
ಬೆಂಗಳೂರು (ಜು.03) : ಬಿಜೆಪಿಗೆ ಪಕ್ಷಾಂತರ ಮಾಡಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ 17 ಮಂದಿ ಶಾಸಕರು ಮತ್ತೆ ಕಾಂಗ್ರೆಸ್ಗೆ ಬರುವುದಾದರೆ ತಾವು ಮುಕ್ತ ಮನಸ್ಥಿತಿ ಹೊಂದಿರುವುದಾಗಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕೆಪಿಸಿಸಿ ಅಧ್ಯಕ್ಷನಾಗಿ ನಾನು ಯಾರನ್ನೂ ಅಸ್ಪೃಶ್ಯರಂತೆ ಕಾಣುವುದಿಲ್ಲ. ಪಕ್ಷ ಸೇರಬಯಸುವ ಬಿಜೆಪಿ ಶಾಸಕರು ಅರ್ಜಿ ಹಾಕಿಕೊಳ್ಳಲಿ ಎಂದರು.
ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಬಿರುಕು: ದೇಶಪಾಂಡೆ ಹೇಳಿದ್ದೇನು? ...
ಅಲ್ಲದೆ, ರಾಜಕೀಯ ನಿಂತ ನೀರಲ್ಲ. ರಾಜಕಾರಣ ಯಾವಾಗಲೂ ಬದಲಾಗುತ್ತಿರುತ್ತದೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಯಾರನ್ನೂ ಅಸ್ಪೃಶ್ಯರಂತೆ ನೋಡುವುದಿಲ್ಲ. ಪಕ್ಷಕ್ಕೆ ಹಿಂತಿರುಗ ಬಯಸುವವರು ಅರ್ಜಿ ಹಾಕಿಕೊಂಡರೆ ಅದನ್ನು ಪರಿಶೀಲಿಸಲಾಗುವುದು ಎಂದೂ ತಿಳಿಸಿದರು.
ಪಕ್ಷದ ಸಿದ್ಧಾಂತ ಒಪ್ಪಬೇಕು: ಪಕ್ಷದ ಸಿದ್ಧಾಂತಕ್ಕೆ ಒಪ್ಪಿ ಬರುವುದಾದರೆ ಅರ್ಜಿ ಹಾಕಬಹುದು. ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ಮಾಡಿದ್ದು ಪಕ್ಷಕ್ಕೆ ಸೇರ್ಪಡೆಯಾಗಲು ಇಚ್ಛೆ ಇದ್ದವರು ಅಲ್ಲಿ ಅರ್ಜಿ ಹಾಕಬೇಕು. ಅರ್ಜಿಯನ್ನು ಸಮಿತಿ ಪರಿಶೀಲಿಸಿ ವರದಿ ನೀಡಿದ ಬಳಿಕ ಪಕ್ಷ ಅಂತಿಮ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಸಿದ್ದು ನಿಲುವಿಗೆ ಉಲ್ಟಾ: ಆಪರೇಷನ್ ಕಮಲದ ಮೂಲಕ ಪಕ್ಷ ಬಿಟ್ಟವರನ್ನು ಮತ್ತೆ ಸೇರಿಸಿಕೊಳ್ಳಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಗ ಏನಾಯಿತು ಅಥವಾ ಈಗ ಏನಾಯಿತು ಎಂಬುದು ಮಾತನಾಡುವುದಿಲ್ಲ. ರಾಜಕೀಯ ಯಾವ್ಯಾವ ಸಂದರ್ಭದಲ್ಲಿ ಯಾವ್ಯಾವ ರೀತಿ ಆಗಬೇಕೋ ಆ ರೀತಿ ಬದಲಾಗುತ್ತದೆ. ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಗಾದಿ, ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ ...
ಎಚ್ಡಿಕೆ ಹೇಳಿಕೆ ಅರ್ಥವಾಗಿಲ್ಲ: ಡಿಕೇಶಿ
17 ಜನ ಪುಣ್ಯಾತ್ಮರು ಪಕ್ಷ ಬಿಟ್ಟು ಹೋಗಿ ನನ್ನ ಜೀವ ಉಳಿಸಿದರು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಹೇಳಿಕೆಯನ್ನು 2-3 ಬಾರಿ ಓದಿದ್ದೇನೆ. ಓದುತ್ತಲೇ ಇದ್ದೇನೆ ಆದರೆ ಏನೂ ಅರ್ಥವಾಗಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಸರ್ಕಾರಕ್ಕೆ ಬೆನ್ನಿಗೆ ಚೂರಿ ಹಾಕಿದವರು ಎಂದು ಮಾತನಾಡಿದ್ದರು. ಇದೀಗ ಜೀವ ಉಳಿಸಿದರು ಎಂದು ಯಾವ ರೀತಿ ಹೇಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಈಶ್ವರಪ್ಪಗೆ ಚುನಾವಣೆಯಲ್ಲಿ ಉತ್ತರ : ಕಾಂಗ್ರೆಸ್ಗೆ ಅಪ್ಪ ಅಮ್ಮ ಇಲ್ಲ ಎಂದ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಧಾನ ಸಭಾ ಚುನಾವಣೆ ಬರಲಿ ಈಶ್ವರಪ್ಪಗೆ ತೋರಿಸುತ್ತೇವೆ. ಪಾಪ ಈಗ ಇದರ ಬಗ್ಗೆ ಮಾತನಾಡುವುದು ಬೇಡ ಎಂದು ತಿರುಗೇಟು ನೀಡಿದರು.
ನನ್ನ ಲೆವೆಲ್ ಅಲ್ಲ : ಇನ್ನು ಸಚಿವ ಶ್ರೀರಾಮುಲು ಆಪ್ತ ಸಹಾಯಕ ಬಂಧನದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅದು ಶ್ರೀರಾಮುಲು ಹಾಗೂ ವಿಜಯೇಂದ್ರ ವಿಚಾರ. ನನ್ನ ಲೆವೆಲ್ ಅಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.