Latest Videos

ರಾಜ್ಯದಲ್ಲಿ ಮತ್ತೆ ತಾಲಿಬಾನ್‌ ಸರ್ಕಾರ ಬರುತ್ತಿದೆ: ಬಸನಗೌಡ ಯತ್ನಾಳ್‌

By Kannadaprabha NewsFirst Published May 20, 2023, 3:20 AM IST
Highlights

ರಾಜ್ಯದಲ್ಲಿ ಮತ್ತೆ ತಾಲಿಬಾನ್‌ ಸರ್ಕಾರ ಬರುತ್ತಿದೆ. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಕೆಲವು ಪೊಲೀಸ್‌ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದಾರೆ. 

ಪುತ್ತೂರು (ಮೇ.20): ರಾಜ್ಯದಲ್ಲಿ ಮತ್ತೆ ತಾಲಿಬಾನ್‌ ಸರ್ಕಾರ ಬರುತ್ತಿದೆ. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಕೆಲವು ಪೊಲೀಸ್‌ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದಾರೆ. ಬಿಜೆಪಿ ನಾಯಕರ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಅವಿನಾಶ್‌ ಮತ್ತು ಗುರುಪ್ರಸಾದ್‌ ಅವರನ್ನು ಶುಕ್ರವಾರ ಭೇಟಿ ಮಾಡಿದ ಯತ್ನಾಳ್‌, ಅವರ ಆರೋಗ್ಯ ವಿಚಾರಿಸಿದರು. ಜೊತೆಗೆ, ತಮ್ಮ ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ರು. ಧನಸಹಾಯ ಮಾಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ ಕೆಳಮಟ್ಟದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆದರೆ, ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿವೈಎಸ್ಪಿಯನ್ನು ತಕ್ಷಣ ವಜಾಗೊಳಿಸಬೇಕು. ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಯುವಕರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು. ಪುತ್ತೂರಿನಲ್ಲಿ ನಡೆದಿರುವ ಘಟನೆಯ ಒಳಗಿನ ಸತ್ಯ ನಮಗೆ ಗೊತ್ತಾಗಿದೆ. ಅದನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುತ್ತೇನೆ. ನಮ್ಮಿಂದ ತಪ್ಪಾದಾಗ ಒಪ್ಪಿಕೊಳ್ಳುವುದು ಉತ್ತಮ ಲಕ್ಷಣ. 

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಪ್ರಜ್ವಲ್‌ ನಿಲ್ಲಲ್ಲ: ಭವಾನಿ ರೇವಣ್ಣ

