ಪ್ರಧಾನಿ ಮೋದಿಯನ್ನು ಸರ್ವಾಧಿಕಾರಿಗೆ ಹೋಲಿಸಿದ ಸಿದ್ದರಾಮಯ್ಯ

By BK AshwinFirst Published Jan 22, 2023, 1:42 PM IST
Highlights

ಕರಾವಳಿ ಹಿಂದುತ್ವದ ಲ್ಯಾಬೊರೇಟರಿ. ಸುಳ್ಳು ಹೇಳುವುದೇ ಬಿಜೆಪಿಯವರ ಕಸುಬು, ಸಾವರ್ಕರ್ ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. 

ಉಡುಪಿ (ಜನವರಿ 22, 2023): ಉಡುಪಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯುತ್ತಿದ್ದು, ನಗರದ ಮಿಷನ್ ಕಂಪೌಂಡ್‌ನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಸಿದ್ದರಾಮಯ್ಯ ಸರ್ವಾಧಿಕಾರಿಗೆ ಹೋಲಿಸಿದ್ದಾರೆ. ಹಿಟ್ಲರ್ ಸ್ವಲ್ಪ ದಿನ ಮೆರೆದ ಆಮೇಲೆ ಏನಾಯ್ತು..? ಮುಸಲೋನಿಯ ಕಥೆ ಏನಾಯ್ತು? ಫ್ರ್ಯಾಂಕೋ ಏನಾದ, ಅದೇ ರೀತಿ ಪ್ರಧಾನಿ ಮೋದಿ ಸಹ ಸ್ವಲ್ಪ ದಿನ ಮೆರೆಯುತ್ತಾರೆ, ಆಮೇಲೆ ಅಧಿಕಾರದಿಂದ ಇಳಿಲೇಬೇಕು. ಜನ ಬುದ್ಧಿ ಕಲಿಸುತ್ತಾರೆ ಎಂದು ಟೀಕೆ ಮಾಡಿದ್ದಾರೆ. ಅಲ್ಲದೆ, ಮೋದಿ ದೇಶದ ಪ್ರಧಾನಿಯಾಗಿ ಅವರು ರಾಜ್ಯಕ್ಕೆ ಬರಬಹುದು. ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅಸಾಧ್ಯ. ಕರ್ನಾಟಕಕ್ಕೆ 100 ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ರಾಜ್ಯದ ಜನಕ್ಕೆ ಬಿಜೆಪಿ ಮೇಲೆ ಭ್ರಮನಿರಸನವಾಗಿದೆ ಎಂದು ಟೀಕೆ ಮಾಡಿದ್ದಾರೆ. 

ಇನ್ನು, ಕರಾವಳಿಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕರಾವಳಿ ಹಿಂದುತ್ವದ ಲ್ಯಾಬೊರೇಟರಿ. ಸುಳ್ಳು ಹೇಳುವುದೇ ಬಿಜೆಪಿಯವರ ಕಸುಬು, ಸಾವರ್ಕರ್ ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು. ಹಿಂದುತ್ವ ಶಬ್ದ ಹುಟ್ಟು ಹಾಕಿದವರೇ ಸಾವರ್ಕರ್. ಹಿಂದೂ ಬೇರೆ ಹಿಂದುತ್ವ ಬೇರೆ.. ಭಯೋತ್ಪಾದನೆ ಯಾರು ಮಾಡಿದರೂ ತಪ್ಪು, ಭಯೋತ್ಪಾದನೆಯನ್ನು ನಾವು ಯಾವತ್ತೂ ಖಂಡಿಸುತ್ತೇವೆ. ಭಯೋತ್ಪಾದಕರಿಗೆ ಕಠಿಣವಾದ ಶಿಕ್ಷೆಯಾಗಬೇಕು. ನಮಗೆ ಹಿಂದುತ್ವದ ಹೆಸರಲ್ಲಿ ಸುಳ್ಳು ಹೇಳುವವರು ಮನುವಾದ ಮಾಡುವವರನ್ನು ಕಂಡರೆ ಕೋಪ. ನಾವು ಮನುಷ್ಯರನ್ನು ಪ್ರೀತಿಸುವ ಜನ, ಹಿಂದೂ, ಕ್ರೈಸ್ತ, ಮುಸ್ಲಿಂ ಯಾವ ಧರ್ಮದ ಮನುಷ್ಯರಿದ್ದರೂ ಪ್ರೀತಿಸುತ್ತೇವೆ ಎಂದೂ ಉಡುಪಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನು ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಸಲು ರಣತಂತ್ರ: ದಲಿತ ಮತದಾರರ ಕರಪತ್ರ ಅಭಿಯಾನ

