ಕಾಂಗ್ರೆಸ್‌ ಸೋಲಲೆಂದೇ ಸಿದ್ದು ಲಿಂಗಾಯತ ವಿರೋಧಿ ಹೇಳಿಕೆ: ಸಿ.ಟಿ.ರವಿ

By Kannadaprabha NewsFirst Published Apr 25, 2023, 10:58 AM IST
Highlights

ಸಿದ್ದರಾಮಯ್ಯ ಬಾಯ್ತಪ್ಪಿ ಹೇಳಿಕೆ ನೀಡಲು ಚಿಕ್ಕಮಗುವಲ್ಲ. ಯಾವಾಗ, ಯಾವ ಹಕ್ಕಿಗೆ ಕಲ್ಲು ಹೊಡೆಯಬೇಕು ಎಂಬುದನ್ನು ಬಲ್ಲವರು. 40 ವರ್ಷಕ್ಕೂ ಹೆಚ್ಚಿನ ಕಾಲ ರಾಜಕೀಯದಲ್ಲಿ ಒಡನಾಡಿದ್ದಾರೆ. ಲಿಂಗಾಯತ ವಿರೋಧಿ ಹೇಳಿಕೆ ಹಿಂದೆ ವರುಣ ಕ್ಷೇತ್ರದಲ್ಲಿ ಲಿಂಗಾಯತರು ಒಗ್ಗಟ್ಟಾಗಿದ್ದಾರೆ ಎಂಬ ಆಕ್ರೋಶ ಇರಬಹುದು, ಇಲ್ಲವೇ ಎರಡು ಕ್ಷೇತ್ರಕ್ಕೆ ಟಿಕೆಟ್‌ ಕೊಡಲಿಲ್ಲ ಎಂಬ ಸಿಟ್ಟೂ ಇರಬಹುದು ಎಂದ ಸಿ.ಟಿ.ರವಿ. 

ಮೈಸೂರು(ಏ.25):  ಸಿದ್ದರಾಮಯ್ಯ ಅವರಿಗೆ ಒಂದು ಬುದ್ಧಿ ಇದೆ. ತನಗಲ್ಲದ್ದು ಬೇರೆಯವರಿಗೂ ದಕ್ಕಬಾರದು ಎಂಬ ನೀತಿ. ಈ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಲಿಂಗಾಯಿತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಾಯ್ತಪ್ಪಿ ಹೇಳಿಕೆ ನೀಡಲು ಚಿಕ್ಕಮಗುವಲ್ಲ. ಯಾವಾಗ, ಯಾವ ಹಕ್ಕಿಗೆ ಕಲ್ಲು ಹೊಡೆಯಬೇಕು ಎಂಬುದನ್ನು ಬಲ್ಲವರು. 40 ವರ್ಷಕ್ಕೂ ಹೆಚ್ಚಿನ ಕಾಲ ರಾಜಕೀಯದಲ್ಲಿ ಒಡನಾಡಿದ್ದಾರೆ. ಲಿಂಗಾಯತ ವಿರೋಧಿ ಹೇಳಿಕೆ ಹಿಂದೆ ವರುಣ ಕ್ಷೇತ್ರದಲ್ಲಿ ಲಿಂಗಾಯತರು ಒಗ್ಗಟ್ಟಾಗಿದ್ದಾರೆ ಎಂಬ ಆಕ್ರೋಶ ಇರಬಹುದು, ಇಲ್ಲವೇ ಎರಡು ಕ್ಷೇತ್ರಕ್ಕೆ ಟಿಕೆಟ್‌ ಕೊಡಲಿಲ್ಲ ಎಂಬ ಸಿಟ್ಟೂ ಇರಬಹುದು ಎಂದರು.

ನನ್ನ ವೋಟು ನನ್ನ ಮಾತು :ಚಾಮುಂಡೇಶ್ವರಿ ಹೊಟಗಳ್ಳಿ ಕ್ಷೇತ್ರದ ಮಂದಿ ಏನ್ ಹೇಳ್ದ್ರು ?

ಸಿದ್ದರಾಮಯ್ಯ ಅವರ ಆ ಹೇಳಿಕೆ ಬಸವತತ್ವಕ್ಕೆ ಮಾಡಿದ ಅಪಚಾರ. ಸಿದ್ದರಾಮಯ್ಯ ಏನೇ ಸ್ಪಷ್ಟನೆ ನೀಡಿದರೂ ಅವರು ನೀಡಿದ ಹೇಳಿಕೆಯ ಒಂದೊಂದು ಅಕ್ಷರವೂ ಪ್ರಸಾರವಾಗಿದೆ. ಬೇಕಿದ್ದರೆ ಮತ್ತೆ ಪ್ರಸಾರ ಮಾಡಿ ನೋಡಿ ಸತ್ಯಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಚಕ್ರವ್ಯೂಹದಲ್ಲಿ ಸಿಲುಕಿದಂತಾಗಿದೆ. ಅವರನ್ನು ಕಾಪಾಡಲು ಕೃಷ್ಣ ಕೂಡ ಜತೆಗಿಲ್ಲ, ನಮ್ಮ ಜೊತೆಗಿದ್ದಾರೆ. ಇನ್ನೂ ಡಿ.ಕೆ. ಶಿವಕುಮಾರ್‌ ನೆರವೂ ಇಲ್ಲ. ಅವರು ಇರುವ ಎಲ್ಲಾ ಅಸ್ತ್ರವನ್ನು ಇವರ ಮೇಲೆಯೇ ಪ್ರಯೋಗಿಸುತ್ತಾರೆ. ಇನ್ನು ಖರ್ಗೆ ಬೆಂಬಲ ಇಲ್ಲ, ಪರಮೇಶ್ವರ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಕುಟುಕಿದರು.

ವ್ಯಭಿಚಾರದ ರಾಜಕೀಯವೋ?: 

ಜೆಡಿಎಸ್‌ ಎಂಎಲ್ಸಿ ಬೋಜೇಗೌಡರು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದಾರೆ. ಇದು ಚುನಾವಣಾ ಪೂರ್ವ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ ಹೇಳಬೇಕು. ಅವರು ಬಹಿರಂಗವಾಗಿಯೇ ಮತಯಾಚಿಸುತ್ತಿದ್ದಾರೆ. ಇದು ಹೊಂದಾಣಿಕೆಯಾದರೆ ವರಿಷ್ಠರು ಕ್ರಮ ಕೈಗೊಳ್ಳುವುದಿಲ್ಲ. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಬಹಳ ಮಂದಿ ನನ್ನನ್ನು ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಆದರೆ ಜನ ನನ್ನ ಪರವಾಗಿದ್ದಾರೆ ಎಂದರು.

ಸಿ.ಟಿ.ರವಿ ರಾಜ್ಯದ ಮುಂದಿನ ಸಿಎಂ ಎಂದು ರಾಜ್ಯದ ಉದ್ದಕ್ಕೂ ಕೂಗಿದಾಗ ನಾನೂ ಸಿಎಂ ಆಗಬೇಕು ಎಂದು ಕೇಳುತ್ತೇನೆ. ಅದುವರೆಗೆ ಕೇಳುವುದಿಲ್ಲ ಎಂದರು.

click me!