West Bengal : ದೀದಿ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಭಾರಿ ಹೋರಾಟ!

By Kannadaprabha NewsFirst Published Sep 14, 2022, 5:45 AM IST
Highlights

ತೃಣಮೂಲ ಕಾಂಗ್ರೆಸ್‌ ಆಡಳಿತದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ವಿಧಾನಸೌಧ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿ ಮುತ್ತಿಗೆ ಕಾರ್ಯಕ್ರಮ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.

ಕೋಲ್ಕತಾ (ಸೆ.14) : ತೃಣಮೂಲ ಕಾಂಗ್ರೆಸ್‌ ಆಡಳಿತದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ವಿಧಾನಸೌಧ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿ ಮುತ್ತಿಗೆ ಕಾರ್ಯಕ್ರಮ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಇದು ಕೋಲ್ಕತಾ ಹಾಗೂ ರಾಜ್ಯದ ಹಲವು ಭಾಗಗಳನ್ನು ರಣಾಂಗಣವನ್ನಾಗಿಸಿದೆ. ರಾರ‍ಯಲಿ ತಡೆಯಲು ಪೊಲೀಸರು ಯತ್ನಿಸಿದ ವೇಳೆ ಭಾರೀ ಗಲಾಟೆ ಏರ್ಪಟಿದ್ದು, ಈ ವೇಳೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಲವು ಸಂಸದರು, ಶಾಸಕರು ಮತ್ತು ನಾಯಕರು ಗಾಯಗೊಂಡಿದ್ದಾರೆ.

Bengal Politics ಸಂಕಷ್ಟದಲ್ಲಿ ಸಿಎಂ ಮಮತಾ ಬ್ಯಾನರ್ಜಿ, ದೀದಿ ಕುಟುಂಬಸ್ಥರ ವಿರುದ್ಧ ದಿಟ್ಟ ಹೆಜ್ಜೆ ಇಟ್ಟ ಹೈಕೋರ್ಟ್!

ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೂ ದಾಳಿ ಮಾಡಿದ್ದಾರೆ. 56 ಪೊಲೀಸರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪ್ರತಿಭಟನೆ ತಡೆಯಲು ಯತ್ನಿಸಿದ ಟಿಎಂಸಿ ಸರ್ಕಾರದ ವರ್ತನೆ ವಿರುದ್ಧ ಕಿಡಿಕಾರಿರುವ ಬಿಜೆಪಿ, ‘ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ರೀತಿ ಮಮತಾ ಬ್ಯಾನರ್ಜಿ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದೆ. ಟಿಎಂಸಿ ತಿರುಗೇಟು ನೀಡಿ, ‘ಇವರೇನು ಬಿಜೆಪಿಗರೋ? ಗೂಂಡಾಗಳೋ’ ಎಂದಿದೆ.

ಏನಾಯ್ತು?:

ಟಿಎಂಸಿ ಆಡಳಿತದಲ್ಲಿ ನಡೆದಿರುವ ಪಾರ್ಥ ಚಟರ್ಜಿ ಶಿಕ್ಷಕ ನೇಮಕ ಹಗರಣ, ಅಭಿಷೇಕ್‌ ಬ್ಯಾನರ್ಜಿ ಕಲ್ಲಿದ್ದಲು ಹಗರಣ ಸೇರಿ ಹಲವು ಹಗರಣಗಳ ವಿರುದ್ಧ ಬಿಜೆಪಿ ಮಂಗಳವಾರ ವಿಧಾನಸೌಧ ಮತ್ತು ಸಿಎಂ ಮಮತಾ ಕಚೇರಿ ಇರುವ ‘ನಬನ್ನ’ ಸಚಿವಾಲಯ ಕಟ್ಟಡಕ್ಕೆ ನಗರದ ನಾನಾ ಭಾಗಗಳಿಂದ ರಾರ‍ಯಲಿ ನಡೆಸಿ ಮುತ್ತಿಗೆ ಹಾಕಲು ನಿರ್ಧರಿಸಿತ್ತು. ಈ ಪ್ರತಿಭಟನೆಗೆ ನೆರೆಹೊರೆಯ ಪ್ರದೇಶಗಳಿಂದ 7 ರೈಲುಗಳಲ್ಲಿ ಕಾರ್ಯಕರ್ತರನ್ನು ಕರೆಸಿಕೊಳ್ಳಲಾಗಿತ್ತು.

