
ಶಿವಮೊಗ್ಗ (ಅ.10) : ಹಲವು ತೊಡಕುಗಳಿಂದ ಮುಂದೂಡುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಮತ್ತೊಮ್ಮೆ ದಿನಾಂಕ ನಿಗದಿಯಾಗಿದೆ. ಮೇಯರ್ ಮೀಸಲಾತಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ, ಮೇಯರ್, ಉಪಮೇಯರ್ ಚುನಾವಣೆಗೆ ಅ.28ರಂದು ಚುನಾವಣೆ ನಡೆಸುವಂತೆ ದಿನಾಂಕ ನಿಗದಿಪಡಿಸಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧಿಸೂಚನೆ ಹೊರಡಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕಡತ ವಿಲೇವಾರಿಗೆ ಡಿಜಿಫೈಲ್ ತಂತ್ರಾಂಶ ಅಳವಡಿಕೆ
ಅ.28ರಂದು ಮಧ್ಯಾಹ್ನ 12ರಿಂದ 1ರ ವರೆಗೆ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಪಾಲಿಕೆ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿದೆ. ನಾಮಪತ್ರಗಳ ಪರಿಶೀಲನೆ, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶವಿರಲಿದೆ. ಸದಸ್ಯರು ಕೈಎತ್ತುವ ಮೂಲಕ ಮತದಾನ ಮಾಡಬಹುದು.
ಹಿನ್ನೆಲೆ:
ಸರ್ಕಾರ ಮೀಸಲಾತಿ ನಿಗದಿಪಡಿಸುವ ಪೂರ್ವದಲ್ಲೇ ಹೈಕೋರ್ಟ್ ಮೊರೆ ಹೋಗಿದ್ದ ನಗರ ಪಾಲಿಕೆ ಸದಸ್ಯ ನಾಗರಾಜ್. ಪ್ರಜಾಪ್ರಭುತ್ವದಡಿ ಮೀಸಲು ಹಂಚಿಕೆ ಎಲ್ಲ ಜಾತಿ, ಧರ್ಮಗಳಿಗೆ ಅನ್ವಯವಾಗುವಂತೆ ಇರಬೇಕು. ಆದರೆ, ಪರಿಶಿಷ್ಟ ಪಂಗಡಕ್ಕೆ ಇದುವರೆಗೆ ಮೇಯರ್ ಸ್ಥಾನ ಸಿಕ್ಕಿಲ್ಲ. ಮೇಯರ್ ಸ್ಥಾನವನ್ನು ಎಸ್ಟಿಗೆ ಮೀಸಲಿರಿಸಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿದ್ದರು. ಆದರೆ ಈ ಅರ್ಜಿ ವಿಚಾರಣೆ ಹಂತದಲ್ಲಿದ್ದಾಗ ಸರ್ಕಾರ ಮೇಯರ್ ಸ್ಥಾನ ಬಿಸಿಎಂ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಅಧಿಸೂಚನೆ ಹೊರಡಿಸಿತ್ತು. ಸರ್ಕಾರ ಮೀಸಲಾತಿ ಮರು ನಿಗದಿ ಪಡಿಸಿ ಆದೇಶ ಮಾಡಿದ ಮರುದಿನವೇ ನಾಗರಾಜ್ ಅವರ ಅರ್ಜಿ ವಿಚಾರಣಿಗೆ ಬಂದಿತ್ತು. ಹೈಕೋರ್ಟ್ ಚುನಾವಣಿಗೆ ಅಧಿಸೂಚನೆ ಹೊರಡಿಸದಂತೆ ನಿರ್ದೇಶನ ನೀಡಿತ್ತು.
ರಾಜ್ಯ ಸರ್ಕಾರ ಮೀಸಲಾತಿಗೆ ನಿಗದಿಪಡಿಸಿದ್ದನ್ನು ಸಮರ್ಥನೆ ಮಾಡಿಕೊಂಡು ಪೂರಕ ದಾಖಲೆಗಳನ್ನು ಒದಗಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಅಧಿಸೂಚನೆಗೆ ನೀಡಿದ್ದ ತಡೆಯಾಜ್ಞೆಯನ್ನು ಹಿಂತೆಗೆದುಕೊಂಡಿತ್ತು. ಹೀಗಾಗಿ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಮತ್ತೆ ಅಧಿಸೂಚನೆ ಹೊರಡಿಸಿದ ಪ್ರಾದೇಶಿಕ ಆಯುಕ್ತರು. ಮೇಯರ್ ಸ್ಥಾನ ಎಸ್ಸಿಗೆ ಮೀಸಲು ಆಗಿದ್ದರೆ, ಉಪಮೇಯರ್ ಸ್ಥಾನ ಹಿಂದುಳಿದ ಎ ವರ್ಗದ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ.
ಹೈಕೋರ್ಟ್ ಮಧ್ಯಂತರ ಆದೇಶ: Shivamogga ಪಾಲಿಕೆ ಚುನಾವಣೆ ಮುಂದೂಡಿಕೆ
ಬಿಜೆಪಿಗೆ ಸಂಪೂರ್ಣ ಬಹುಮತ ಇರುವ ನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಎಸ್ಸಿಗೆ ಮೀಸಲು ಹಿನ್ನೆಲೆ ಶಾಂತಿ ನಗರ ವಾರ್ಡ್ನ ಧೀರರಾಜ್ ಹೊನ್ನವಿಲೆ ಹಾಗೂ ಗುಡೇಕಲ್ ವಾರ್ಡ್ ನ ಶಿವಕುಮಾರ್ ಈ ಸ್ಥಾನಕ್ಕೆ ಅರ್ಹರಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಹಿರಿಯ ಸದಸ್ಯೆ ಲಕ್ಷ್ಮೀ ಶಂಕರನಾಯ್ಕ್, ಕಲ್ಪನಾ ರಮೇಶ್, ಆರತಿ ಪ್ರಕಾಶ್, ಭಾನುಮತಿ ವಿನೋದ್ ಶೇಟ್ ಸೇರಿದಂತೆ 6 ಸದಸ್ಯೆಯರು ಅರ್ಹರಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಯಾರಾಗಲಿದ್ದಾರೆ ಕಾದುನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.