ಭಯೋತ್ಪಾದನೆ ಹೆಚ್ಚಲು ಸಿದ್ದರಾಮಯ್ಯ ಸರ್ಕಾರ ಕಾರಣ: ಪಿ. ರಾಜೀವ್‌

By Kannadaprabha NewsFirst Published Jan 7, 2023, 3:45 AM IST
Highlights

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಕೊಟ್ಟ ಸಂವಿಧಾನದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್‌ನವರು ಸಂವಿಧಾನಕ್ಕೆ ಅತಿ ಹೆಚ್ಚು ಅಪಮಾನ ಮಾಡಿದ್ದಾರೆ. ಈ ದೇಶದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದವರು ಕಾಂಗ್ರೆಸ್‌ನವರು ಎಂದ ಪಿ. ರಾಜೀವ್‌ 

ಕಾರಟಗಿ(ಜ.07):  ರಾಜ್ಯದಲ್ಲಿ ಭಯೋತ್ಪಾದನೆ ಗರಿಗೆದರಲು ಹಿಂದಿನ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್‌ ಸರ್ಕಾರವೇ ಮುಖ್ಯ ಕಾರಣ ಎಂದು ಕುಡಚಿ ಶಾಸಕ ಹಾಗೂ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌ ಆರೋಪಿಸಿದರು. ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಪೋಟ ಘಟನೆ, ಶಿವಮೊಗ್ಗ ಗಲಭೆ ಸೇರಿದಂತೆ ಹಲವು ಘಟನೆಗಳ ಹಿಂದೆ ಪಿಎಫ್‌ಐನಂತಹ ಸಂಘಟನೆಗಳ ಕೈವಾಡವಿದೆ. ಇಂಥ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕುವುದನ್ನು ಬಿಟ್ಟ ಸಿದ್ದರಾಮಯ್ಯ ಅವರು ಪಿಎಫ್‌ಐ ಸಂಘಟನೆಗಳ ವಿರುದ್ಧ ಇದ್ದ 130 ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಆ ಕಾರಣದಿಂದಲೇ ಈ ಸಂಘಟನೆಗಳ ಕೈವಾಡದಿಂದ ರಾಜ್ಯದಲ್ಲಿಯೂ ದುಷ್ಕೃತ್ಯಗಳು ನಡೆಯತೊಡಗಿವೆ. ಪಿಎಫ್‌ಐ ಸಂಘಟನೆ ವಿರುದ್ಧ ಇದ್ದ 130 ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆಯದೆ ಇದ್ದರೆ ಇಂತಹ ಚಟುವಟಿಕೆಗೆ ಆಸ್ಪದವಿರುತ್ತಿರಲಿಲ್ಲ ಎಂದು ಹೇಳಿದರು.

ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಪಿ. ರಾಜೀವ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿದರು. ರಾಜ್ಯದ ಯುವ ಶಕ್ತಿ ಜಾಗೃತಿಗೊಳ್ಳಬೇಕಾಗಿದೆ. ಈಗ ದೇಶ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದರು.

ರಾಜಕೀಯ ಪಕ್ಷಗಳು ದಲಿತರನ್ನು ಸಿಎಂ ಮಾಡಲಿ : ವಾಲ್ಮೀಕಿ ಶ್ರೀ

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಕೊಟ್ಟ ಸಂವಿಧಾನದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್‌ನವರು ಸಂವಿಧಾನಕ್ಕೆ ಅತಿ ಹೆಚ್ಚು ಅಪಮಾನ ಮಾಡಿದ್ದಾರೆ. ಈ ದೇಶದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದವರು ಕಾಂಗ್ರೆಸ್‌ನವರು ಎಂದರು. ಪ್ರಧಾನಿ ನರೇಂದ್ರ ಮೋದಿ ಈ ದೇಶದ ಚುಕ್ಕಾಣಿ ಹಿಡಿದ ಮೇಲೆ ದೇಶದ ದಿಕ್ಕು ಬದಲಾಗಿದೆ ಎಂದರು.

ಕೊಪ್ಪಳ ಜಿಲ್ಲೆ ಕುರಿತು ಮಾತನಾಡಿದ ಅವರು, ಕೊಪ್ಪಳ ಎಂದರೆ ನಿರೀಕ್ಷೆ, ಭರವಸೆ ಮತ್ತು ಸಮ್ಮಿಲನ. ರಾಮನಿಗಾಗಿ ಶಬರಿ ನಿರೀಕ್ಷೆಯಿಂದ ಕಾದು ಕುಳಿತ ಸ್ಥಳ ಇದು. ಶ್ರೀರಾಮ ಮತ್ತು ಆಂಜನೇಯ ಸಮ್ಮಿಲನವಾಗಿರುವ ವಿಶೇಷ ಸ್ಥಳ ಇಲ್ಲಿದೆ. ಇನ್ನು ಸೀತೆ ಅಪಹರಣದ ಸಂದರ್ಭದಲ್ಲಿ ಸೀತೆ ಸಿಗುವ ಭರವಸೆ ರಾಮನಿಗೆ ಸಿಕ್ಕಿದ್ದು ಇದೆ ನೆಲದಲ್ಲಿ ಎಂದರು.

ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌ ಮಾತನಾಡಿ, ಪಕ್ಷದಲ್ಲಿ ಯುವಕರ ಪಾತ್ರ ಬಹು ಮುಖ್ಯವಾಗಿದೆ. ಅವರು ತಮ್ಮ ಕೆಲಸವನ್ನು ಬಹಳ ಶ್ರದ್ಧೆಯಿಂದ ಹಾಗೂ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು. ಕನಕಗಿರಿ ಕ್ಷೇತ್ರದಲ್ಲಿ ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಸರಿಪಡಿಸಿಕೊಂಡು 2023ರ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.

Assembly election: ಜನಾರ್ದನರೆಡ್ಡಿ ಹೊಸ ಪಕ್ಷ: ಬಿಜೆಪಿ ಆಕಾಂಕ್ಷಿಗಳು ನಿರಾಳ!

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬದಲಾವಣೆ ತರುವ ಶಕ್ತಿ ಯುವಕರಿಗೆ ಇದೆ. ಹಾಗಾಗಿ ಯುವಕರು ದೇಶದ ಬಗ್ಗೆ ಜಾಗೃತಿ ಹೊಂದಬೇಕು ಎಂದರು.

ಶಾಸಕ ಬಸವರಾಜ ದಢೇಸೂಗೂರು, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಅಮರೇಶ್‌ ರೈತನಗರ ಇತರರು ಮಾತನಾಡಿದರು. ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ್‌ಕುಮಾರ್‌, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗಡೆ, ಬಳ್ಳಾರಿ ವಿಭಾಗದ ಉಸ್ತುವಾರಿ ಸಿದ್ದೇಶ ಯಾದವ್‌, ಯುವ ಮುಖಂಡ ನವೀನ್‌ ಗುಳಗಣ್ಣನವರ್‌, ನರಸಿಂಗ್‌ರಾವ್‌ ಕುಲಕರ್ಣಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಯಮನೂರ ಚೌಡಿ, ಕಾರಟಗಿ ಶಕ್ತಿ ಕೇಂದ್ರದ ಅಧ್ಯಕ್ಷ ಶರಣಪ್ಪ ಗದ್ದಿ ಹಾಗೂ ಕಾರಟಗಿ ಮಂಡಲ ಪದಾಧಿಕಾರಿಗಳು ಇದ್ದರು.

click me!