ಆದರೆ ನಗರದಾದ್ಯಂತ ಭಾರೀ ಬಂದೋಬಸ್‌್ತ ಏರ್ಪಡಿಸಿದ್ದ ಪೊಲೀಸರು ಬಿಜೆಪಿ ನಾಯಕರನ್ನು ವಿಧಾನಸೌಧ ಮತ್ತು ಸಚಿವಾಲಯದ ಕಟ್ಟಡದತ್ತ ತೆರಳದಂತೆ ತಡೆದರು. ಈ ವೇಳೆ ಹಲವು ಬಿಜೆಪಿ ನಾಯಕರು ಬ್ಯಾರಿಕೇಡ್‌ ಏರಿ ಮುಂದೆ ಸಾಗಲು ಯತ್ನಿಸಿದ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು, ಜಲಫಿರಂಗಿ ಸಿಡಿಸಿ ಪ್ರತಿಭಟನಾಕಾರನ್ನು ಚದುರಿಸಿದ್ದಾರೆ.

ಈ ವೇಳೆ ಪೊಲೀಸರದ್ದೂ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವು ಕಡೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಲಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟದ ಘಟನೆಯೂ ನಡೆದಿದೆ.

ಕಿಮ್‌ ಜಾಂಗ್‌ ರೀತಿ ಮಮತಾ ವರ್ತನೆ- ಸುವೇಂದು:

ಪ್ರತಿಭಟನೆಗೆ ಅಡ್ಡಿಪಡಿಸಿದ ಸರ್ಕಾರದ ವಿರುದ್ಧ ಹರಿಹಾಯ್ದಿರುವ ವಿಧಾನಸಭೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ, ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ಉತ್ತರ ಕೊರಿಯಾವನ್ನಾಗಿ ಪರಿವರ್ತಿಸಿದ್ದಾರೆ. ಸರ್ವಾಧಿಕಾರಿ ಕಿಮ್‌ ಜಾಂಗ್‌ ರೀತಿ ವರ್ತಿಸುತ್ತಿದ್ದಾರೆ. ಇಂದು ಪೊಲೀಸರು ಏನು ಮಾಡಿದ್ದಾರೋ ಅದಕ್ಕೆ ಅವರು ಬೆಲೆ ತೆರಬೇಕಾಗಿ ಬರಲಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದಿದ್ದಾರೆ.

ಇತರೆಡೆಯೂ ಘರ್ಷಣೆ:

ಕೋಲ್ಕತಾ ನಗರದ ಹೃದಯ ಭಾಗ ಮಾತ್ರವಲ್ಲದೇ, ಹೌರಾ, ಹೂಗ್ಲಿ, ಸಂತ್ರಾಗಚ್ಚಿ, ಲಾಲ್‌ಬಜಾರ್‌, ಎಂ,ಜಿ.ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲಿಸರು ಮತ್ತ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಪರಿಣಾಮ ಸಾಮಾನ್ಯ ಜನಜೀವನಕ್ಕೆ ಅಡ್ಡಿ ಆಯಿತು.

Mamata banerjee On RSS: ಆರೆಸ್ಸೆಸ್‌ ಕೆಟ್ಟ ಸಂಘಟನೆಯಲ್ಲ; ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ನನ್ನನ್ನು ಮುಟ್ಟಬೇಡ: ಮಹಿಳಾ ಪೊಲೀಸ್‌ಗೆ ಸುವೇಂದು

ಕೋಲ್ಕತಾ: ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮನ್ನು ಪೊಲೀಸ್‌ ವ್ಯಾನ್‌ ಏರಿಸಲು ಬಂದ ವೇಳೆ, ‘ಏಯ್‌ ನೀನು ಮಹಿಳೆ. ನನ್ನನ್ನು ಮುಟ್ಟಬೇಡ’ ಎಂದು ಸುವೇಂದು ಅಧಿಕಾರಿ ಅಬ್ಬರಿಸಿದ ಘಟನೆಯೂ ನಡೆಯಿತು. ಬಳಿಕ ಪುರುಷ ಪೊಲೀಸ್‌ ಅಧಿಕಾರಿಗೆ ತಮ್ಮನ್ನು ವಶಕ್ಕೆ ಪಡೆಯಲು ಅಧಿಕಾರಿ ಅವಕಾಶ ನೀಡಿದರು.

click me!