5 ತಿಂಗಳಲ್ಲಿ ರಾಜ್ಯದ ರಾಜಕಾರಣ ಬದಲಾಗಲಿದೆ: ಮಾಜಿ ಸಿಎಂ ಬೊಮ್ಮಾಯಿ

By Govindaraj SFirst Published May 26, 2023, 1:25 PM IST
Highlights

ಮುಂದಿನ 5 ತಿಂಗಳಲ್ಲಿ ರಾಜ್ಯ ರಾಜ್ಯಕಾರಣದ ಚಿತ್ರಣ ಬದಲಾಗಲಿದೆ. ಸರ್ಕಾರ ಹೋಗುತ್ತಿರುವ ರೀತಿ ನೋಡಿದರೆ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. 

ಹಾವೇರಿ (ಮೇ.26): ಮುಂದಿನ 5 ತಿಂಗಳಲ್ಲಿ ರಾಜ್ಯ ರಾಜ್ಯಕಾರಣದ ಚಿತ್ರಣ ಬದಲಾಗಲಿದೆ. ಸರ್ಕಾರ ಹೋಗುತ್ತಿರುವ ರೀತಿ ನೋಡಿದರೆ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ಮೇಲೆ ಕೇಸ್‌ ಹಾಕಲು ಈಗಲೇ ಶುರು ಮಾಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಉಸಿರು ಇರುವವರೆಗೂ ಶಿಗ್ಗಾಂವಿ ಕೇತ್ರದ ಜನರೊಂದಿಗೆ ಇರುತ್ತೇನೆ. ನನ್ನ ಜೀವನದ ಕೊನೆ ಉಸಿರಿನವರೆಗೂ ಕ್ಷೇತ್ರದ ಸೇವೆ ಮಾಡುತ್ತೇನೆ. ಶಿಗ್ಗಾಂವಿ ಕ್ಷೇತ್ರದ ಜನರ ಸೇವೆಯಲ್ಲಿ ನನ್ನ ಜೀವನವನ್ನು ಸವೆಸುತ್ತೇನೆ ಎಂದರು.

ಗೆಲ್ಲುವ ವಿಶ್ವಾಸ: ವಿಧಾನಸಭಾ ಫಲಿತಾಂಶದ ನಂತರ ಸುಮ್ಮನೆ ಕುಳಿತಿಲ್ಲ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲುತ್ತೇವೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗಬೇಕಿದೆ ಎಂದು ಅವರು ಹೇಳಿದರು.

ನಮ್ಮ ಮೆಟ್ರೋಗೆ ಪ್ರಯಾಣಿಕರ ಸಂಖ್ಯೆ ಏರಿಕೆ: 6 ಕೋಟಿ ಹೆಚ್ಚು ಆದಾಯ

ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದರೆ ಸುಮ್ಮನಿರಲ್ಲ: ರಾಜ್ಯದ ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದರೆ ಯಾರ ಅಪ್ಪನನ್ನೂ ಕೇಳುವುದಿಲ್ಲ. ಜನರು ಮೆಚ್ಚುವ ರಾಜಕಾರಣ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು. ಶಿಗ್ಗಾಂವಿ ಪಟ್ಟಣದಲ್ಲಿ ಮತದಾರರಿಗೆ ಕೃತಜ್ಞತಾ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನನ್ನು ಅಷ್ಟುಸುಲಭವಾಗಿ ತಿಳಿದುಕೊಳ್ಳಬೇಡಿ. 

ಇವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದುಕೊಂಡರೆ ಅದು ನಿಮ್ಮ ಭ್ರಮೆ. ಯಾವುದೇ ಹಂತಕ್ಕೂ, ಯಾವುದೇ ಮಟ್ಟಕ್ಕೂ ಬರುವುದಕ್ಕೆ ನಾನು ತಯಾರಿದ್ದೇನೆ. ನಾನು ಯಾವುದು ಭೇದ-ಭಾವ ಮಾಡುವುದಿಲ್ಲ. ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದರೆ ಯಾರ ಅಪ್ಪನನ್ನೂ ಕೇಳುವುದಿಲ್ಲ. ರಾಜಕಾರಣ ಮಾಡಿ, ಒಪನ್‌ ಆಗಿ ಆಹ್ವಾನ ಕೊಡುತ್ತೇನೆ. ಜನರು ಮೆಚ್ಚುವ ರಾಜಕಾರಣ ಮಾಡಿ. ಅದನ್ನು ಬಿಟ್ಟು ಅಡ್ಡಾಗಾಲು ಹಾಕುವ ರಾಜಕಾರಣ ಮಾಡಬೇಡಿ. ಇದು ನಿಮಗೂ, ನಮಗೂ, ನಿಮ್ಮ ಸರ್ಕಾರಕ್ಕೂ ಒಳ್ಳೆಯದಲ್ಲ ಎಂದರು.

