
ಚನ್ನಮ್ಮನ ಕಿತ್ತೂರು (ಮಾ.03): ಪ್ರಧಾನಿ ನರೇಂದ್ರ ಮೋದಿ ನ ಕಾವೂಂಗಾ ಕಾನೆದೂಂಗಾ ಎಂದು ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಆಡಳಿತದ ಸರ್ಕಾರವನ್ನು ಏಕೆ ತಿನ್ನಲು ಬಿಟ್ಟಿದ್ದಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ತಾಲೂಕಿನ ಹೊಸ ಕಾದರವಳ್ಳಿ(ಇಟಗಿ ಕ್ರಾಸ್) ಬಳಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಪಕ್ಷದಿಂದ ಬುಧವಾರ ಹಮ್ಮಿಕೊಂಡ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳಿನ ಕಾರ್ಖಾನೆಗಳಿದ್ದಂತೆ ಎಂದು ಕಿಡಿಕಾರಿದರು.
ಮೇನು ಕಾರ್ಡ್ ತರಹ ಎಲ್ಲ ಕೆಲಸಗಳಿಗೂ ಬಿಜೆಪಿ ಸರ್ಕಾರ ದರ ನಿಗದಿ ಮಾಡಿದೆ. ಈ ಸರ್ಕಾರದ ಲಂಚಾವತರಾಕ್ಕೆ ವಿಧಾನಸೌಧದ ಎಲ್ಲ ಗೋಡೆಗಳು ಸಹ ಲಂಚ ಲಂಚ ಎನ್ನುತ್ತಿವೆ. ಈಗಾಗಲೇ ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷವೂ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್ ಹಾಗೂ ಕುಟುಂಬದ ಯಜಮಾನಿಗೆ ತಿಂಗಳಿಗೆ .2 ಸಾವಿರ ನೀಡುವ ಬಗ್ಗೆ ಭರವಸೆ ನೀಡಿದೆ. ಇದನ್ನು ತಪ್ಪಿದ್ದಲ್ಲಿ ಒಂದು ಸೆಕೆಂಡ್ ಸಹ ಕುರ್ಚಿ ಮೇಲೆ ಕುಳಿತುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ ರೋಡ್ ಶೋಗೆ ಹಣ ಕೊಟ್ಟು ಜನ ಕರೆಸಿದ್ದಾರೆ: ಸಿದ್ದರಾಮಯ್ಯ
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರು ಸ್ವ ಸಹಾಯ ಸಂಘದಲ್ಲಿ ಮಾಡಿರುವ ಸಾಲದಲ್ಲಿ ಔಟ್ ಸ್ಟ್ಯಾಂಡಿಗ್ ಸಾಲವನ್ನು ಸಹ ಕಾಂಗ್ರೆಸ್ ಮನ್ನಾ ಮಾಡಲಿದೆ ಎಂದು ತಿಳಿಸಿದರು. ಸಬ್ ಕಾ ಸಾತ್, ಸಬ್ ಕಾ ವಿಕಾಸ ಎಂದು ಮಾತನಾಡುವ ಬಿಜೆಪಿಗರು ದೇಶದಲ್ಲಿ ಯಾರನ್ನು ಜೊತೆಗೆ ಕೊಂಡೊಯ್ಯುತ್ತಿದ್ದಾರೆ?. ಹಾಗಿದ್ದರೇ ಇವರು ಕ್ರಿಶ್ಚಿಯನ್ಸ್ಗೆ ಪಕ್ಷ ಟಿಕೆಟ್ ನೀಡುತ್ತಾರೆಯೇ?. ದೇಶದಲ್ಲಿ 140 ಕೋಟಿ ಜನರನ್ನು ಜೊತೆಯಲ್ಲಿ ಕಾಂಗ್ರೆಸ್ ಕೊಂಡೊಯ್ಯುತ್ತಿದ್ದು ನೂರಕ್ಕೆ ನೂರರಷ್ಟುಈ ಭಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ 2013 ರಲ್ಲಿ ನೀಡಿದ ಶೇ.95 ರಷ್ಟು ಎಲ್ಲ ಭರವಸೆಗಳನ್ನು ಈಡೇರಿಸಿದೆ. ಆದರೆ, ಬಿಜೆಪಿ 2018 ರಲ್ಲಿ 600 ಭರವಸೆಗಳನ್ನು ನೀಡಿ ಅದರಲ್ಲಿ ಕೇವಲ 50 ಬೇಡಿಕೆಗಳನ್ನು ಈಡೇರಿಸಿದ್ದಾರೆ. ಅಧಿಕಾರ ಕೊನೆಗೊಳ್ಳಲು ಇನ್ನೇನು 25 ದಿನಗಳ ಮಾತ್ರ ಬಾಕಿ ಇದ್ದು ಇನ್ನೂಳಿದ 550 ಭರವಸೆಗಳನ್ನು ಈ ಸರ್ಕಾರ ಈಡೇರಿಸಲು