
ನಟ ಚೇತನ್ ಅಹಿಂಸಾ ಅವರು ಡಾ. ರಾಜ್ಕುಮಾರ್ ಅವರಿಗೆ ಸಂಬಂಧಿಸಿದ ಭೂಮಿ ಹಂಚಿಕೆ ವಿಚಾರದ ಕುರಿತು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದು, ಈ ವಿಚಾರವು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸರ್ಕಾರವು ಸಾರ್ವಜನಿಕ ಭೂಮಿಯನ್ನು ಲಾಭದ ಉದ್ದೇಶದಿಂದ ಹಂಚಿಕೆ ಮಾಡುವುದು ಸರಿಯಲ್ಲ ಎಂದು ಅವರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ಕೂಡ ಡಾ. ರಾಜ್ಕುಮಾರ್ ಅವರ ಅಭಿಮಾನಿ. ಅವರ ಬಗ್ಗೆ ನನಗೂ ಅಪಾರ ಗೌರವ ಮತ್ತು ಪ್ರೀತಿ ಇದೆ. ಆದರೆ, ಈ ರೀತಿಯಾಗಿ ಸರ್ಕಾರ ಭೂಮಿ ನೀಡುವುದು ಸೂಕ್ತ ಕ್ರಮವಲ್ಲ. ಡಾ. ರಾಜ್ಕುಮಾರ್ ಅವರು ಬದುಕಿದ್ದರೆ, ಅವರು ತಾವೇ ಇದನ್ನು ನಿರಾಕರಿಸುತ್ತಿದ್ದರು” ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.
ಇದೇ ವೇಳೆ, ಇಂತಹ ನಿರ್ಧಾರಗಳು ಭವಿಷ್ಯದಲ್ಲಿ ಅನಗತ್ಯ ವಿವಾದಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಈಗಾಗಲೇ ಇಂತಹ ವಿಚಾರಗಳಲ್ಲಿ ಸಂಘರ್ಷಗಳು ನಡೆದಿವೆ. ವಿಷ್ಣುವರ್ಧನ್ ಅಭಿಮಾನಿಗಳು ಕೂಡ ಜಾಗದ ಬೇಡಿಕೆ ಇಟ್ಟಿದ್ದಾರೆ. ಇಂತಹ ಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆಗಳಿಗೆ ದಾರಿ ಮಾಡಿಕೊಡಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಗಳ ಈ ರೀತಿಯ ಕ್ರಮಗಳು ವೋಟ್ ಬ್ಯಾಂಕ್ ರಾಜಕೀಯದ ಭಾಗವಾಗಿರಬಹುದು ಎಂದು ಸೂಚಿಸಿರುವ ಅವರು, ಜನಸಂಖ್ಯೆ ಹೆಚ್ಚುತ್ತಿರುವ ಈ ಕಾಲದಲ್ಲಿ ಭೂಮಿಗಾಗಿ ಹೋರಾಟ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಭೂಮಿಯನ್ನು ಹಂಚಿಕೆ ಮಾಡುವುದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು ಎಂದಿದ್ದಾರೆ.
ಅದೇ ವೇಳೆ, ಡಾ. ರಾಜ್ಕುಮಾರ್ ಅವರ ಸ್ಮರಣಾರ್ಥ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕಾದರೆ, ಅವರ ಹುಟ್ಟೂರು ಗಾಜನೂರನ್ನು ಅಭಿವೃದ್ಧಿಪಡಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. “ಕುವೆಂಪು ಅವರ ಮನೆ ಕುಪ್ಪಳ್ಳಿಯಲ್ಲಿ ಹೇಗೆ ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸಲಾಗಿದೆವೋ, ಅದೇ ಮಾದರಿಯಲ್ಲಿ ಗಾಜನೂರನ್ನು ಅಭಿವೃದ್ಧಿಪಡಿಸಬಹುದು. ಇದು ಭಾವನಾತ್ಮಕ ವಿಚಾರ ಮಾತ್ರವಲ್ಲ, ಭವಿಷ್ಯದ ದೃಷ್ಟಿಯಿಂದಲೂ ಸೂಕ್ತವಾದ ಕ್ರಮವಾಗಿರುತ್ತದೆ” ಎಂದು ಹೇಳಿದ್ದಾರೆ.
ಇನ್ನೂ ಹಲವು ಗಣ್ಯ ವ್ಯಕ್ತಿಗಳ ಉದಾಹರಣೆ ನೀಡಿ ಮಾತನಾಡಿದ ಅವರು, ಪುಟ್ಟಣ್ಣ ಕಣಗಾಲ್, ನಂಜುಂಡಸ್ವಾಮಿ, ಸರೋಜಾ ದೇವಿ, ವಿಷ್ಣುವರ್ಧನ್ ಸೇರಿದಂತೆ ಅನೇಕರು ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ ಅವರಿಗೆ ಈ ರೀತಿಯಾಗಿ ನಗರ ಮಧ್ಯಭಾಗದಲ್ಲಿ ಭೂಮಿ ನೀಡಲಾಗಿಲ್ಲ. ಡಾ. ರಾಜ್ಕುಮಾರ್ ಅವರ ವಿಷಯದಲ್ಲೂ ಗಾಜನೂರಿನಲ್ಲಿ ಯೋಜನೆ ರೂಪಿಸಬಹುದಿತ್ತು ಎಂದು ತಿಳಿಸಿದ್ದಾರೆ.
ನಗರದ ಕೇಂದ್ರ ಭಾಗದಲ್ಲಿ ಭೂಮಿ ಹಂಚಿಕೆ ಮಾಡುವ ಕುರಿತು ಪ್ರಶ್ನೆ ಎತ್ತಿದ ಅವರು, ಸಿಟಿ ಸೆಂಟರ್ನಲ್ಲಿ ಎಷ್ಟು ಭೂಮಿ ನೀಡಬೇಕು, ಯಾವ ಮಟ್ಟಿಗೆ ನೀಡಬೇಕು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ನಾವು ಡಾ. ರಾಜ್ಕುಮಾರ್ ಅವರ ಕಲಾಸೇವೆ ಮತ್ತು ಕೊಡುಗೆಯನ್ನು ಗೌರವಿಸುತ್ತೇವೆ. ಆದರೆ, ಅವರ ಹೆಸರಿನಲ್ಲಿ ಸರ್ಕಾರವು ಲಾಭ ಪಡೆಯಲು ಯತ್ನಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಈ ವಿಚಾರದಲ್ಲಿ ಭಾವನೆಗಿಂತಲೂ ದೂರದೃಷ್ಟಿಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಚೇತನ್ ಅಹಿಂಸಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.