ಕಾಂಗ್ರೆಸ್‌ ಬಣ್ಣ ಬಯಲಾಗುತ್ತಿದೆ: ಅಕ್ಕಿ, ಕರೆಂಟು ನನಗೂ ಫ್ರೀ, ನಿಮಗೂ ಉಚಿತವಾಗಿ ಸಿಗುತ್ತದೆ ಎಂದಿದ್ದರು. ಈಗ ಕಂಡಿಷನ್‌ ಇದೆ ಎನ್ನುತ್ತಾರೆ. ಈಗ ಅವರ ಬಣ್ಣ ಏನು ಎಂದು ಗೊತ್ತಾಗುತ್ತಿದೆ. ಮೇ 10ರ ವರೆಗೂ ಗ್ಯಾರಂಟಿ, ಆಮೇಲೆ ಗಳಗಂಟಿ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಈಗ ಶುರುವಾಗಿದೆ. ಇನ್ನು ಸ್ವಲ್ಪ ದಿನ ಮಹಿಳೆಯರು ಕಾರ್ಡ್‌ ಹಿಡಿದುಕೊಂಡು ರಸ್ತೆಗೆ ಬರುತ್ತಾರೆ. ಆಮೇಲೆ ಗೊತ್ತಾಗುತ್ತದೆ. ಆಸ್ಪತ್ರೆ, ರಸ್ತೆ, ನೀರಿನ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಿದ್ದಾರೆ. ಯಾಕೆಂದರೆ ಕಾರ್ಡ್‌ಗಳಿಗೆ ದುಡ್ಡು ಕೊಡಲು ಹಣ ಹೊಂದಿಸಬೇಕಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾವು ನೀಡಿದ್ದ ಎಲ್ಲ ಗ್ಯಾರಂಟಿಗೆ ಆದೇಶ ಮಾಡುತ್ತೇವೆ ಎಂದಿದ್ದರು. ಇವರಾದರೂ ಜನರಿಗೆ ಏನಾದರೂ ಮಾಡಲಿ ಎಂದು ನಾನು ಖುಷಿ ಆಗಿದ್ದೆ. ಆದರೆ ಸಂಪುಟ ಸಭೆಯ ಬಳಿಕ ಪತ್ರಕರ್ತರು ಪ್ರಶ್ನೆ ಕೇಳುವಾಗ ತಡಬಡಿಸಿ, ಪ್ರಶ್ನೆ ಕೇಳಿದರೆ ಹಿಂದಿನ ಇತಿಹಾಸ ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದರು.

ಹಳೆಯದ್ದು ಎಲ್ಲ ಬೇಡ, ಗ್ಯಾರಂಟಿಗಳನ್ನು ಯಾವಾಗ ಮಾಡುತ್ತೀರಿ ಅಂತ ಕೇಳಿದರೆ, ಮುಂದಿನ ಸಂಪುಟ ಸಭೆಯಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇವರು ಮುಖ್ಯಮಂತ್ರಿ ಆಗುವುದಕ್ಕೆ, ಮಂತ್ರಿ ಆಗುವುದಕ್ಕೆ ಬಡಿದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ನಾವು ಮಂಜೂರು ಮಾಡಿರುವ ಕೆಲಸಗಳು ಬಡವರಿಗಾಗಿ ಇರುವಂಥದ್ದು. ಹೀಗಾಗಿ ಅವುಗಳನ್ನು ಮಾಡಲೇಬೇಕು. ಕಾಲೇಜು, ರಸ್ತೆ, ಕೈಗಾರಿಕೆಗಳ ಕಾಮಗಾರಿಗಳನ್ನು ನಿಲ್ಲಿಸಲು ಸಾಧ್ಯವೇ? ಕೇವಲ ಆಡಳಿತ ಪಕ್ಷದ ಶಾಸಕರು ತೆರಿಗೆ ಕಟ್ಟಲ್ಲ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಟ್ಯಾಕ್ಸ್‌ ಕಟ್ಟುತ್ತಾನೆ ಎಂದರು.

ಲೋಕಸಭೆ ರಿಸಲ್ಟ್‌ ಮೇಲೆ ಕಾಂಗ್ರೆಸ್‌ ಸರ್ಕಾರದ ಭವಿಷ್ಯ: ಎಚ್‌ಡಿಕೆ

ದೇವರು ವಿಶ್ರಾಂತಿ ಕೊಟ್ಟಿದ್ದಾನೆ: ಕ್ಷೇತ್ರದ ಜನರ ಜತೆ ಕಳೆಯಲು ಅವಕಾಶ ಸಿಕ್ಕಿದೆ. ನಿಮ್ಮ ಜತೆ ಕಾಲ ಕಳೆಯುವುದಕ್ಕೆ ಆಗಿರಲಿಲ್ಲ. ಅದಕ್ಕೆ ದೇವರು ಸ್ವಲ್ಪ ವಿಶ್ರಾಂತಿ ಕೊಟ್ಟಿದ್ದಾನೆ. ಅಂತಹ ಶಕ್ತಿ ನಿಮ್ಮಲ್ಲಿ ಇದೆ. ಅಲ್ಲಿ ಬೇಡ, ಇಲ್ಲಿಗೆ ಬನ್ನಿ ಎಂದು ಕರೆಯಿಸಿಕೊಂಡಿದ್ದೀರಿ. ನಿಮಗೆ ಬೇಸರ ಆಗುವ ಹಾಗೆಯೇ ನಿಮ್ಮ ಊರು, ಕೇರಿಗಳಲ್ಲಿ ಓಡಾಡುತ್ತೇನೆ. ನಿಮ್ಮನ್ನು ನೀವು ಈ ಚುನಾವಣೆಯಲ್ಲಿ ಗೆಲ್ಲಿಸಿಕೊಂಡಿದ್ದೀರಿ ಎಂದು ಭಾವುಕ ಮಾತನ್ನಾಡಿದರು.

click me!