
ಹುಬ್ಬಳ್ಳಿ ಜೂ.14 ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಪಕ್ಷದ ಹೈಕಮಾಂಡ್ಗೆ ಎಟಿಎಂ ಇದ್ದಂತೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಅನ್ನುವ ದುರುದ್ದೇಶದಿಂದ ಗ್ಯಾರಂಟಿ ಎಂಬ ಹೆಸರಿನಲ್ಲಿ ಆಶ್ವಾಸನೆ ನೀಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರೈತರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್: ಹಲವು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ
ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ್ದು, ಈ ಕುರಿತು ಅವಲೋಕನ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಬರಲು ಜನರಿಗೆ ಮೋಸ ಮಾಡಿ ಟೋಪಿ ಹಾಕಿರುವುದೇ ಕಾರಣ. ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಅಧೋಗತಿಗೆ ತರಲು ಹೊರಟಿದ್ದಾರೆ. ಕಾಂಗ್ರೆಸ್ ದುರುದ್ದೇಶದ ಬಗ್ಗೆ ಜನರು ಈಗಾಗಲೇ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇನ್ನು 2 ತಿಂಗಳಲ್ಲಿ ಕಾಂಗ್ರೆಸ್ಸಿನವರ ಬಣ್ಣವನ್ನು ಮತದಾರರು ಬಯಲಿಗೆ ತರುತ್ತಾರೆ ಎಂದರು.
ಯೋಗ್ಯತೆಗೆ ತಕ್ಕಂತೆ ಸ್ಥಾನಮಾನ:
ನನ್ನ ಯೋಗ್ಯತೆಗೆ ತಕ್ಕಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯು ನನಗೆ ಸ್ಥಾನಮಾನ ನೀಡಿದೆ. ನಾನು ಅಪೇಕ್ಷೆ ಪಡಲಾರದೆ ಪಕ್ಷ ಸದಾ ಒಂದಿಲ್ಲೊಂದು ಜವಾಬ್ದಾರಿ ಕೊಟ್ಟಿದೆ. ಲಿಂಗಾಯತರಿಗೂ ಹಲವು ಸ್ಥಾನಮಾನಗಳನ್ನು ನೀಡುವ ಮೂಲಕ ಅವರನ್ನೂ ಪಕ್ಷ ಗೌರವದಿಂದ ಕಾಣುತ್ತಿದೆ. ಆದರೆ, ಕೆಲವರು ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಅನ್ನುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ 12 ಜನ ಬಿಜೆಪಿ ಸಂಸದರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಖೂಬಾ, ಚುನಾವಣಾ ಪ್ರಕ್ರಿಯೆ ಚುನಾವಣೆ ಘೋಷಣೆಯ ನಂತರ ನಡೆಯುತ್ತದೆ. ಅಲ್ಲಿಯ ವರೆಗೂ ಇಂತಹ ಸುಳ್ಳು ಸುದ್ದಿಗಳನ್ನು ಎಲ್ಲಿಯೂ ಬಿತ್ತರಿಸಬಾರದು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಕೂಡ ಮಾದ್ಯಮದ ಸುದ್ದಿಯನ್ನು ಉಲ್ಲೇಖ ಮಾಡಿ ಹೇಳಿದ್ದಾರೆ. ಯಾರು ಚುನಾವಣೆಗೆ ನಿಲ್ಲುತ್ತಾರೆ ಅನ್ನುವ ಚರ್ಚೆ ಈ ಕ್ಷಣದವರೆಗೂ ನಡೆದಿಲ್ಲ.
ಮೋದಿ ಸರ್ಕಾರದಿಂದ ರೈತರಿಗೆ ಬೆಂಬಲ ಬೆಲೆ: ಭಗವಂತ ಖೂಬಾ ಶ್ಲಾಘನೆ
ಬಿಜೆಪಿಯಲ್ಲಿ ಪ್ರತಿ ಚುನಾವಣೆಯಲ್ಲೂ ಬದಲಾವಣೆ ಪ್ರಕ್ರಿಯೆ ಸಹಜವಾಗಿಯೇ ಇರುತ್ತದೆ. ಅದು ಬಿಜೆಪಿಯ ರಣತಂತ್ರ, ಹಾಗಂತ ಬದಲಾವಣೆ ಖಂಡಿತ ಆಗಲಿದೆ ಎಂಬ ಅರ್ಥವಲ್ಲ. 12 ಜನರ ಬದಲಾವಣೆ ಆಗುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪಕ್ಷದ ವೇದಿಕೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೇವೆ ಅನ್ನೋದು ಕಾಂಗ್ರೆಸ್ನ ಸುಳ್ಳು ಆರೋಪವಾಗಿದೆ. ಈ ಕುರಿತು ದಾಖಲೆಗಳಿದ್ದಲ್ಲಿ ಕೊಡಿ. ಮೋದಿಯವರು ಪ್ರತಿಯೊಬ್ಬರಿಗೆ .15 ಲಕ್ಷ ಕೊಡುತ್ತಾರೆ ಎಂದಿರುವ ವಿಡಿಯೋ ದಾಖಲೆಗಳಿದ್ದರೆ ಕೊಡಿ. ನಾವು ಸಿದ್ದರಾಮಯ್ಯನವರು ನೀಡಿರುವ ಆಶ್ವಾಸನೆಗಳ ಕುರಿತು ವಿಡಿಯೋ ಕೊಟ್ಟಿದ್ದೇವೆ. ಇಡೀ ರಾಜ್ಯದ ಜನತೆಯೇ ಕೇಳಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.