ಸಿದ್ಧಾರ್ಥ ಸಿಂಗ್‌ ಗೆಲುವು ಖಚಿತ: ಸಚಿವ ಆನಂದ್‌ ಸಿಂಗ್‌

By Kannadaprabha NewsFirst Published May 11, 2023, 3:13 PM IST
Highlights

ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್‌ ಗೆಲುವು ಖಚಿತವಾಗಿದ್ದು, ಮೇ 13ರಂದು ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು. 

ಹೊಸಪೇಟೆ (ಮೇ.11): ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್‌ ಗೆಲುವು ಖಚಿತವಾಗಿದ್ದು, ಮೇ 13ರಂದು ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು. ನಗರದ ಪುಣ್ಯಮೂರ್ತಿ ವೃತ್ತದ ಬಳಿಯ ಬಾಲಕಿಯರ ಸರ್ಕಾರಿಯ ಪಪೂ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ವಿಜಯನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯುವಕನಾಗಿರುವ ಸಿದ್ಧಾರ್ಥ ಸಿಂಗ್‌ಗೆ ಬಿಜೆಪಿ ಅವಕಾಶ ನೀಡಿದೆ. ಕ್ಷೇತ್ರದಲ್ಲಿ ತಿರುಗಾಡಿ, ಶ್ರಮವಹಿಸಿ ಸಿದ್ಧಾರ್ಥ ಸಿಂಗ್‌ ಜನರಿಗೆ ಹತ್ತಿರವಾಗಿದ್ದು, ಅವರ ಗೆಲುವು ಖಚಿತವಾಗಿದೆ. ಈ ಸಮಯದಲ್ಲಿ ಗೆಲುವಿನ ಅಂತರದ ಕುರಿತು ಮಾತನಾಡಿದರೆ, ಅತಿಯಾದ ವಿಶ್ವಾಸ ಆಗಲಿದೆ ಎಂದರು.

ವಿಜಯನಗರ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ: ಈ ಬಾರಿ ವಿಜಯನಗರ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಯುವಕನಿಗೆ ಕ್ಷೇತ್ರದ ಜನರು ಮಣೆ ಹಾಕಲಿದ್ದಾರೆಂಬ ವಿಶ್ವಾಸ ಇದೆ ಎಂದು ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್‌ ಹೇಳಿದರು. ನಗರದ ಪುಣ್ಯಮೂರ್ತಿ ವೃತ್ತದ ಬಳಿಯ ಬಾಲಕಿಯರ ಸರ್ಕಾರಿಯ ಪಪೂ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮಾಜದ ಹಿರಿಯರ, ಯುವಕರ ಮಾರ್ಗದರ್ಶನ, ಆಶೀರ್ವಾದದಿಂದ ಗೆಲುವು ಸಾಧಿಸುವೆ. ನನ್ನ ತಂದೆ ಆನಂದ ಸಿಂಗ್‌ ಮಾಡಿದ ಕೆಲಸ, ಕಾರ್ಯಗಳನ್ನು ಕ್ಷೇತ್ರದಲ್ಲಿ ಮುಂದುವರಿಸುವೆ ಎಂದರು.

ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್ ಮೂಡ್‍ಗೆ ಜಾರಿದ ಸತೀಶ್‌ ಜಾರಕಿಹೊಳಿ

ಈ ಹಿಂದೆ ಮೂರು ಬಾರಿ ನಾನು ಕ್ಷೇತ್ರದ ಮತದಾರರನಾಗಿದ್ದೆ. ಈಗ ನಾನೇ ಅಭ್ಯರ್ಥಿಯಾಗಿರುವೆ. ವಿಜಯನಗರ ಕ್ಷೇತ್ರದಲ್ಲಿ ಆನಂದ ಸಿಂಗ್‌ ಅವರು ಯಾರನ್ನೂ ಭೇದಭಾವ ಮಾಡಿಲ್ಲ. ನಾನು ಕೂಡ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವೆ ಎಂದರು.