ಚುನಾವಣೆಯ ಸಂದರ್ಭದಲ್ಲಿ ಪ್ರಾರಂಭವಾದ ಅಸಮಾಧಾನದಿಂದ ಹಿಂದೂಗಳು ಪಕ್ಷೇತರ ಅಭ್ಯರ್ಥಿ ಜತೆಗಿದ್ದಾರೆ. ಹಾಗೆಂದು ಅವರು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ. ಈ ಗೊಂದಲವನ್ನು ಕೇಂದ್ರದ ನಾಯಕರು ಸರಿಪಡಿಸಲಿದ್ದಾರೆ. ಈ ವಿಚಾರವನ್ನು ಕೇಂದ್ರ ನಾಯಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ದೊರೆತಲ್ಲಿ ಬಿಜೆಪಿಯಿಂದ ಅಸಮಾಧಾನಗೊಂಡು ಹೊರಗುಳಿದ ಎಲ್ಲರನ್ನೂ ಪ್ರೀತಿಯಿಂದ ಮತ್ತೆ ಪಕ್ಷಕ್ಕೆ ಕರೆ ತರುವ ಕೆಲಸ ಮಾಡಲಿದ್ದೇನೆ. ಈ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸಿದರೆ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಗದ್ಗದಿತರಾದ ಪುತ್ತಿಲ: ನಮ್ಮವರೇ ನಮಗೆ ಈ ರೀತಿಯಾಗಿ ಮಾಡಿದಲ್ಲಿ ನಾವು ನ್ಯಾಯ ಕೇಳುವುದು ಯಾರಲ್ಲಿ?. ಇದನ್ನು ನೋಡಿಕೊಂಡು ನಾವು ಬದುಕಬೇಕಾ?, ನಮ್ಮ ಪಾಲಿಗೆ ಸಂಘ ಎಲ್ಲುಂಟು, ಪಕ್ಷ ಎಲ್ಲುಂಟು, ಸಂಘಟನೆ ಎಲ್ಲುಂಟು? ಎನ್ನುತ್ತಾ ಪುತ್ತೂರು ಪಕ್ಷೇತರ ಅಭ್ಯಥಿಯಾಗಿದ್ದ ಅರುಣ್‌ ಕುಮಾರ್‌ ಪುತ್ತಿಲ ಗದ್ಗದಿತರಾಗಿ ಯತ್ನಾಳ್‌ ಅವರಲ್ಲಿ ತಮ್ಮ ಅಳಲು ತೋಡಿಕೊಂಡರು. ನಾವು ಬಿಜೆಪಿ ವಿರೋಧಿಗಳಲ್ಲ. ಆದರೆ, ಅವರಿಬ್ಬರಿಗೆ ಮಾತ್ರ ನಮ್ಮ ವಿರೋಧವಿದೆ. ನಳಿನ್‌ ಕುಮಾರ್‌ ಅವರು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ತನಕ ನಾವು ಬಿಜೆಪಿಯಲ್ಲಿ ಕೆಲಸ ಮಾಡುವುದಿಲ್ಲ ಎಂದರು.

ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!

ಯತ್ನಾಳ್‌ ಸಮ್ಮುಖ ನೂಕಾಟ-ತಳ್ಳಾಟ: ಆಸ್ಪತ್ರೆಗೆ ಆಗಮಿಸಿದ ಯತ್ನಾಳ್‌ ಅವರನ್ನು ಶಾಲು, ಹಾರ, ಪೇಟ ಹಾಕಿ ಸ್ವಾಗತಿಸಿದ ಪುತ್ತಿಲ, ಬಳಿಕ ಸಂತ್ರಸ್ತರ ಭೇಟಿ ಮಾಡಿಸಿದರು. ಯತ್ನಾಳ್‌ ಜೊತೆಗೆ ಆಗಮಿಸಿದ ಪುತ್ತೂರಿನ ಬಿಜೆಪಿ ಮತ್ತು ಪರಿವಾರ ಸಂಘಟನೆಯ ಕೆಲ ಮುಖಂಡರಿಗೆ ಸಂತ್ರಸ್ತರ ಭೇಟಿಗೆ ಅವಕಾಶ ನೀಡದ ಪುತ್ತಿಲ ಬೆಂಬಲಿಗರು, ಅವರನ್ನು ಹೊರದಬ್ಬಿ, ಬಾಗಿಲು ಹಾಕಿದರು. ಯತ್ನಾಳ್‌ ಅವರ ಸಮ್ಮುಖದಲ್ಲಿಯೇ ಎರಡೂ ತಂಡದ ನಡುವೆ ನೂಕಾಟ- ತಳ್ಳಾಟ ನಡೆಯಿತು. ಯತ್ನಾಳ್‌ ಜೊತೆಗೆ ಆಗಮಿಸಿದ್ದ ಎಲ್ಲರನ್ನೂ ಕೊಠಡಿಯಿಂದ ಬಲವಂತವಾಗಿ ಹೊರದಬ್ಬಿದ ಪುತ್ತಿಲ ಬೆಂಬಲಿಗರು, ಬಾಗಿಲು ಹಾಕಿ ಒಳಗಿಂದ ಲಾಕ್‌ ಮಾಡಿದರು.

click me!