ಸಾಧ್ಯವೆ? ಈ ರೀತಿ ಸುಳ್ಳು ಹೇಳುವ ಬಿಜೆಪಿ ಸರ್ಕಾರಕ್ಕೆ ಜನ ಬೆಸತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿಗರಿಗೆ ಮನೆಯ ದಾರಿಯನ್ನು ಮತದಾರರು ತೋರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಬೆಲೆ ಏರಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ, ಇಂತಹ ದುರಾಡಳಿತದಿಂದ ಜನ ರೋಷಿ ಹೋಗಿದ್ದು ಈ ಭಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಅಧಿಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಜಮೀರ್ಅಹ್ಮದ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಎನ್.ಎಚ್.ಕೋನರೆಡ್ಡಿ, ಮಾಜಿ ಸಚಿವ ಡಿ.ಬಿ.ಇನಾಂದಾರ, ಕಾಂಗ್ರೆಸ್ ಮುಖಂಡರಾದ ಬಾಬಾಸಾಹೇಬ್ ಪಾಟೀಲ, ಸಲೀಂ ಕಾಶೀಂನವರ, ಸೈಯ್ಯದ್ ಮನ್ಸೂರ, ಕೆಪಿಸಿಸಿ ಸದಸ್ಯರು ರೋಹಿಣಿ ಪಾಟೀಲ, ಹಬೀಬ್ ಶಿಲೇದಾರ ಸೇರಿದಂತೆ ಕೆಪಿಸಿಸಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪಕ್ಷದ ಗೆಲುವಿಗೆ ವಾಗ್ದಾನ ಪಡೆದುಕೊಂಡ ಸಿದ್ದರಾಮಯ್ಯ: ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಮಾಜಿ ಸಚಿವ ಡಿ.ಬಿ.ಇನಾಂದಾರ ಹಾಗೂ ಮುಖಂಡ ಬಾಬಾಸಾಹೇಬ್ ಪಾಟೀಲ ಅವರ ಅಭಿಮಾನಿಗಳಿ ಜಿದ್ದಿಗೆ ಬಿದ್ದಂತೆ ತಮ್ಮ ನಾಯಕರಿಗೆ ಜೈಕಾರ ಹಾಕಲಾರಂಭಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದ್ದಂತೆ ಈ ಎರಡು ಮುಖಂಡರ ಅಭಿಮಾನಿಗಳು ವೇದಿಕೆಯ ಬಳಿ ಮುಗಿ ಬಿದ್ದು ಮತ್ತೇ ಜೈಕಾರ ಆರಂಭಿಸಿದರು. ಇವರನ್ನು ಶಾಂತಗೊಳಿಸಲು ಪೊಲೀಸ್ ಇಲಾಖೆ ಹರಸಾಹಸ ಪಡಬೇಕಾಯಿತು. ನಂತರ ಮಾಜಿ ಸಿಎಂ ಸಿದ್ದರಾಮಯ್ಯನವರು ಭಾಷಣದ ಕೊನೆಯಲ್ಲಿ ಈ ಮೂವರು ಟಿಕೆಟ್ ಆಕಾಂಕ್ಷಿಗಳಿಗೆ ಕೈ ಮುಗಿದು ಯಾರಿಗೆ ಟಿಕೆಟ್ ಸಿಕ್ಕರೂ ಸಹ ಪಕ್ಷದ ಗೆಲುವಿಗಾಗಿ ದುಡಿಯುತ್ತೇವೆ ಎಂದು ಜನರ ಮುಂದೆ ವಾಗ್ದಾನ ಪಡೆದುಕೊಂಡರು.
ವಿಧಾನಸೌಧದಲ್ಲೇ ವಿಪರೀತ ಲಂಚ ತಾಂಡವ: ಸಿದ್ದರಾಮಯ್ಯ
ತಹಸೀಲ್ದಾರ್ ಹುದ್ದೆಯಲ್ಲಿರುವ ಅಧಿಕಾರಿಗಳೇ ಲಂಚ ಪಡೆಯುವಾಗ ಕಿತ್ತೂರಿನಲ್ಲಿಯೇ ಲೋಕಾಯುಕ್ತರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇಂತಹ ದುರಾಡಳಿತ ಹಾಗೂ ಲಂಚಬಾಕ್ ಬಿಜೆಪಿ ಸರ್ಕಾರಕ್ಕೆ ಮತದಾರರು ಬುದ್ಧಿ ಕಲಿಸಬೇಕು.
-ಸಿದ್ದರಾಮಯ್ಯ, ಮಾಜಿ ಸಿಎಂ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.