ಅಲ್ಲದೆ, ಉಡುಪಿಯಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ವೇಳೆ ಮಾತನಾಡಿದ ಮಾಜಿ ಸಿಎಂ, ಬಿಜೆಪಿಗೆ ಅಭಿವೃದ್ಧಿ ಕೆಲಸದಲ್ಲಿ ನಂಬಿಕೆ ಇಲ್ಲ. ಅಭಿವೃದ್ಧಿ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕಟೀಲ್ ಹೇಳಿದ್ದರು. ಹಾಗೆ, ಅಭಿವೃದ್ಧಿ, ಬಡವರ ಕಾರ್ಯಕ್ರಮದ ಬಗ್ಗೆಯೂ ಅವರಿಗೆ ಆಸಕ್ತಿ ಇಲ್ಲ. ಬಿಜೆಪಿಯಿಂದ ಕರಾವಳಿ, ಕರ್ನಾಟಕ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಹಾಗೆ, ಅಮಿತ್ ಶಾ ಹಳೆಯ ಮೈಸುರು ಭಾಗದ ಆಪರೇಷನ್‌ ಎಂದ ಕೂಡಲೇ ಆಪರೇಷನ್ ಆಗಿಬಿಡುತ್ತಾ ಎಂದೂ ಉಡುಪಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬಾಯಲ್ಲಿ ಹೇಳಿದ್ದೆಲ್ಲ ಆಗಿ ಬಿಡಲು ಸಾಧ್ಯವೇ..? ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಎಷ್ಟು ಬಾರಿ ಹೋದರು, ಅಲ್ಲಿ ಏನಾಯ್ತು? ಮಮತಾ ಬ್ಯಾನರ್ಜಿಯನ್ನು ಅಧಿಕಾರಿಂದ ಕೆಳಗಿಳಿಸಲು ಸಾಧ್ಯವಾಯಿತಾ? ಹಾಗೆ, ಕರ್ನಾಟಕಕ್ಕೆ ಬಂದರೂ ಅಮಿತ್ ಶಾಗೆ ಅದೇ ಗತಿ ಎಂದೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಭವಿಷ್ಯ ನುಡಿದಿದ್ದಾರೆ. 

ಇದನ್ನೂ ಓದಿ: Praja Dhwani Yatre: ಸಿದ್ದರಾಮಯ್ಯ ಹೊಗಳುವ ಹಾಡನ್ನು ಹಾಡದಂತೆ ತಡೆದ ಡಿಕೆ ಸುರೇಶ್!

