
ಬೆಂಗಳೂರು, (ಮಾ.08): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಸೋಮವಾರ) 2021-22ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದರು. ಸಾಮಾನ್ಯವಾಗಿ ವಿರೋಧ ಪಕ್ಷಗಳು ಬಜೆಟ್ಗೆ ವ್ಯಂಗ್ಯವಾಡಿದ್ರೆ, ಆಡಳಿತ ಪಕ್ಷದ ನಾಯಕರು ಬಜೆಟ್ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ.
ಬಜೆಟ್ ಪ್ರತಿ ಓದುತ್ತಾ ಕೊಂಚ ಆಯಾಸ ಅನುಭವಿಸಿದಂತೆ ಕಂಡುಬಂತಾದರೂ ಎರಡು ಗಂಟೆಗಳ ಕಾಲ ನಿಂತುಕೊಂಡೇ ಓದಿದರು. ಸುದೀರ್ಘಾವಧಿ ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಸಂಕಷ್ಟ ಕಾಲದಲ್ಲಿಯೂ ಒಂದು ರೂಪಾಯಿ ತೆರಿಗೆ ಹೆಚ್ಚಿಸದ ಐತಿಹಾಸಿಕ ಬಜೆಟ್ ಇದು ಎಂದು ಸಮರ್ಥಿಸಿಕೊಂಡರು. ಇನ್ನು ಬಜೆಟ್ ಬಗ್ಗೆ ಯಾರು ಏನು ಹೇಳಿದ್ದಾರೆ ಎನ್ನುವುದ ಈ ಕೆಳಗಿನಂತಿದೆ.
ಕರ್ನಾಟಕ ಬಜೆಟ್ 2021ರ ಸಮಗ್ರ ಮಾಹಿತಿ
ಬಂಡೆಪ್ಪ ಕಾಶಪ್ಪನವರ್
ಇನ್ನು ಬಜೆಟ್ ಬಗ್ಗೆ ಜೆಡಿಎಸ್ ಶಾಸಕ ಬಂಡೆಪ್ಪ ಕಾಶಪ್ಪನವರ್ ಪ್ರತಿಕ್ರಿಯಿಸಿ, ಸಿಎಂ ಬಿ ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ನಿರಾಶೆಯಿಂದ ಕೂಡಿದೆ. ಈ ಬಜೆಟ್ ಗೆ ದಿಕ್ಕು ದೆಸೆ ಏನೂ ಇಲ್ಲ. ಬಜೆಟ್ ನಲ್ಲಿ ರೈತರಿಗೆ ಸಾಕಷ್ಟು ಕೊಡಗೆ ಕೊಡಬಹುದೆಂದು ನೀರಿಕ್ಷೆ ಇಡಲಾಗಿತ್ತು. ಆದರೆ ರೈತರಿಗೆ ಬಜೆಟ್ ನಿಂದ ಉಪಯೋಗಿವಿಲ್ಲ. ಯಾವುದೇ ವರ್ಗದ ಬಡ ಜನರಿಗೆ ಏನೂ ಉಪಯೋಗವಿಲ್ಲ ಎಂದರು.
ಸಾರಾ ಮಹೇಶ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದರು, ಓಲ್ಡ್ ವೈನ್ ಇನ್ ನ್ಯೂ ಬಾಟೆಲ್ ತರಾ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ನಮ್ಮ ಸಮ್ಮಿಶ್ರ ಸರ್ಕಾರಲ್ಲಿ ಹಾಗೂ ಹಿಂದಿನ ಸರ್ಕಾರದಲ್ಲಿ ಏನ್ ಜಾರಿಗೆ ತರಬೇಕು ಅಂತಿದ್ವೋ ಅದನ್ನೇ ಜಾರಿಗೆ ತಂದಿದ್ದಾರೆ. ಇದರಿಂದ ಜನರಿಗೇನೂ ಲಾಭ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿ.ಸಿ. ಪಾಟೀಲ್ ಮಾತು
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2021-22ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಅದರಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಕೃಷಿ ಹಾಗೂ ಪೂರಕ ಚಟುವಟಿಕೆಗೆ ಒಟ್ಟಾರೆ ಬಜೆಟ್ ನಲ್ಲಿ 31,028 ಕೋಟಿ. ರೂ. ಮೀಸಲು ಇಡಲಾಗಿದೆ. ಕೃಷಿಕರ ಆದಾಯವನ್ನು 2023ರ ವೇಳೆಗೆ ದ್ವಿಗುಣಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಕೈಜೋಡಿಸಿ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಬಜೆಟ್ ಬಗ್ಗೆ ಖರ್ಗೆ ಟ್ವೀಟ್
ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದು, ಈ ಬಜೆಟ್
- ಯಾರಿಗೂ ಸಾಥ್ ನೀಡಿಲ್ಲ, - ಯಾರ ವಿಕಾಸವೂ ಆಗೋಲ್ಲ, - ಯಾರ ವಿಶ್ವಾಸವೂ ಗಳಿಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.