ್ಲೀನ್‌ ಮಾಡಿದ್ದೆ, ರಸ್ತೆ ಗುಡಿಸಿದ್ದೆ, ನನಗೆ ದೊಡ್ಡ ಯೋಗ್ಯತೆ ಇಲ್ಲ. ಆ ದೊಡ್ಡ ಮನುಷ್ಯ ವಿಷ್ಣುವರ್ಧನ್‌ ಬಗ್ಗೆ ಅಹಂಕಾರದಲ್ಲಿ ಹಾಗೆ ಮಾತನಾಡಿಬಿಟ್ಟೆ’ ಎಂದು ಗೋಳಾಡಿದ್ದಾರೆ.

ವಿಷ್ಣು ಅವಹೇಳನ ಮಾಡಿದ ತೆಲುಗು ನಟನಿಗೆ ಹುಚ್ಚ ವೆಂಕಟ್ ಖಡಕ್ ವಾರ್ನಿಂಗ್ 

ಹಿಂದೆಂದೋ ನಡೆದ ಘಟನೆಯೊಂದರ ಸಿಟ್ಟಿನಲ್ಲಿ ತಾನು ಹಾಗೆ ಮಾತನಾಡಿದ್ದು, ಇನ್ನು ಮುಂದೆ ಯಾವತ್ತೂ ಈ ರೀತಿ ಮಾತನಾಡುವುದಿಲ್ಲ ಎಂದೂ ವಿಜಯ್‌ ಹೇಳಿದ್ದಾರೆ.

 

click me!