ಈ ಮಧ್ಯೆ, ಡಿ ಪಾರ್ಟಿ, ಎಸ್ ಪಾರ್ಟಿ ಎಂಬ ಸಚಿವ ಆರ್. ಅಶೋಕ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ಎಸ್ ಪಾರ್ಟಿ, ಡಿ ಪಾರ್ಟಿ ಇದೆಲ್ಲಾ ಸುಮ್ಮನೆ ಹುಟ್ಟು ಹಾಕಿದ ಸುಳ್ಳು. ಶಾಸಕರಿಗೆ 500, 600 ಕೋಟಿ ಕೊಡೋದು ಎಂದರೆ ನಂಬಲು ಸಾಧ್ಯವಿಲ್ಲ. ಇದೆಲ್ಲ ಸುಳ್ಳು.. ಬರೀ ಸುಳ್ಳು. ಯತ್ನಾಳ್ ಮೇಲೆ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ..? ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ..? ಜೆ.ಪಿ. ನಡ್ಡಾ ಕಾರ್ಯಕ್ರಮಕ್ಕೆ ಹೋಗಿಲ್ಲ ಯಾಕೆ? ಅಶೋಕ್ ಹೇಳಿಬಿಟ್ಟ ಕೂಡಲೆ ಗುಂಪುಗಾರಿಕೆ ಆಗಲು ಸಾಧ್ಯವೇ..? ನಾವು ರಾಜ್ಯದಲ್ಲಿ ಮಿನಿಮಂ 130 ಮ್ಯಾಕ್ಸಿಮಮ್ 150 ಸೀಟ್ ಗೆಲ್ಲುತ್ತೇವೆ. ಉಡುಪಿ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು 
ಉಡುಪಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಹಾಗೆ, ಬಿಜೆಪಿಯವರು ಒಮ್ಮೆ ಗೆದ್ದರೆ ಅದೇ ಮತ್ತೆ ರಿಪೀಟ್ ಆಗುತ್ತಾ..? ನಮಗೆ ಕುರ್ಚಿ ಮೇಲೆ ಆಸೆ ಅಂತಾರೆ. ಇವರಿಗೆ ಮತ್ತೆ ಯಾವುದರ ಮೇಲೆ ಆಸೆ. ಬಿಟ್ಟುಬಿಡಿ ಹಾಗಾದರೆ ಕುರ್ಚಿ ಆಸೆಯನ್ನು ಮಗನನ್ನು ತೆಗೆದುಕೊಂಡು ಹೋಗಿ ಕಾರ್ಯದರ್ಶಿಯಾಗಿ ಮಾಡಿದ್ದೀರಿ. ಈಗ ನಮಗೆ ಕುರ್ಚಿ ಮೇಲೆ ಆಸೆ ಅಂತ ಹೇಳುತ್ತೀರಿ. ಇವರಿಗೆ ಯಾವುದರ ಮೇಲೆ ಆಸೆ ಇದೆ ಹಾಗಾದ್ರೆ ಎಂದೂ ಉಡುಪಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. 

ಇದನ್ನೂ ಓದಿ: ಎಲ್ಲರೂ ಒಂದಾಗಿ ಬದುಕಬೇಕೆಂಬ ನೀತಿ ಹೇಳುವುದೇ ಧರ್ಮ: ಸಿದ್ದರಾಮಯ್ಯ

ಇನ್ನು, ನಾನು ಕೋಲಾರದಿಂದಲೇ ಸ್ಪರ್ಧೆ ಎಂದು ತೀರ್ಮಾನ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್  ಏನು ಹೇಳುತ್ತಾರೆ ಅದರಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದೂ ಉಡುಪಿಯ ಕಾಂಗ್ರೆಸ್ ಪ್ರಜಾದ್ವನಿ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮಾಜಿ ಸಿ.ಎಂ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ರಾಜ್ಯ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಅನೇಕರು ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು, ಮತದಾರರು ಭಾಗಿಯಾಗಿದ್ದು, ಲಯನ್ಸ್ ಸರ್ಕಲ್ ನಿಂದ ಬಸ್‌ನಲ್ಲಿ ಮೆರವಣಿಗೆ ಮೂಲಕ ಕಾಂಗ್ರೆಸ್ ನಾಯಕರು ಬಂದಿದ್ದಾರೆ. 

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದುಗಾಗಿ ಮನೆ ಹುಡುಕಾಟ: ಇತ್ತ ಟಗರು ಬೇಟೆಗೆ ಕೇಸರಿ ಖೆಡ್ಡಾ

click me!