
ಖಾನಾಪುರ (ಮಾ.03): ಯಡಿಯೂರಪ್ಪ ಅವರು ರಾಜ್ಯದ ಅತ್ಯುನ್ನತ ನಾಯಕ. ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದ್ದೇವೆ. ಕರ್ನಾಟಕಕ್ಕೆ ಅವರು ನೀಡಿದ ಸೇವೆಯನ್ನು ಬಿಜೆಪಿ ಎಂದಿಗೂ ಮರೆಯುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಗುರುವಾರ ವಿಜಯ ಸಂಕಲ್ಪಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೋದಿಯವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸಲಾಗುವುದು. ಯಡಿಯೂರಪ್ಪ ಅವರ ಆಶಯದಂತೆ ಬಿಜೆಪಿಗೆ ರಾಜ್ಯದಲ್ಲಿ 3ನೇ 2ರಷ್ಟು ಬಹುಮತ ಪಡೆಯುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಎಲ್ಲಿಯವರೆಗೆ ದೇಶದಲ್ಲಿ ಮೋದಿ ಆಡಳಿತವಿರುತ್ತದೆಯೋ ಅಲ್ಲಿಯವರೆಗೂ ದೇಶ ಜಗತ್ತಿನಲ್ಲಿ ಪ್ರಸಿದ್ಧಿ ಪಡೆಯಲಿದೆ. ಎಲ್ಲಿಯವರೆಗೆ ಬಿಜೆಪಿ ಇರುತ್ತದೆಯೋ, ಅಲ್ಲಿಯವರೆಗೆ ಜನರ ಸೇವೆ ನಡೆಯಲಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸುಭದ್ರವಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಸಾಕಷ್ಟುಅಭಿವೃದ್ಧಿ ಕಾರ್ಯಗಳಾಗಿವೆ. ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಇಲ್ಲಿಯ ಜನರ ಬೆಂಬಲ ಹಾಗೂ ಉತ್ಸಾಹ ನೋಡಿದರೆ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯೋದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಬೊಮ್ಮಾಯಿ ಯಾರೆಂದು ಕೇಳಿದರೆ 40% ಕಮಿಷನ್ ಸರ್ಕಾರದ ಸಿಎಂ ಎನ್ನುತ್ತಿದ್ದಾರೆ: ರಣದೀಪ್ ಸಿಂಗ್ ಸುರ್ಜೇವಾಲ
ವೀರರನ್ನು ನೀಡಿದ ನಾಡಿದು. ರಾಣಿ ಚನ್ನಮ್ಮಳ ವೀರಗಾಥೆಯನ್ನು ದೇಶದ ವಿವಿಧೆಡೆ ಚರ್ಚಿಸುತ್ತಾರೆ. ಸಂಗೊಳ್ಳಿ ರಾಯಣ್ಣ ಸ್ಫೂರ್ತಿದಾಯಕ ನಾಯಕ. ಅವರ ಪ್ರತಿಮೆ, ಸಮಾಧಿಗೆ ಮಾಲಾರ್ಪಣೆ ಮಾಡಿ ಧನ್ಯತಾ ಭಾವ ಹೊಂದಿದ್ದೇನೆ. ಹನುಮಂತಪ್ಪ ಕೊಪ್ಪದ ಅವರು ನೀಡಿದ ಸೇವೆಯನ್ನು ಇಡೀ ಸೈನ್ಯ ನೆನಪಿಟ್ಟುಕೊಳ್ಳುತ್ತದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಂತಹ ಹೋರಾಟಗಾರರು ಹುಟ್ಟಿದ ಪುಣ್ಯಭೂಮಿಯಿದು ಎಂದರು.
2 ಕಿ.ಮೀ.ಭರ್ಜರಿ ರೋಡ್ ಶೋ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿರುವ ಬಿಜೆಪಿ, ಖಾನಾಪುರ ತಾಲೂಕಿನ ನಂದಗಡದಲ್ಲಿ ಶುಕ್ರವಾರ 2ನೇ ಹಂತದ ‘ವಿಜಯ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿತು. ಕೇಂದ್ರ ಸಚಿವ ರಾಜನಾಥ ಸಿಂಗ್, ಡೊಳ್ಳು ಬಾರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ, ಅವರನ್ನು ಪಕ್ಷದ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು. ಇದಕ್ಕೂ ಮೊದಲು ಅವರು ನಂದಗಡದ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಭೇಟಿ ನೀಡಿ, ರಾಯಣ್ಣನ ಪುತ್ಥಳಿಗೆ ಗೌರವಾರ್ಪಣೆ ಸಲ್ಲಿಸಿದರು. ಯಾತ್ರೆಗೆ ಚಾಲನೆ ನೀಡಿದ ಬಳಿಕ, ರಾಜನಾಥ್ ಸಿಂಗ್ ಅವರು ಚನ್ನಮ್ಮನ ಕಿತ್ತೂರಿನಲ್ಲಿ ಭರ್ಜರಿ ಎರಡು ಕಿಮೀ ರೋಡ್ ಶೋ ನಡೆಸಿದರು.
ಸಂತ ಶಿಶುನಾಳ ಶರೀಫರ ತತ್ವಪದ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ: ಸಿಎಂ ಬೊಮ್ಮಾಯಿ
ಮಧ್ಯಾಹ್ನ 2.10ಕ್ಕೆ ಕಿತ್ತೂರು ಸೈನಿಕ್ ಸ್ಕೂಲ್ ಆವರಣಕ್ಕೆ ಬಂದ ರಾಜನಾಥ್ ಸಿಂಗ್, ಅಲ್ಲಿಯೇ ಭೋಜನ ಸವಿದರು. ನಂತರ, ಚನ್ನಮ್ಮನ ಕಿತ್ತೂರಿನಲ್ಲಿರುವ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರೋಡ್ ಶೋ ಆರಂಭಿಸಿದರು. ಸುಮಾರು ಒಂದೂವರೆ ಗಂಟೆ ಕಾಲ, ಎರಡು ಕಿಮೀವರೆಗೆ ರೋಡ್ ಶೋ ನಡೆಯಿತು. ಸಂಜೆ 4 ಗಂಟೆಗೆ ಆರಂಭವಾದ ರೋಡ್ ಶೋ, 5.35ಕ್ಕೆ ಮುಕ್ತಾಯವಾಯಿತು. ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟಿಲ್, ಸಚಿವರಾದ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ ಹಾಗೂ ಇತರ ಗಣ್ಯರು ಅವರಿಗೆ ಸಾಥ್ ನೀಡಿದರು. ಪ್ರಧಾನಿ ಮೋದಿಯವರು ಬೆಳಗಾವಿಯಲ್ಲಿ ರೋಡ್ ಶೋ ನಡೆಸಿದ ಬಳಿಕ, ಕೇವಲ ಮೂರೇ ದಿನದ ಅವಧಿಯಲ್ಲಿ ರಾಜನಾಥ್ ಸಿಂಗ್ ಅವರು ರೋಡ್ ಶೋ ನಡೆಸಿದ್ದು ವಿಶೇಷವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.