ವಿಜಯನಗರ ಜಿಲ್ಲೆಯಲ್ಲೇ ಶೇ. ಮತದಾನ: ನೂತನ ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಶಾಂತಿಯುತ ಚುನಾವಣೆ ನಡೆದಿದ್ದು, ಶೇ...ರಷ್ಟುಮತದಾನ ದಾಖಲಾಗಿದೆ. ಬಿರುಬಿಸಿಲನ್ನು ಲೆಕ್ಕಿಸದೇ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ವಿಜಯನಗರ ಜಿಲ್ಲೆಯ 1219 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿತು. ಆದರೆ, 12 ಮತಗಟ್ಟೆಗಳಲ್ಲಿ ವಿವಿ ಪ್ಯಾಟ್‌ಗಳನ್ನು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬದಲಿಸಲಾಯಿತು. 

ವಿಜಯನಗರ ಕ್ಷೇತ್ರದಲ್ಲೇ ಮೂರು ಕಡೆ ವಿವಿ ಪ್ಯಾಟ್‌ ಕೈಕೊಟ್ಟಹಿನ್ನೆಲೆ ತಕ್ಷಣವೇ ಬದಲಿಸಲಾಯಿತು. ಕೆಲ ಕಡೆ ಸಣ್ಣಪುಟ್ಟಘಟನೆಗಳನ್ನು ಹೊರತುಪಡಿಸಿದರೆ, ಎಲ್ಲೆಡೆ ಶಾಂತಿಯುತ ಮತದಾನ ನಡೆಯಿತು. ಅಂಗವಿಕಲರು, ವೃದ್ಧರು, ಮಹಿಳೆಯರು ಆಗಮಿಸಿ ತಮ್ಮ ಹಕ್ಕುಗಳನ್ನು ಚಲಾಯಿಸಿದರು. ಜಿಲ್ಲೆಯ ಮತಗಟ್ಟೆಗಳಲ್ಲಿ ಯುವ ಮತದಾರರು ಕೂಡ ಉತ್ಸಾಹದೊಂದಿಗೆ ಆಗಮಿಸಿ ಮೊದಲ ಬಾರಿಗೆ ಮತ ಚಲಾಯಿಸಿದರು.

ಮೀಸಲಾತಿ ಹಂಚಿಕೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

ಶೇಕಡಾವಾರು ಮತದಾನ: ಬೆಳಗ್ಗೆ 9 ಗಂಟೆ ಹೊತ್ತಿಗೆ ಜಿಲ್ಲೆಯಲ್ಲಿ ಶೇ. 6.82ರಷ್ಟು ಮತದಾನ ದಾಖಲಾಗಿತ್ತು. ಹೂವಿನಹಡಗಲಿ ಶೇ. 5.57, ಹಗರಿಬೊಮ್ಮನಹಳ್ಳಿ ಶೇ. 6.45, ವಿಜಯನಗರ ಶೇ. 8.20, ಕೂಡ್ಲಿಗಿ ಶೇ. 7.04 ಮತ್ತು ಹರಪನಹಳ್ಳಿಯಲ್ಲಿ 6.52ರಷ್ಟು ಮತದಾನ ನಡೆದಿತ್ತು. ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ಜಿಲ್ಲೆಯಲ್ಲಿ ಶೇ. 21.21ರಷ್ಟುಮತದಾನ ನಡೆದಿತ್ತು. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಶೇ. 39.60ರಷ್ಟುಮತದಾನ ನಡೆದಿದ್ದು, ಹೂವಿನಹಡಗಲಿ ಶೇ. 38.44, ಹಗರಿಬೊಮ್ಮನಹಳ್ಳಿ ಶೇ. 39.39, ವಿಜಯನಗರ ಶೇ. 40.41, ಕೂಡ್ಲಿಗಿ ಶೇ. 38.12, ಹರಪನಹಳ್ಳಿ ಶೇ. 41.51ರಷ್ಟುಮತದಾನ ದಾಖಲಾಗಿತ್ತು. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಶೇ. 56.18ರಷ್ಟುಮತದಾನ ನಡೆದಿತ್ತು.

click me!